(ಈ ಲೇಖನವು ಜ್ಯೋತಿರ್ಮಯಿ ಶರ್ಮಾ ಅವರ ‘ಎಲೂಸಿವ್ ನಾನ್ ವೊಯ್ಲೆನ್ಸ್: ದ ಮೇಕಿಂಗ್ ಆಂಡ್ ಅನ್ಮೇಕಿಂಗ್ ಆಫ್ ಗಾಂಧೀಸ್ ರಿಲಿಜನ್ ಆಫ್ ಅಹಿಂಸಾ’ ಎಂಬ ಪುಸ್ತಕದ ಆಯ್ದ ಭಾಗಗಳಾಗಿವೆ.)
ಹಿಂದೂಯಿಸಂ ಕುರಿತು ಗಾಂಧಿಯ ಪ್ರಶ್ನಿಸಲಾರದ ಪ್ರಾಮಾಣಿಕತೆಯನ್ನು ಹಲವಾರು ಬಾರಿ ಸ್ಪಷ್ಟ ಧೃಡೀಕರಣಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ವೇದ ಮತ್ತು ಶಾಸ್ತ್ರಗಳ ಮೇಲಿನ ಅಪಾರ ನಿಷ್ಠೆ ಹಾಗು ಗೋರಕ್ಷಣೆಗಳಂತಹ ವಿಷಯಗಳ ಪಟ್ಟಿಯನ್ನೇ ನೀಡಬಹುದು. ಈ ಧೃಡೀಕರಣಗಳು ಭಾವನಾತ್ಮಕವಾಗಿ ಅಭಿವ್ಯಕ್ತಿಗೊಂಡಂತಹ ಸಂದರ್ಭಗಳೂ ಇವೆ, ಆದರೆ ಅದು ಹಿಂದೂಯಿಸಂ ಕುರಿತು ಗಾಂಧಿ ಅವರ ಅರ್ಥೈಸುವಿಕೆಯನ್ನು ಮುಸುಕುಗೊಳಿಸುವುದಿಲ್ಲ.

“ಆದರೆ ಪ್ರಕೃತಿಯ ನಿಯಮದಂತೆ ಹಿಂದೂಯಿಸಂ ಸಹ ಉನ್ನತಿ ಮತ್ತು ಅವನತಿಗೆ ಒಳಗಾಗುವಂತದ್ದು. ಬೇರಿನಲ್ಲಿ ಒಂದೇ ಆಗಿದ್ದರೂ ಈಗ ಹಲವಾರು ಕೊಂಬೆಗಳಾಗಿ ಬೆಳೆದಿದೆ. ಋತುಮಾನಗಳಿಗೆ ಅನುಸಾರವಾಗಿ ಅದು ಬದಲಾಗುತ್ತದೆ. ಅದಕ್ಕೂ ಅದರದ್ದೇ ಆದ ಬೇಸಿಗೆ, ಶರತ್ಕಾಲ, ಚಳಿಗಾಲ ಮತ್ತು ಚೈತ್ರಕಾಲವಿರುತ್ತದೆ. ಮಳೆ ಅದಕ್ಕೆ ಪೋಷಣೆ ನೀಡಿ ಫಲದಾಯಕವನ್ನಾಗಿ ಮಾಡುತ್ತದೆ. ಅದು ಶಾಸ್ತ್ರಗಳ ಮೇಲೆ ಅವಲಂಬಿತವಾಗುವುದರ ಜೊತೆಗೆ ಅವಲಂಬಿತವಾಗಿಯೂ ಇಲ್ಲ. ಅದು ಒಂದೇ ಗ್ರಂಥದಿಂದ ತನ್ನ ಎಲ್ಲಾ ಅಧಿಕಾರವನ್ನು ಪಡೆಯುವುದಿಲ್ಲ. ಗೀತಾ ಸಾರ್ವತ್ರಿಕವಾಗಿ ಒಪ್ಪಿತವಾದರೂ, ಅದೂ ಒಂದೇ ದಾರಿಯನ್ನು ತೋರುತ್ತದೆ. ಅದು ರೀತಿ ರಿವಾಜುಗಳ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ಹಿಂದೂಯಿಸಂ ಗಂಗೆಯಿದ್ದಂತೆ. ತನ್ನ ಉಗಮಸ್ಥಳದಲ್ಲಿ ಪರಿಶುದ್ಧವಾಗಿದ್ದೂ ಹರಿಯುತ್ತಾ ಹರಿಯುತ್ತಾ ಕೊಳೆಯನ್ನು ಶೇಖರಿಸಿಕೊಂಡಿದೆ. ಒಟ್ಟಾರೆಯಾಗಿ ಗಂಗೆಯಂತೆ ಹಿಂದೂಯಿಸಂ ಕೂಡ ಉತ್ಕೃಷ್ಟವಾದದ್ದು. ಪ್ರತೀ ಪ್ರದೇಶಕ್ಕೂ ಅದು ಬದಲಾಗುತ್ತದೆ, ಆದರೆ ಅದರ ಒಳಾಂಶ ಒಂದೇ ಆಗಿರುತ್ತಾರೆ. ರೀತಿ ರಿವಾಜುಗಳು ಧರ್ಮವಾಗುವುದಿಲ್ಲ. ಪದ್ಧತಿಗಳು ಬದಲಾಗಬಹುದು, ಆದರೆ ಧರ್ಮ ಹಾಗೆಯೇ ಉಳಿಯುತ್ತದೆ.”
ಇಂತಹ ಅವಿಭಜಿತ, ಪರಿಶುದ್ಧ ಮತ್ತು ಬದಲಾಯಿಸಲು ಸಾಧ್ಯವಾಗದ ಹಿಂದೂಯಿಸಂ ಎಂದಾದರೂ ಬೆದರಿಕೆಗೆ ಒಳಗಾಗಿದೆಯೇ?
ಹಿಂದೂಗಳು ಕಠಿಣ ಧಾರ್ಮಿಕ ಪದ್ಧತಿಗಳು ಮತ್ತು ಸ್ವನಿಯಂತ್ರಣದಿಂದ ಅಪಾಯವನ್ನು ಮತ್ತು ಅಶುದ್ಧತೆಯನ್ನು ದೂರ ಇಡುತ್ತಾರೆ ಎಂಬುದು ಗಾಂಧಿಯ ದೃಷ್ಟಿಕೋನ. ಆದರೆ ಹಿಂದೂಯಿಸಂನೊಡನೆ ಈ ನಂಟು ತೀವ್ರ ವೈಯಕ್ತಿಕ ಅಭಿವ್ಯಕ್ತಿಯಾಗಿಯೂ ಕಾಣುತ್ತದೆ.
“ಸಂಕುಚಿತ ಮನಸ್ಥಿತಿ ಉಳ್ಳವರು, ಮತಾಂಧರು ಮತ್ತು ಸಂಸ್ಕೃತ ಗ್ರಂಥಗಳ ಆದೇಶದಂತೆ ತಪ್ಪನ್ನೂ ಸರಿ ಎನ್ನುವವರು ಸನಾತನಿ ಹಿಂದೂಗಳಾಗಲು ಸಾಧ್ಯವಿಲ್ಲ. ನನ್ನ ನೈತಿಕತೆ ನಿರಾಕರಿಸುವ ಎಲ್ಲದನ್ನು ನಾನು ನಿರಾಕರಿಸಿದರೂ, ಹಿಂದೂ ಶಾಸ್ತ್ರಗಳು ನನ್ನ ಅಂತರಾಳಕ್ಕೆ ಸಂತೃಪ್ತಿ ನೀಡುತ್ತದೆ. ಹಾಗಾಗಿ ನಾನು ಸನಾತಾನಿ ಹಿಂದೂ. ನಾನು ಇತರ ಧರ್ಮಗಳನ್ನು ಗೌರವದಿಂದ ಅಧ್ಯಯಿಸಿದಾಗ ಅದು ನನ್ನ ಹಿಂದೂ ಧರ್ಮದ ಬಗ್ಗೆ ಯಾವುದೇ ರೀತಿಯಲ್ಲಿ ಅಭಿಮಾನವನ್ನು ಕುಂದಿಸಲಿಲ್ಲ. ಅವುಗಳು ನಾನು ಹಿಂದೂ ಧರ್ಮವನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟವು. ನನ್ನ ಬದುಕಿನ ದೃಷ್ಟಿಕೋನವನ್ನು ಅವು ವಿಸ್ತಾರವಾಗಿಸಿವೆ. ಹಿಂದೂ ಶಾಸ್ತ್ರಗಳ ಗೊಂದಲಕಾರಿ ಅಂಶಗಳನ್ನು ಇನ್ನೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ನನಗೆ ಸಾಧ್ಯವಾಗಿಸಿವೆ.”
