ಸಚಿವ ಈಶ್ವರಪ್ಪ ಅಧಿಕಾರ ಉಳಿಸಿಕೊಳ್ಳಲು ಇನ್ನೆಷ್ಟು ಹಿಂದೂಗಳು ಬಲಿಯಾಗಬೇಕು? ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪ್ರಶ್ನಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಬಿಜೆಪಿ ನಾಯಕ ಈಶ್ವರಪ್ಪ ಶಾಸಕರಾಗಿ ಅಧಿಕಾರ ಉಳಿಸಿಕೊಳ್ಳಲು ಇನ್ನೆಷ್ಟು ಹಿಂದೂಗಳು ಬಲಿಯಾಗಬೇಕು? ಹಿಂದೂಗಳ ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕಬೇಕೆಂದು ಹೇಳಿ ಮತ ಹಾಕಿಸಿಕೊಂಡಿದ್ದಾರೆ. ಆದರೆ ಅವರೇ ಹೇಳಿಕೊಳ್ಳುವಂತೆ ಅವರ ಹಿಂಬಾಲಕನ ಹತ್ಯೆಯಾಗಿದೆ. ಇದೇನಾ ಇವರು ಮಾಡುವ ಹಿಂದೂಗಳ ರಕ್ಷಣೆ? ಹಿಂದೂಗಳಿಗೆ ರಕ್ಷಣೆ ನೀಡುತ್ತೇನೆ ಎಂದು ಬೊಬ್ಬಿಟ್ಟರೆ ಸಾಲದು ಎಂದು ಟೀಕಿಸಿದರು.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಮಾತ್ರ ಸಾಲದು. ಆತನ ಕೊಲೆ ಪ್ರಕರಣದ ಹಿಂದಿನ ಷಢ್ಯಂತ್ರ ಬಯಲಾಗಬೇಕು. ನಿಜಕ್ಕೂ ಯಾರ ಹುನ್ನಾರ ಆ ಕೃತ್ಯ ಎಂಬುದು ಹೊರಬರಬೇಕು ಎಂದು ಒತ್ತಾಯಿಸಿದ ಪ್ರಸನ್ನಕುಮಾರ್, ಹಾಗಾಗಿ, ಸತ್ಯ ಹೊರಬರಬೇಕಾದರೆ ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು. ಎನ್ಐಎ ತನಿಖೆಗೆ ಬಿಜೆಪಿ ಮುಖಂಡರೇ ಆಗ್ರಹಿಸಿದ್ದಾರೆ. ಇದು ಕೇವಲ ಹೇಳಿಕೆಯಾಗಬಾರದು. ನಿಜವಾದ ತನಿಖೆಯಾಗಿ ಆರೋಪಿಗಳ ಜೊತೆಗೆ ಇದರ ಹಿಂದಿನ ಶಕ್ತಿಗಳಿಗೂ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಹರ್ಷನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಹಾಗಾದರೆ ಗಲಾಟೆ ಮಾಡಿದವರನ್ನು ಪತ್ತೆ ಮಾಡಿದವರು ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ. ಸಚಿವರ ಪ್ರಚೋದನಕಾರಿ ಹೇಳಿಕೆಯ ಕುಮ್ಮಕ್ಕಿನಿಂದಲೇ ಕೆಲವರು ಗಲಭೆ ಎಬ್ಬಿಸಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರೆ. ಇದಕ್ಕೆಲ್ಲಾ ಈಶ್ವರಪ್ಪ ಅವರೇ ಕಾರಣ. ಈ ನಷ್ಟವನ್ನು ಅವರೇ ತುಂಬಿಕೊಡಬೇಕೆಂದೂ ಪ್ರಸನ್ನಕುಮಾರ್ ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಎರಡು ದಿನಗಳಿಂದ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಕಾನೂನು ವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಮುಖಂಡರು ಭಾವನಾತ್ಮಕವಾಗಿ ಮಾತನಾಡಿ ಮತ್ತೆ ಮತ್ತೆ ಶಾಂತಿ ಕದಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹರ್ಷನ ಸಾವು ಅವರ ಕುಟುಂಬದವರನ್ನು ಕಾಡುತ್ತಲೇ ಇದೆ. ಅವರು ದುಃಖ ನೋಡಿದರೆ ಸಂಕಟವಾಗುತ್ತದೆ. ಆ ಕುಟುಂಬಕ್ಕೆ ಪರಿಹಾರ ನೀಡುವುದರ ಜೊತೆಗೆ ಸರ್ಕಾರಿ ಕೆಲಸ ನೀಡಬೇಕು, ಗಲಭೆಯಲ್ಲಿ ಇದುವರೆಗೂ ಆಸ್ತಿ ಪಾಸ್ತಿ ಕಳೆದುಕೊಂಡವರಿಗೂ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಹಾಗೇ, ಹಿಂದೂಗಳಿಗೆ ರಕ್ಷಣೆ ಕೊಡದ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಹರ್ಷನ ಕೊಲೆ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.












