ಆನೇಕಲ್ : ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ಆನೇಕಲ್ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು , ನೀವು ಆರಿಸಿದ್ದೇ ಬೇರೆ ಸರ್ಕಾರ . ಆದರೆ ಆಡಳಿತ ಮಾಡಿದ್ದೇ ಬೇರೆ ಸರ್ಕಾರ. ಶಾಸಕರನ್ನು ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚಿಸಿದ ಈ ಸರ್ಕಾರ ಕಳ್ಳತನದ ಹೊರತು ಇನ್ನೇನು ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಭಾರತ್ ಜೋಡೋ ಯಾತ್ರೆ ಮೂಲಕ ಕರ್ನಾಟಕದಲ್ಲಿ ನಾನು 500ಕ್ಕೂ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದೇನೆ. ಇಲ್ಲಿನ ಕಾರ್ಮಿಕರು, ಮಹಿಳೆಯರು, ಯುವಕರ ಜೊತೆ ಹೆಜ್ಜೆ ಹಾಕಿದ್ದೇನೆ. ಈ ಸಂದರ್ಭದಲ್ಲಿ ನಿರುದ್ಯೋಗ , ಬೆಲೆ ಏರಿಕೆ ಬಗ್ಗೆ ಕೇಳಿದ್ದೇನೆ. ನೀವೆಲ್ಲ ಕರ್ನಾಟಕದಲ್ಲಿರುವ 40 ಪರ್ಸೆಂಟ್ ಸರ್ಕಾರದ ಬಗ್ಗೆ ಹೇಳಿದ್ದೀರಿ. ಭ್ರಷ್ಟಾಚಾರದಲ್ಲಿ ಈ ಸರ್ಕಾರ ವಿಶ್ವ ದಾಖಲೆಯನ್ನೇ ಮುರಿದಿದೆ ಎಂದಿದ್ದಾರೆ.
ಪಿಎಸ್ಐ, ಸಹಾಯಕ ಪ್ರಾದ್ಯಾಪಕರು, ಕಿರಿಯ ಇಂಜಿನಿಯರ್ ನೇಮಕಾತಿ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಮೈಸೂರ್ ಸ್ಯಾಂಡಲ್ ಹಗರಣದಲ್ಲಿ ಶಾಸಕರ ಪುತ್ರ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಶಾಸಕರೇ ಸಿಎಂ ಆಗಬೇಕು ಎಂದರೆ 2500 ಕೋಟಿ ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ. ಪ್ರಧಾನಿಗಳಿಗೂ ಈ ಎಲ್ಲಾ ಭ್ರಷ್ಟಾಚಾರದ ಬಗ್ಗೆ ತಿಳಿದಿದೆ ಎಂದು ಹೇಳಿದರು.
ಡಬಲ್ ಎಂಜಿನ್ ಸರ್ಕಾರ ಡಬಲ್ ದರೋಡೆ ಮಾಡಿದೆ. ಪ್ರಧಾನಿಮಂತ್ರಿಗಳೇ 40 ಪರ್ಸೆಂಟ್ ಕಮಿಷನ್ನಲ್ಲಿ ನಿಮಗೆಷ್ಟು ಸಿಕ್ಕಿದೆ..? ಯಾವ ಇಂಜಿನ್ಗೆ ಎಷ್ಟು ಪಾಲು ದೊರಕಿದೆ.ಲೋಕಸಭೆಯಲ್ಲಿ ನಿಮ್ಮನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನೇ ಅನರ್ಹಗೊಳಿಸಿದಿರಿ. ನಾನು ಭ್ರಷ್ಟಾಚಾರದ ಬಗ್ಗೆ ಕೇಳುತ್ತೇನೆಂದು ನನ್ನನ್ನು ಲೋಕಸಭೆಯಿಂದಲೇ ಹೊರಹಾಕಿದರು ಎಂದು ರಾಹುಲ್ ಗುಡುಗಿದ್ದಾರೆ.






