
ಕನ್ನಡ ಚಿಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಕೇಸ್ ದಾಖಲಾಗಿದ್ದು, ಮಹಿಳೆಯೊಬ್ಬರು ವಂಚನೆ ಆಗಿರುವ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಮಹಿಳೆ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದ್ದು, 2023ರಲ್ಲಿ ಮಹಿಳೆಗೆ ಪರಿಚಯವಾಗಿದ್ದ ಸೂರಪ್ಪ ಬಾಬು, ಶಿವರಾಜ್ ಕುಮಾರ್, ಗಣೇಶ್ ಜೊತೆ ಫಿಲ್ಮ್ ಮಾಡ್ತಿದ್ದೀನಿ ಎಂದು ಹಣ ಪಡೆದಿದ್ದರು ಎನ್ನಲಾಗಿದೆ.

ಚಿತ್ರ ನಿರ್ಮಾಣಕ್ಕೆ ಸಾಲ ಬೇಕೆಂದು ಕೇಳಿದ್ದ ಸೂರಪ್ಪ ಬಾಬು, ಹಂತ ಹಂತವಾಗಿ 92 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ವಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು, ಶಿವರಾಜ್ ಕುಮಾರ್ ಜೊತೆ ಫಿಲ್ಮ್ ಮಾಡುತ್ತಿಲ್ಲ ಎಂಬುದು ಗೊತ್ತಾಯ್ತು. ಹೀಗಾಗಿ ಹಣ ವಾಪಸ್ ಕೇಳಿದಾಗ 25 ಲಕ್ಷ ವಾಪಸ್ ನೀಡಿದ್ದರು. ಆದರೆ ಉಳಿದ ಹಣ ಕೇಳಿದಾಗ ಬೆದರಿಕೆ ಹಾಕಿದರು ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಸೂರಪ್ಪ ಬಾಬು ವಿರುದ್ಧ ದೂರು ನೀಡಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣದ ಬಗ್ಗೆ ದೂರುದಾರೆ ಲಕ್ಷ್ಮೀ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮ ಯಜಮಾನರ ಮೂಲಕ ನನಗೆ ಪರಿಚಯ ಆಗಿದ್ರು. 2023 ನವೆಂಬರ್ನಲ್ಲಿ 25 ಲಕ್ಷ ಆರ್ಟಿಜಿಎಸ್ ಮಾಡಿದ್ವಿ. ಮತ್ತೆ 25 ಲಕ್ಷ ಹಣ ಪೇ ಮಾಡಿದ್ವಿ. ಫೆಬ್ರವರಿಯಲ್ಲಿ ಮತ್ತೆ 5 ಲಕ್ಷ ಕ್ಯಾಶ್ ಪಡ್ಕೊಂಡಿದ್ರು. ಹೀಗೆ ಹಂತ ಹಂತವಾಗಿ ಲಕ್ಷಾಂತರ ಹಣ ಪೇ ಮಾಡಿದ್ವಿ. ಮೂವಿ ಸ್ಟಾರ್ಟ್ ಮಾಡೋದು ಸ್ಟಾಪ್ ಮಾಡಿದ್ರು. ಮತ್ತೆ ಬೇರೆ ಮೂವಿ ಮಾಡ್ತಿದ್ದಾರೆ ಅಂಥ ಗೊತ್ತಾಯಿತು. ದುಡ್ಡು ಕೇಳಿದಾಗ ಮೊದಲು 25 ಲಕ್ಷ ವಾಪಸ್ ಕೊಟ್ರು. ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿದ್ರು ಕೈಗೆ ಸಿಗ್ತಿರ್ಲಿಲ್ಲ. ಶಿವಣ್ಣ, ಗಣೇಶ್ ಆಕ್ಟ್ ಮಾಡ್ತಿದ್ದಾರೆ ಅಂಥ ಹೇಳಿದ್ರು. ಒಟ್ಟು 92 ಲಕ್ಷ 50 ಸಾವಿರ ಹಣವನ್ನ ನಾವು ಕೊಟ್ಟಿದ್ವಿ ಎಂದಿದ್ದಾರೆ.

ಸೂರಪ್ಪ ಬಾಬು ಕಡೆಯಿಂದ ಇನ್ನು 52 ಲಕ್ಷ ಹಣ ಬರೋದು ಬಾಕಿ ಇದೆ ಎಂದಿರುವ ದೂರುದಾರೆ ಲಕ್ಷ್ಮೀ, ಹಣ ಕೇಳಿದಾಗ ವಾಯ್ಸ್ ಮೆಸೇಜ್, ಮೆಸೇಜ್ ಅಷ್ಟೇ ಹಾಕ್ತಿದ್ರು. ಫೋನ್ನಲ್ಲಿ ಮಾತಾಡೋಕೆ ಸಿಗ್ತಿರ್ಲಿಲ್ಲ. ಈ ಬಗ್ಗೆ ಫಿಲಂ ಚೇಂಬರ್ಸ್ ಗೆ ಕಂಪ್ಲೇಂಟ್ ಕೊಡ್ತೀವಿ ಎಂದಿದ್ದಾರೆ. ಆದರೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ಆಗಿರುವ ಬಗ್ಗೆ ಚಿತ್ರ ನಿರ್ಮಾಪಕ ಸೂರಪ್ಪ ಬಾಬು ಇಲ್ಲೀವರೆಗು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮಗಳ ಸಂಪರ್ಕಕ್ಕೂ ಸಿಕ್ಕಿಲ್ಲ, ಪ್ರತಿಧ್ವನಿ ತಂಡ ಕೂಡ ಸೂರಪ್ಪ ಬಾಬು ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದು, ಕರೆಯನ್ನು ಸ್ವೀಕರಿಸುತ್ತಿಲ್ಲ.