ಭಾರತದಲ್ಲಿ ಈಗ ಜಾರಿಯಲ್ಲಿರುವ IPC (Indian Penal Code), CrPC (Code of Criminal Procedure) Evidence Act (Indian Evidence Act, 1872) ಬದಲಾವಣೆ ಮಾಡಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮಸೂದೆ 2023 ಹಾಗು ಭಾರತೀಯ ಸಾಕ್ಷ್ಯ ಮಸೂದೆ ಎನ್ನುವ ಮೂರು ಕಾನೂನುಗಳಿಗೆ ಲೋಕಸಭೆ ಒಪ್ಪಿಗೆ ನೀಡಿದೆ. ಬ್ರಿಟೀಷ್ ಕಾಲದ ಕಾನೂನುಗಳನ್ನು ಬದಲಾವಣೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಬಿಜೆಪಿ ಸರ್ಕಾರ ಹಿಂದಿನ ಸಂಸತ್ ಅಧಿವೇಶನದ ವೇಳೆಯಲ್ಲೇ ಮಾಹಿತಿಯನ್ನೂ ನೀಡಿತ್ತು. ಆದರೆ ವಿರೋಧ ಪಕ್ಷದ ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡಿ ಒಪ್ಪಿಗೆ ಪಡೆಯುವ ಅಗತ್ಯ ಏನಿತ್ತು ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಆಗಿ ಉಳಿದುಕೊಳ್ತಿದೆ. ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿರುವ ಬಿಜೆಪಿ ಎಲ್ಲರ ಜೊತೆಗೆ ಚರ್ಚೆ ನಡೆಸಿಯೇ ಒಪ್ಪಿಗೆ ಪಡೆಯುವ ಶಕ್ತಿ ಇದ್ದಾಗಲೂ ಸದಸ್ಯರನ್ನು ಹೊರಗಿಟ್ಟಿದ್ದು ನಾಚಿಕೆಗೇಡು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ವಿರುದ್ಧ ಅಮಿತ್ ಷಾ ಸೇಡಿನ ಮಾತು..!
ಸಂಸತ್ ಭವನದಲ್ಲಿ ಆಗಿರುವ ಭದ್ರತಾ ವೈಫಲ್ಯದ ಬಗ್ಗೆ ಮೌನಕ್ಕೆ ಶರಣಾಗಿದ್ದ ಅಮಿತ್ ಷಾ, ಸದನದಿಂದಲೂ ಗೈರು ಹಾಜರಾಗಿದ್ದರು. ಆದರೆ ಬುಧವಾರ ಏಕಾಏಕಿ ಸದನಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರು ಹೊಸ ಕಾನೂನು ವಿಧೇಯಕಗಳನ್ನು ಸದನದಲ್ಲಿ ಮಂಡಿಸಿದರು. ಅದಕ್ಕೂ ಮೊದಲು ಮಾತನಾಡಿದ ಅಮಿತ್ ಷಾ, ಮೋದಿ ನೇತೃತ್ವದಲ್ಲಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಹೊಸ ಕಾನೂನು ಮಂಡಿಸಲಾಗ್ತಿದೆ. 150 ವರ್ಷಗಳ ಬಳಿಕ 3 ಹೊಸ ಮಸೂದೆಗಳನ್ನ ತರುತ್ತಿದ್ದೇವೆ. ಕೆಲವರು ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದರು. ನೀವು ಭಾರತೀಯರಾಗಿ ನಿಮ್ಮ ಮನಸ್ಸನ್ನು ಇಟ್ಟುಕೊಂಡರೆ, ನಿಮಗೆ ಅರ್ಥವಾಗುತ್ತದೆ ಎಂದು ನಾನು ಅವರಿಗೆ ಹೇಳುತ್ತೇನೆ. ಆದರೆ ನಿಮ್ಮ ಮನಸ್ಸು ಇಟಲಿಯದ್ದಾಗಿದ್ರೆ ಏನೂ ಅರ್ಥ ಆಗಲ್ಲ ಎಂದು ಸೋನಿಯಾ ಹಾಗು ರಾಹುಲ್ ಗಾಂಧಿಗೆ ಕುಟುಕಿದರು.
ಉತ್ತರ ಕೊಡದೆ ಮೊಂಡಾಟ ಆಡುವುದು ಸರಿಯಲ್ಲ..!