ಮೇಲಿನಂತಹ ಉಲ್ಲೇಖಿತ ಭಾಗಗಳಲ್ಲಿ ಗಾಂಧಿಯ ನೈತಿಕತೆ ಹಿಂದೂ ಶಾಸ್ತ್ರಗಳಿಂದ ಮೂಡಿರುವುದೋ ಅಥವಾ ಅದನ್ನೂ ಮೀರುವಷ್ಟು ಮುಂದುವರೆದದ್ದೋ ಎಂಬುದರ ಕುರಿತು ಗೊಂದಲಗಳಿವೆ. ಶಾಸ್ತ್ರ ಗ್ರಂಥಗಳ ಭಾಗಗಳನ್ನು ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಪ್ರಕ್ರಿಯೆ ಗಾಂಧಿಯ ಹಿಂದೂಯಿಸಂನ ಅರ್ಥೈಸುವಿಕೆಯನ್ನು ವ್ಯಾಖ್ಯಾನಿಸುವುದಾದರೆ, ಭಾಗಗಳನ್ನು ಆಯ್ಕೆ ಮಾಡುವ ನೈತಿಕ ಪ್ರಜ್ಞೆ ಅವರಿಗೆ ಎಲ್ಲಿಂದು ಸಿದ್ಧಿಸಿತು ಎಂಬುದೇ ದೊಡ್ಡ ಪ್ರಶ್ನೆ.
ಗಾಂಧಿಯವರು ಪ್ರತಿಪಾದಿಸುತ್ತಿದ್ದ ವೈಷ್ಣವ ಧರ್ಮವನ್ನು ಸೂಕ್ಷ್ಮವಾಗಿ ಅಧ್ಯಯಿಸಿದರೆ ಈ ಪ್ರಶ್ನೆಗೆ ಸುಳಿವೊಂದು ದೊರಕಬಹುದು. ಅವರ ಆತ್ಮಚರಿತ್ರೆಯಲ್ಲಿ ಗಾಂಧಿ ಅವರು ಅವರ ತಂದೆ ತಾಯಿಯರನ್ನು ಕಟ್ಟಾ ವೈಷ್ಣವರೆಂದು ಕರೆಯುತ್ತಾರೆ. ಗಾಂಧಿ ಹೇಳುವಂತೆ ಅವರ ತಾಯಿಯ ಭಕ್ತಿ ಮತ್ತು ಸಾಧುತನ ವೈಷ್ಣವ ಧರ್ಮದ ಪ್ರಭಾವ.
