ಚಾಮರಾಜನಗರ ಜಿಲ್ಲೆಗೆ ಹೋಗುವು ಮೂಲಕ ನಮ್ಮ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ.ಬಹಳ ವರ್ಷಗಳಿಂದ ಅನಾವಶ್ಯಕವಾಗಿ ಒಂದು ಮೂಢನಂಬಿಕೆ ಉಳಿದುಕೊಂಡಿದೆ.
ಚಾಮರಾಜನಗರ: “ಚಾಮರಾಜನಗರಕ್ಕೆ ಬಂದರೆ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ” ಎನ್ನುವ ಮೂಲಕ ಗಡಿಜಿಲ್ಲೆಗೆ ಬಾರದ ಮುಖ್ಯಮಂತ್ರಿಗಳಿಗೆ ತಿವಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಪರೋಕ್ಷ ಟಾಂಗ್ ನೀಡಿದರು.
ಚಾಮರಾಜನಗರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಯಾರೋ ಸೃಷ್ಟಿಸಿದ ಮೂಢ ನಂಬಿಕೆಯಾಗಿದೆ. ಆದರೆ ಯಾರು ಯಾರು ಚಾಮರಾಜನಗರಕ್ಕೆ ಬಂದಿಲ್ಲ ಅವರಿಗೆ ಹೇಳುತ್ತೇನೆ. ಚಾಮರಾಜನಗರ ಜಿಲ್ಲೆಗೆ ಹೋಗುವು ಮೂಲಕ ನಮ್ಮ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ.ಬಹಳ ವರ್ಷಗಳಿಂದ ಅನಾವಶ್ಯಕವಾಗಿ ಒಂದು ಮೂಢನಂಬಿಕೆ ಉಳಿದುಕೊಂಡಿದೆ.
ಇಲ್ಲಿರುವವರು ಮುತ್ತಿನಂಥ ಜನ, ಇಲ್ಲಿನ ಜನರ ದರ್ಶನ ಮಾಡಿದರೆ ಅದು ಶುಭಸೂಚನೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೀವು ಯಾವಾಗಲೇ ಕರೆದರು, ನಾನು ಚಾಮರಾಜನಗರಕ್ಕೆ ಬರುತ್ತೇನೆ ಎಂದ ಬಸವರಾಜ ಬೊಮ್ಮಾಯಿ, ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರನ್ನು ಸ್ಮರಿಸಬೇಕಿದೆ. ಜಿಲ್ಲೆಗಳ ರಚನೆಯಾಗುವ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆ ಮಾಡುವಾಗ ಜೆ.ಎಚ್.ಪಟೇಲರು ಅತ್ಯಂತ ಸಂತೋಷದಿಂದ ಇದಕ್ಕೆ ಮುದ್ರೆ ಹಾಕಿದರು. ಹೀಗಾಗಿ ಅಧಿಕಾರ ಇದ್ದ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದವರನ್ನು ಸ್ಮರಿಸುವುದು ಮಾನವೀಯ ಧರ್ಮವಾಗಿದೆ. ಅವರ ಸೇವೆಯನ್ನು ಸ್ಮರಿಸುತ್ತಾ ಚಾಮರಾಜನಗರಕ್ಕೆ ಹಲವಾರು ಯೋಜನೆಗಳ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.