ಸಂಸತ್ ಕಲಾಪದಿಂದ ಲೋಕಸಭಾ ಸದಸ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಅಮಿತ್ ಷಾ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಸಮರ್ಪಕ ಚರ್ಚೆ ನಡೆಯದಂತೆ ನೋಡಿಕೊಂಡಿರುವ ಆಡಳಿತ ಪಕ್ಷ ಬಿಜೆಪಿ ಮೂರು ಹೊಸ ಕಾನೂನು ವಿಧೇಯಕಗಳನ್ನ ಮಂಡಿಸಿ ಅಂಗೀಕಾರವನ್ನೂ ಪಡೆದಿದೆ. ಈ ರೀತಿಯ ಹಿಟ್ಲರ್ ಸಂಸ್ಕೃತಿ ದೇಶದಲ್ಲಿ ಹೆಚ್ಚಾಗುತ್ತಿದೆ ಎನ್ನುವ ಕಳವಳವನ್ನು ಹಿರಿಯ ರಾಜಕಾರಣಿಗಳು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ರಾದ್ದಾಂತ ಮಾಡುವ ಬದಲು ವಿರೋಧ ಪಕ್ಷಗಳ ಆಗ್ರಹದಂತೆ ಪ್ರಧಾನಿ ಹಾಗು ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಮಾತನಾಡಿ, ಆಗಿರುವ ತಪ್ಪನ್ನು ತಿದ್ದಿಕೊಳ್ಳೋಣ, ಮುಂದ್ರೆ ಭದ್ರತೆಗೆ ಮತ್ತಷ್ಟು ಜಾಗ್ರತೆ ವಹಿಸಲಾಗುವುದು ಎಂದಿದ್ದರೆ ವಿರೋಧ ಪಕ್ಷಗಳಿಗೆ ಹೋರಾಟಕ್ಕೆ ಹಾದಿ ಎಲ್ಲಿರುತ್ತಿತ್ತು..? ಎನ್ನುವ ಮಾತುಗಳು ಸಾಮಾನ್ಯವಾಗಿದೆ.
3 ಹೊಸ ಕಾನೂನು ಜಾರಿಯಿಂದ ಲಾಭವೇನು..?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ 3 ಹೊಸ ಕಾನೂನುಗಳಿಂದ ಜನರಿಗೆ ಏನು ಲಾಭ..? ಎನ್ನುವುದು ಎಲ್ಲರ ಎದುರಿಗೆ ಇರುವ ಪ್ರಶ್ನೆ. ಈಗಾಗಲೇ ಇದ್ದ ಕಾನೂನುಗಳನ್ನೇ ಬೇರೊಂದು ಹೆಸರಿನ ಮೂಲಕ ತರುತ್ತಿದ್ದಾರೆ. ಜೊತೆಗೆ ಸಣ್ಣಪುಟ್ಟ ಬದಲಾವಣೆಯನ್ನೂ ಮಾಡಲಾಗಿದೆ. ಈಗ ಇರುವ ಸೆಕ್ಷನ್ಗಳನ್ನು ಬದಲಾವಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್ ಕಲಾಪಗಳಲ್ಲಿ ಬದಲಾವಣೆ ಆಗಲಿದೆ. ಇನ್ನು ಹಲವಾರು ಅಪರಾಧಕ್ಕೆ ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ದೇಶದ್ರೋಹ, ಪ್ರತ್ಯೇಕತಾವಾದ, ದಂಗೆ, ಸಾರ್ವಭೌಮತ್ವ, ಏಕತೆ, ಸಮಗ್ರತೆ ರಕ್ಷಣೆಗೆ ಒತ್ತು ನೀಡಲಾಗಿದೆ. ಅಪ್ರಾಪ್ತರ ಮೇಲೆ ಗ್ಯಾಂಗ್ ರೇಪ್, ಗಲಭೆ, ದಂಗೆಗಳಾದ್ರೆ ಮರಣ ದಂಡನೆಗೆ ಅವಕಾಶವಿದೆ. ಕೋರ್ಟ್ ವಿಚಾರಣೆ 30 ದಿನದಲ್ಲಿ ಮುಗಿಸಿ ತೀರ್ಪು ನೀಡಬೇಕು ಎನ್ನುವ ಸಮಯ ನಿಗದಿಯಾಗಿದೆ. ದೇಶಕ್ಕೆ ಅನುಕೂಲ ಆಗುವ ಕಾನೂನುಗಳನ್ನು ಸಮಗ್ರವಾಗಿ ಚರ್ಚಿಸಿ ಜಾರಿ ಮಾಡಿದ್ದರೆ ಒಳ್ಳೆಯದಿತ್ತು ಅನ್ನೋದಷ್ಟೆ ನಮ್ಮ ಪ್ರಶ್ನೆ.
ಕೃಷ್ಣಮಣಿ