ರಾಮನಾಮದಲ್ಲಿ ಅವರ ನಂಬಿಕೆಯನ್ನು ಓರ್ವ ವೃದ್ಧ ದಾದಿಯವರು ಸ್ಥಾಪಿಸಿದರು. ಹಾಗೆಯೇ ವೈಷ್ಣವ ಪ್ರಭಾವಗಳಾದ ರಾಮ ರಕ್ಷ ಮಂತ್ರ, ರಾಮಚರಿತಮಾನಸದ ಕೆಲವು ಸಾಲುಗಳು, ಭಾಗವತ ಪುರಾಣ – ಇವೆಲ್ಲವೂ ಗಾಂಧಿಯವರು ಅವರ ಪ್ರಾಥಮಿಕ ಧಾರ್ಮಿಕ ಪ್ರಭಾವಗಳಾಗಿದ್ದವು ಎಂಬುದನ್ನು ನೆನೆಯುತ್ತಾರೆ. ಮುಂದೆ ತಮ್ಮ ಜೀವನದಲ್ಲಿಯೂ ಅವರು ಜನಿಸಿದ ಮತ್ತು ಪಾಲಿಸುವ ಧರ್ಮ ವೈಷ್ಣವ ಧರ್ಮ ಎಂದು ಪರಿಗಣಿಸುತ್ತಾರೆ.
ಅವರಿಗೆ ವೈಷ್ಣವ ಧರ್ಮ ವೈಯಕ್ತಿಕ ಮತ್ತು ಅವೈಯಕ್ತಿಕವಾಗಿತ್ತು
1920ರಲ್ಲಿ ವೈಷ್ಣವರನ್ನು ಉದ್ದೇಶಿಸುತ್ತಾ ನರಸಿಂಹ ಮೆಹತಾ ಅವರ ‘ವೈಷ್ಣವ ಜನ ತೋ’ ಗೀತೆಯನ್ನು ಪುನರ್ವಾಚಿಸುತ್ತಾ ಅದನ್ನು ಭಾಗ ಭಾಗವಾಗಿ ವಿಶ್ಲೇಷಿಸಲು ಆರಂಭಿಸುತ್ತಾರೆ. ಅಹಿಂಸೆ, ಪ್ರೀತಿ ಮತ್ತು ಇಂದ್ರೀಯಗಳ ನಿಯಂತ್ರಣವನ್ನು ವೈಷ್ಣವರ ಗುಣಗಳೆಂದು ವ್ಯಾಖ್ಯಾನಿಸುವ ನರಸಿಂಹ ಮೆಹತಾ ನಿಜವಾದ ವೈಷ್ಣವ.

ವೇದಗಳನ್ನು ಓದುವುದು ಮತ್ತು ವರ್ಣಾಶ್ರಮ ಪದ್ಧತಿಯನ್ನು ಪಾಲಿಸುವುದು ವೈಷ್ಣವರ ಗುಣಗಳಾಗುವುದಿಲ್ಲ. ಹಾಗೇನಾದರೂ ಆದರೆ, ಅದು ಪಾಪ ಮತ್ತು ವೈರುಧ್ಯಗಳಿಂದ ಕೂಡಿಬಿಡುತ್ತದೆ. ಇತರರಿಗೆ ಸಹಾಯ ಮಾಡುತ್ತಾ ಒಬ್ಬರ ಮಾತು, ಯೋಚನೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸಿಕೊಳ್ಳುವುದು ನಿಜವಾದ ವೈಷ್ಣವರ ಗುಣಗಳು. ಒಬ್ಬ ಅಸ್ಪೃಶ್ಯನನ್ನು ಅಧಾರ್ಮಿಕ ಎಂದು ಕರೆಯುವ ಯಾವುದೇ ರೀತಿಯ ಸ್ವರಾಜ್ಯವನ್ನು ಅವರು ವೈಷ್ಣವರಾಗಿ ಒಪ್ಪಿಕೊಳ್ಳುತ್ತಿರಲಿಲ್ಲ.
