
ಮಡಿಕೇರಿ, : ಮುಂಗಾರು ಆರಂಭದ ಬಳಿಕ ಜಿಲ್ಲೆಯಲ್ಲಿ ಒಂದೆರಡು ದಿನಗಳಲ್ಲಿ ಭಾರೀ ರಭಸತೋರಿ ನಂತರದಲ್ಲಿ ತುಸು ಇಳಿಮುಖವಾದಂತಿದ್ದ ಮಳೆ ಇದೀಗ ತನ್ನ ನೈಜ ಅಬ್ಬರ ತೋರುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ರಭಸ ಹೆಚ್ಚಾಗುತ್ತಿದೆ. ಇದೀಗ ಧಾರಾಕಾರ ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಹೆಚ್ಚಾಗುತ್ತಿದ್ದು, ಇದೀಗ ಕೊಡಗಿನಲ್ಲಿ ಮಳೆಗಾಲದ ಆತಂಕವೂ ಸೃಷ್ಟಿಯಾಗುತ್ತಿದೆ.
ಶುಕ್ರವಾರ ಅಪರಾಹ್ನದಿಂದಲೇ ಮಳೆಯ ತೀವ್ರತೆ ಕಂಡು ಬರುತ್ತಿದೆ. ಶನಿವಾರವೂ ಸಂಜೆಯ ಬಳಿಕ ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದು, ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಗಾಳಿ – ಮಳೆಯ ರಭಸಕ್ಕೆ ಕೆಲವೆಡೆಗಳಲ್ಲಿ ಅನಾಹುತಗಳೂ ಸಂಭವಿಸಿರುವ ಕುರಿತು ವರದಿಯಾಗಿದೆ. ಧಾರಾಕಾರ ಮಳೆಯಿಂದಾಗಿ ನದಿ – ತೋಡು – ತೊರೆಗಳಲ್ಲಿ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಪ್ರವಾಹದ ಆತಂಕವೂ ಎದುರಾಗುವ ಸಾಧ್ಯತೆಗಳಿವೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ವ್ಯಾಪ್ತಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಸೂಚನೆಯನ್ನೂ ಕಾವೇರಿ ನೀರಾವರಿ ನಿಗಮದ ಮೂಲಕ ನೀಡಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 3 ಇಂಚು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 2.25 ಇಂಚು, ವೀರಾಜಪೇಟೆ 2.25 , ಪೊನ್ನಂಪೇಟೆ 3.11, ಸೋಮವಾರಪೇಟೆ 2.1 ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ 1.5 ಇಂಚು ಮಳೆಯಾಗಿದೆ.
ಧಾರಾಕಾರ ಮಳೆಯಿಂದಾಗಿ ಹಲವೆಡೆಗಳಲ್ಲಿ ಹಾನಿಗಳು ಸಂಭವಿಸಿವೆ. ಕಣಿವೆ ಅತ್ತೂರು ಭಾಗದಲ್ಲಿ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿರುವುದು, ಮೇಕೇರಿ ಗ್ರಾಮದಲ್ಲಿ ಮನೆಗೋಡೆ ಕುಸಿತ, ಮಡಿಕೇರಿ ಎಫ್ಎಂಸಿ ಕಾಲೇಜು ಹಿಂಭಾಗ ವಿದ್ಯುತ್ ಕಂಬಗಳು ಧರೆಗುರುಳಿರುವುದು ಸೇರಿದಂತೆ ಜಿಲ್ಲೆಯ ಹಲವಾರು ವಿಭಾಗಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ.
ಗಾಳಿ – ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಕುರಿತು ಸೆಸ್ಕ್ಗೆ ಮಾಹಿತಿ ಬರುತ್ತಿದ್ದು, ಅಲ್ಲಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿರುವುದಾಗಿ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ ಅವರು ತಿಳಿಸಿದ್ದಾರೆ. ಭಾನುವಾರವಾಗಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೆ, ವರದಿಯಾಗಿರುವ ಕಡೆಗಳಲ್ಲಿ ಇಲಾಖಾ ಸಿಬ್ಬಂದಿಗಳು ಗಾಳಿ – ಮಳೆಯ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲೂ ಮರ ಬಿದ್ದಿರುವುದು, ತಂತಿಗಳು ತುಂಡರಿಸಿ ಬಿದ್ದಿರುವುದು, ಟ್ರಾನ್ಸ್ಫಾರ್ಮರ್ ಹಾನಿಗೀಡಾಗಿರುವಂತಹ ಪ್ರಕರಣಗಳು ನಡೆದಿವೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಗಾಳಿಬೀಡು ರಸ್ತೆಯ ಎಫ್ಎಂಸಿ ಕಾಲೇಜು ಬಳಿ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದು, ವಿದ್ಯುತ್ ಟ್ರಾನ್ಸ್ಫಾರ್ಮರ್ ಧರೆಗುರುಳಿದೆ. ನಗರ ವ್ಯಾಪ್ತಿಯಲ್ಲಿ ಒಂದು ಕಂಬ ಉರುಳಿ ಬಿದ್ದಿದೆ. ಕುಂಡಾಮೇಸ್ತಿç ಬಳಿ, ಜಿಲ್ಲಾ ಕಾರಾಗೃಹದ ಬಳಿ ಕೂಡ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮಕ್ಕಂದೂರು – ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಐದು ಕಂಬಗಳಿಗೆ ಹಾನಿಯಾಗಿದೆ. ಗಾಳಿಗೆ ಎಲ್ಲಾ ಕಡೆಗಳಲ್ಲೂ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗುತ್ತಿದೆ. ಎಲ್ಲವನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್ ಮಾಹಿತಿ ನೀಡಿದ್ದಾರೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿರುತ್ತದೆ. ಭಾನುವಾರದಿಂದ ಜಲಾಶಯಕ್ಕೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಪ್ರಕಟಣೆ ಮೂಲಕ ಕೋರಿದ್ದಾರೆ.
ಕೊಡಗಿನಾದ್ಯಂತ ಸೋಮವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.