ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೊಂದಿಗೆ ಸಂವಾದ ನಡೆಸಿದ್ದು, ಪುಲ್ವಾಮ ದಾಳಿ, ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ , ಮಣಿಪುರ ಹಿಂಸಾಚಾರ, ಹಾಗೂ ಅದಾನಿ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಮಲಿಕ್ ಅವರೊಂದಿಗಿನ ಸಂವಾದವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ ಮಲಿಕ್ ಅವರ ರಾಜಕೀಯ ಜೀವನದ ಬಗ್ಗೆ ಕೇಳುತ್ತಾರೆ.
ಕೇಂದ್ರಾಡಳಿತ ಪ್ರದೇಶದ ಬಗ್ಗೆ ಅಭಿಪ್ರಾಯವನ್ನು ಕೇಳಿದಾಗ, “ಜಮ್ಮು ಮತ್ತು ಕಾಶ್ಮೀರವನ್ನು ಒಂದು ಪಡೆ ಅಥವಾ ಸೇನೆಯಿಂದ ನಿರ್ವಹಿಸಲು ಸಾಧ್ಯವಿಲ್ಲ” ಎಂದು ಮಲಿಕ್ ಹೇಳಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಜನರ ರಾಜ್ಯತ್ವವನ್ನು ತಕ್ಷಣವೇ ಹಿಂದಿರುಗಿಸಬೇಕು. ರಾಜ್ಯತ್ವವನ್ನು ಕಸಿದುಕೊಂಡು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದಷ್ಟು ನೋವು ಆರ್ಟಿಕಲ್ 370 ರದ್ದು ಪಡಿಸಿದಾಗಲೂ ಅವರಿಗೆ ಆಗಲಿಲ್ಲ” ಎಂದು ಮಲಿಕ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕುರಿತು ಮಾತನಾಡಿದ ಮಲಿಕ್, “ಕಣಿವೆಯಲ್ಲಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಸಾಕಷ್ಟು ಘಟನೆಗಳು ಎಲ್ಲೆಡೆ ನಡೆಯುತ್ತಿವೆ” ಎಂದು ಹೇಳಿದರು.
ಪುಲ್ವಾಮಾದಲ್ಲಿ ಸತ್ಯಪಾಲ್ ಮಲಿಕ್ ಹೇಳಿದ್ದೇನು?
ಪುಲ್ವಾಮಾ ದಾಳಿಯನ್ನು ಸರ್ಕಾರ ತನ್ನ ರಾಜಕೀಯ ಪರವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ ಮಲಿಕ್, ಪುಲ್ವಾಮಾದಲ್ಲಿನ ಎಚ್ಚರಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ರಾಹುಲ್ ಗಾಂಧಿಗೆ ಹೇಳಿದ್ದಾರೆ.
“ಅವರು ಅದನ್ನು (ಪುಲ್ವಾಮ ದಾಳಿಯನ್ನು) ಮಾಡಿದರು ಎಂದು ನಾನು ಹೇಳುವುದಿಲ್ಲ. ಆದರೆ ಅವರು ಅದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ನೀವು ಮತ ಚಲಾಯಿಸಲು ಹೋದಾಗ ಪುಲ್ವಾಮಾದಲ್ಲಿ ಮಾಡಿದ ತ್ಯಾಗವನ್ನು ನೀವು ನೆನಪಿಸಿಕೊಳ್ಳಬೇಕು ಎಂದು ನಾಯಕರು ಹೇಳುವ ಭಾಷಣಗಳಿವೆ.” ಎಂದು ಮಲಿಕ್ ಹೇಳಿದ್ದಾರೆ.
“ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದ ಸ್ಫೋಟಕ ತುಂಬಿದ ವಾಹನವು ಸುಮಾರು 10 ದಿನಗಳಿಂದ ಈ ಪ್ರದೇಶದಲ್ಲಿ ತಿರುಗಾಡುತ್ತಿತ್ತು. ಇದನ್ನು ಪರಿಶೀಲಿಸಲು ಯಾರೂ ಇರಲಿಲ್ಲ. ವಾಹನದ ಚಾಲಕ ಮತ್ತು ಮಾಲೀಕರಿಗೆ ಭಯೋತ್ಪಾದಕ ಹಿನ್ನೆಲೆಗಳಿವೆ. ಅವರನ್ನು ಬಂಧಿಸಿ ಹಲವು ಬಾರಿ ಬಿಡುಗಡೆ ಮಾಡಲಾಗಿದ್ದರೂ ಗುಪ್ತಚರ ದಳ ಇಲಾಖೆ ಅವರ ಮೇಲೆ ಕಣ್ಣಿಟ್ಟಿರಲಿಲ್ಲ” ಎಂದು ಮಲಿಕ್ ಆರೋಪಿಸಿದ್ದಾರೆ.
ಪುಲ್ವಾಮಾ ದಾಳಿಯ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಘಟನೆಯ ಬಗ್ಗೆ ತಿಳಿದ ತಕ್ಷಣ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆಗ ನನ್ನನ್ನು ಕೊಠಡಿಯಲ್ಲಿ ಬಂಧಿಸಲಾಯಿತು. ಪ್ರಧಾನಿ ಮೋದಿ ಅಲ್ಲಿದ್ದರು. ಕೊಠಡಿಯಿಂದ ಹೊರಬರಲು ನಾನು ಹೋರಾಡಬೇಕಾಯಿತು. ಇದು ತುಂಬಾ ಅಸಹ್ಯಕರವಾಗಿತ್ತು ಎಂದು ಹೇಳಿದರು.
‘ಅದಾನಿ ಬಳಿ ಎಲ್ಲಾ ಸರ್ಕಾರಿ ಹಣವಿದೆ’
ಅದಾನಿ ಬೃಹತ್ ಗೋಡೌನ್ಗಳನ್ನು ನಿರ್ಮಿಸಿ, ಬೆಳೆಗಳನ್ನು ಖರೀದಿಸಿದ ಕಾರಣ ಎಂಎಸ್ಪಿ ಮೇಲಿನ ಭರವಸೆಯನ್ನು ಉಳಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಮಲಿಕ್ ಹೇಳಿದ್ದಾರೆ
“ಅದಾನಿ ಹೆಸರು ಈಗ ಸರ್ಕಾರದೊಂದಿಗೆ ಅಂಟಿಕೊಂಡಿದೆ. ಪ್ರತಿ ಹಳ್ಳಿಯಲ್ಲೂ ಅದರ ಬಗ್ಗೆ ಮಾತನಾಡಲಾಗುತ್ತಿದೆ. ಜನರು ಅದಾನಿ ಬಳಿ ಎಲ್ಲಾ ಸರ್ಕಾರಿ ಹಣವಿದೆ ಎಂದು ಹೇಳುತ್ತಾರೆ” ಎಂದು ಮಲಿಕ್ ಹೇಳಿದರು.
‘ಮಣಿಪುರ ಹಿಂಸಾಚಾರ ಸರ್ಕಾರದ ವೈಫಲ್ಯ’
ಮಣಿಪುರ ಹಿಂಸಾಚಾರದ ಬಗ್ಗೆ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ ಮಲಿಕ್, ಕಲಹ ಪೀಡಿತ ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಆರೋಪಿಸಿದರು.
“ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಅವರು ಇನ್ನೂ ಏನನ್ನೂ ಮಾಡುತ್ತಿಲ್ಲ” ಎಂದು ಮಲಿಕ್ ಹೇಳಿದರು.
ಇದು ಆರಂಭವಾಗಿ ಆರು ತಿಂಗಳಾಗಿದೆ, ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ನಾನು ಬರೆದು ಕೊಡುತ್ತೇನೆ ಎಂದು ಅವರು ಹೇಳಿದರು.