ಗಾಂಧಿ ಜೂನ್ 1924ರಲ್ಲಿ ಬರೆಯುವ ಒಂದು ವೈಯಕ್ತಿಕ ಭಕ್ತಿಪೂರ್ವಕ ಲೇಖನವನ್ನು ಭಾವನಾತ್ಮಕವಾಗಿ ಯಾವದಕ್ಕೂ ಹೋಲಿಸಲು ಸಾಧ್ಯವಾಗುವುದಿಲ್ಲ. ಅವರ ವೈಷ್ಣವ ಗೆಳೆಯರೊಬ್ಬರು ಶ್ರೀ ರಾಮಚಂದ್ರ ಪ್ರಭುವನ್ನು ರಾಮ ನೆಂದು ಕರೆಯುವುದರ ಕುರಿತು ಅಕ್ಷೇಪ ಎತ್ತುತ್ತಾರೆ.ಹೀಗೆ ಕರೆಯುವುದು ಗೌರವಸೂಚಕವಲ್ಲ ಎಂಬುದು ಅವರ ವಾದವಾಗಿತ್ತು. ಗಾಂಧಿ ಇದಕ್ಕೆ ಸಮಾಧಾನವಾಗಿ ರಾಮ ಅವರ ಮನೆತನದ ಇಷ್ಟದೇವತೆಯಾದ ಕಾರಣ ಶ್ರೀ ರಾಮಚಂದ್ರ ಪ್ರಭು ಎನ್ನುವುದಕ್ಕಿಂತ ರಾಮ ಎನ್ನುವುದು ಅವರಿಗೆ ಆತ್ಮೀಯವಾದದ್ದು ಎಂದು ಪ್ರತಿಕ್ರಯಿಸುತ್ತಾರೆ.
“’ಶ್ರೀ ರಾಮಚಂದ್ರ ಪ್ರಭು’ ಎಂಬುದಕ್ಕಿಂತ ರಾಮ ಎನ್ನುವುದು ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ರಾಮ ಮತ್ತು ಭರತ ಎಂದು ನಾನೆಲ್ಲೆಲ್ಲಿ ಬಳಸಿದ್ದೇನೋ, ಅಲ್ಲೆಲ್ಲಾ ನನ್ನ ಭಕ್ತಿ ಹರಿದು ಹೋಗುತ್ತಿದೆ. ನನ್ನ ವೈಷ್ಣವ ಗೆಳೆಯನಿಗೆ ಅವರ ಭಕ್ತಿಯೇ ಹಿರಿಯದಾದದ್ದು ಎಂದೆನಿಸಿದರೆ ಅವರನ್ನು ನಾನು ನನ್ನ ರಾಮನ ದರ್ಬಾರಿನಲ್ಲಿ ಎದುರಿಸುತ್ತೇನೆ. ನನ್ನ ರಾಮರಾಜ್ಯದಲ್ಲಿ ಖಂಡಿತವಾಗಿ ನನಗೆ ನ್ಯಾಯ ದೊರಕುತ್ತದೆ.”
ಮನಸ್ಸಿಗೆ ಹತ್ತಿರವಾದವರನ್ನು ಯಾರಾದರೂ ‘ನೀವು’ ಎಂದು ಉದ್ದೇಶಿಸುವ ಬದಲು ನೀನು ಎಂದು ಕರೆಯುತ್ತಾರೆ. ಅವರು ತಮ್ಮ ತಾಯಿಯೊಂದಿಗೆ ಹೀಗೆಯೇ ಆತ್ಮೀಯವಾಗಿ ಮಾತನಾಡುತ್ತಿದ್ದರು. ಅಕಸ್ಮಾತಾಗಿ ಅವರು ಔಪಚಾರಿಕವಾಗಿ ಮಾತನಾಡಲು ಆರಂಭಿಸಿದರೆ, ಅವರ ತಾಯಿ ಬಹುಶಃ ಅಳಲು ಆರಂಭಿಸುತ್ತಿದ್ದರೇನೋ. ಆದರೆ ರಾಮನನ್ನು ಅವರು ನೆನೆಯುವುದು ಎಲ್ಲಾ ಎಲ್ಲೆಗಳನ್ನು ಮೀರುತ್ತದೆ. ಅದು ಧರ್ಮದ ಬಗೆಗಿನ ಅವರ ವಿಭಿನ್ನ ದೃಷ್ಟಿಕೋನವನ್ನು ವ್ಯಾಖ್ಯಾನಿಸುತ್ತದೆ.


