ಪತ್ರಕರ್ತೆ ಗೌರಿ ಲಂಕೇಶ್ (Gowri lankesh) ಹತ್ಯೆ ಪ್ರಕರಣದ ಎ 17 ಆರೋಪಿ ನವೀನ್ (A17 Naveen) ಎಂಬುವವರ ನಿವಾಸಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಭೇಟಿ ಕೊಟ್ಟಿದ್ದಾರೆ. ಅಲ್ಲದೇ ಅವರು ನನ್ನ ಸ್ನೇಹಿತರು ಎಂದು ಹೇಳಿಕೊಂಡಿರುವುದು ಕಾಂಗ್ರೆಸ್ ನಾಯಕರ ಕಣ್ಣನ್ನು ಕೆಂಪಾಗಿಸಿದೆ.
ಈ ಬಗ್ಗೆ ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh gundurao),ಕೊಲೆ ಆರೋಪಿಯ ಹೆಗಲ ಮೇಲೆ ಕೈ ಹಾಕಿರುವ ಫೋಟೋ ಪೋಸ್ಟ್ ಮಾಡಿ ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ಟೀಕಿಸಿದ್ದಾರೆ. ಮಾಜಿ ಸಂಸದರು ಸಮಾಜಕ್ಕೆ ಯಾವ ಸಂದೇಶ ರವಾನೆ ಮಾಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದರು.
ಈ ಬಗ್ಗೆ ರಿಯಾಕ್ಟ್ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ , ಆರೋಪಿಗೂ ಅಪರಾಧಿಗೂ ವ್ಯತ್ಯಾಸವಿದೆ. ಕಾಂಗ್ರೆಸ್ ನಾಯಕರು ತಿಳಿಗೇಡಿತನದ ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು. ನ್ಯಾಷನಲ್ ಹೆರಾಲ್ಡ್ (Nation herald) ಪ್ರಕರಣದಲ್ಲಿ ಸೋನಿಯಾ ಗಾಂಧಿ & ರಾಹುಲ್ ಗಾಂಧಿ ಇಬ್ಬರೂ ಆರೋಪಿಗಳೆ. ಕಾಂಗ್ರೆಸ್ ನಾಯಕರು ಏಕೆ ಅವರ ಕಾಲಿಗೆ ಬೀಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.