“ಒಂದಾನೊಂದು ಕಾಲದಲ್ಲಿ ರಾಮನನ್ನು ನಾನು ಶ್ರೀ ರಾಮಚಂದ್ರನೆಂದು ತಿಳಿದಿದ್ದೆ. ಆದರೆ ಈಗ ಆ ಹಂತವನ್ನು ದಾಟಿದ್ದೇನೆ. ರಾಮ ಈಗ ನನ್ನ ಮನೆಗೆ ಬಂದು ಅಲ್ಲಯೇ ವಾಸಿಸುತ್ತಾನೆ. ಅವನನ್ನೇನಾದರು ನಾನು ‘ನೀವು’ ಎಂದು ಕರೆದರೆ ಅವನು ನನ್ನನ್ನು ಹುಸಿಕೋಪದಿಂದ ನೋಡುತ್ತಾನೆ ಎಂಬುದು ನನಗೆ ತಿಳಿದಿದೆ. ನನ್ನನ್ನು ನೋಡಿಕೊಳ್ಳಲು ನನಗೆ ಈಗ ತಾಯಿ, ತಂದೆ ಅಥವಾ ಅಣ್ಣನಿಲ್ಲ. ಹಾಗಾಗಿ ಈಗ ಅವನೇ ಎಲ್ಲಾ. ಅವನೇ ನನ್ನ ಜೀವನ. ಅವನಿಗಾಗಿಯೇ ನನ್ನ ಬದುಕು. ಅವನನ್ನು ನಾನು ಎಲ್ಲಾ ಮಹಿಳೆಯರಲ್ಲೂ ಕಾಣುವುದರಿಂದ ಅವರನ್ನು ನಾನು ತಾಯಂದಿರು ಮತ್ತು ಸಹೋದರಿಯರಾಗಿ ನೋಡುತ್ತೇನೆ. ಎಲ್ಲಾ ಪುರುಷರಲ್ಲೂ ನಾನು ಅವನನ್ನು ಕಾಣುತ್ತೇನೆ. ಅವರ ವಯಸ್ಸಿಗೆ ಅನುಸಾರವಾಗಿ ಅವರು ನನ್ನ ತಂದೆ, ಸಹೋದರ ಅಥವಾ ಪುತ್ರರಾಗಿ ಕಾಣುತ್ತಾರೆ. ನಾನು ಅದೇ ರಾಮನನ್ನು ಒಬ್ಬ ಭಂಗಿಯಲ್ಲೂ ಕಾಣುತ್ತೇನೆ, ಒಬ್ಬ ಬ್ರಾಹ್ಮಣನಲ್ಲೂ ಕಾಣುತ್ತೇನೆ. ಹಾಗಾಗಿ ನನಗೆ ಅವರಿಬ್ಬರೂ ಸಮಾನರೇ.”
ಈ ಎಲ್ಲಾ ಸಾಮಿಪ್ಯವಿದ್ದರು, ಒಂದು ಅಡೆತಡೆಯನ್ನು ದಾಟಬೇಕಿದೆ. ಜಗತ್ತಿನೊಂದಿಗೆ ಸಂಪೂರ್ಣ ನಿರ್ಲಿಪ್ತತೆಯನ್ನು ಸಾಧಿಸಲಾಗಿಲ್ಲ.
“ಈಗಲೂ ರಾಮ ನನ್ನ ಸಮೀಪದಲ್ಲಿದ್ದರೂ, ನನ್ನೊಂದಿಗಿಲ್ಲ. ಹಾಗಾಗಿ ಅವನನ್ನು ಉದ್ದೇಶಿಸುವುದು ನನಗೆ ಅಗತ್ಯ. ಅವನು ನನ್ನೊಂದಿಗೆಯೇ ಇಪ್ಪತ್ನಾಕು ಗಂಟೆಗಳ ಕಾಲ ಉಳಿದರೆ ಅವನನ್ನು ಏಕವಚನದಲ್ಲಿ ಉದ್ದೇಶಿಸುವ ಸನ್ನಿವೇಶವೇ ಇರುವುದಿಲ್ಲ. ಯಾರು ನನ್ನ ಅಮ್ಮನೊಂದಿಗೆ ‘ನೀನು’ ಎಂದು ಮಾತನಾಡಿಲ್ಲ. ಎಲ್ಲರೂ ಅವಳನ್ನು ಅತ್ಯಂತ ಗೌರವದಿಂದ ‘ನೀವು’ ಎಂದೇ ಕರೆಯುತ್ತಿದ್ದರು. ಹಾಗೆಯೇ, ರಾಮ ನನ್ನವನಾಗದೇ ಇದ್ದಿದ್ದರೇ ನಾನು ಅವನೊಂದಿಗೆ ಗೌರವಪೂರ್ವಕ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದೆ. ಆದರೆ, ಈಗ ಅವನು ನನ್ನವನು ಮತ್ತು ನಾನು ಅವನ ಗುಲಾಮ. ಹಾಗಾಗಿ ಅವನಿಂದ ಅಂತರ ಕಾಪಾಡಿಕೊಳ್ಳಲು ಯಾವುದೇ ವೈಷ್ಣವರೂ ನನ್ನಲ್ಲಿ ಮನವಿ ಮಾಡಿಕೊಳ್ಳಬೇಡಿ ಎಂದು ಕೇಳಿಕೊಳ್ಳುತ್ತೇನೆ. ಔಪಚಾರಿಕ ನಡೆಗಳ ಮೇಲೆ ಅವಲಂಬಿಸುವ ಪ್ರೀತಿಗೆ ಪ್ರೀತಿ ಎಂಬ ಹೇಸರೇತಕ್ಕೆ? ಎಲ್ಲಾ ಭಾಷೆಗಳಲ್ಲೂ, ಎಲ್ಲಾ ಧರ್ಮಗಳಲ್ಲೂ, ಮಾನವ ದೇವರೊಂದಿಗೆ ‘ನೀನು’ ಎಂದೇ ಸಂಬಾಷಣೆ ನಡೆಸುತ್ತಾನೆ.”
ರಾಮನನ್ನು ಹೆಸರಿಡಿದು ಕರೆಯುವ ಸನ್ನನಿವೇಶ ಇಲ್ಲವಾದಾಗ ಮೋಕ್ಷ ದೊರೆಯುತ್ತದೆ.
ಆದರೆ, ಹಾಗೆ ಆಗುವ ವರೆಗೂ, ರಾಮನನ್ನು ನಮ್ಮ ಮನೆಗಳಿಗೆ ಸ್ವಾಗತಿಸಬೇಕು. ಜೊತೆಗೆ, ಮೋಕ್ಷ ಸಿಗುವ ವರೆಗೂ ಧಾರ್ಮಿಕತೆ ಅವನ ನೈತಿಕ ಪ್ರಜ್ಞೆ ಮತ್ತು ವೈಯಕ್ತಿಕ ಗುರಿಗೆ ಮಾರ್ಗದರ್ಶನ ನೀಡಬೇಕು. ಇಂತಹ ಪರಿಶುದ್ಧ ವಿವೇಕದ ನಡುವೆ ಗಾಂಧಿ ಸನಾತನಿ ಹಿಂದೂ ಆಗಿದ್ದರೇ ಅಥವಾ ವೈಷ್ಣವರಾಗಿದ್ದರೇ ಎಂಬುದರ ಕುರಿತು ಗೊಂದಲಗಳು ಮೂಡುತ್ತವೆ. ಈ ರೀತಿಯ ಒಂದು ಸಂದರ್ಭದಲ್ಲಿ ಎರಡು ಆಯಾಮಗಳ ಉತ್ತರವನ್ನು ಗಾಂಧಿ ನೀಡುವುದಾಗಿ ಪ್ರಶಂಸಿಸುತ್ತಾರೆ.
ಒಬ್ಬ ಹಿಂದೂ ಆಗಲು ಮೊದಲು ಅವರು ಒಂದು ಹಿಂದೂ ಕುಟುಂಬದಲ್ಲಿ ಹುಟ್ಟಿರಬೇಕು. ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ದೈವಿಕ ಗ್ರಂಥಗಳೆಂದು ಒಪ್ಪಿಕೊಂಡು ಐದು ಯಮಗಳನ್ನು ಸಂಪೂರ್ಣವಾಗಿ ಪಾಲಿಸಲು ಮುಂದಾಗಬೇಕು. ಆತ್ಮ ಮತ್ತು ಪರಮಾತ್ಮದ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಹಿಂದೂ ಆತ್ಮವು ಶಾಶ್ವತ ಎಂದು ನಂಬುತ್ತಾನೆ. ಆತ್ಮ ಹಲವಾರು ಅವತಾರಗಳನ್ನು ಎತ್ತುತ್ತದೆ ಮತ್ತು ಮೋಕ್ಷ ಪಡೆಯುವುದಕ್ಕಾಗಿ ಯತ್ನಿಸುತ್ತಲೇ ಇರುತ್ತದೆ. ಮಾನವನ ಅಂತಿಮ ಗುರಿಯು ಮೋಕ್ಷವೇ ಎಂಬುದನ್ನು ಇದು ಪ್ರತಿಪಾದಿಸುತ್ತದೆ.
ಹಿಂದೂಗಳು ವರ್ಣಾಶ್ರಮವನ್ನು ಮತ್ತು ಗೋರಕ್ಷಣೆಯನ್ನು ಪಾಲಿಸಬೇಕು. ಈಗಾಗಲೇ ಗಮನಿಸಿದಂತೆ, ಗೋರಕ್ಷಣೆ ಹಿಂದೂ ಧರ್ಮದ ಪ್ರಮುಖ ಭಾಗ ಎಂದು ಗಾಂಧಿ ನಂಬಿದ್ದರು. ಹಸುಗಳನ್ನು ರಕ್ಷಿಸುವುದರಲ್ಲಿ ಹಿಂದೂಗಳ ವೈಫಲ್ಯವೇ ಅವರ ದುರ್ಬಲತೆಗೆ ಕಾರಣ ಎಂದು ಗಾಂಧಿ ಒಂದೆಡೆ ನಂಬಿದ್ದರು.
ಹಿಂದೂಯಿಸಂಗೆ ಗೋರಕ್ಷಣೆ ಮುಖ್ಯ ಎಂದು ಪರಿಗಣಿಸುವ ಮೂಲಕ ಅವರು ತಮ್ಮನ್ನು ಹಿಂದೂಗಳಲ್ಲಿ ಅತ್ಯಂತ ದುರ್ಬಲ ಸಮುದಾಯಕ್ಕೆ ಸೇರಿದವರೆಂದು ಗುರುತಿಸಿಕೊಳ್ಳುತ್ತಾರೆ. ಓರ್ವ ವೈಷ್ಯನಾಗಿ ಬ್ರಾಹ್ಮಣ ಮತ್ತು ಕ್ಷತ್ರಿಯರ ಕರ್ತವ್ಯವನ್ನು ಅವರು ಪಾಲಿಸುತ್ತಾರೆ. ಬ್ರಾಹ್ಮಣ ಮತ್ತು ಕ್ಷತ್ರಿಯರ ಶಕ್ತಿ ಕಡಿಮೆಯಾಗಿರುವ ಕಾರಣ ಹಿಂದೂಗಳು ಮುಸಲ್ಮಾನರಿಂದ ಮತ್ತು ಬ್ರಿಟೀಷರಿಂದ ಗೋವುಗಳನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ ಎಂಬ ನಿಲುವನ್ನು ಗಮನಿಸಬೇಕು.
ಒಬ್ಬ ವೈಷ್ಣವ ಹಿಂದೂ ಆಗಿ ಜನ್ಮ ತಳೆದು ವೈಷ್ಣವನಾಗಿ ಜೀವನ ನಡೆಸುವುದರ ಜೊತೆಗೆ ಹಿಂದೂಯಿಸಂನ ಅಡಿ ಬರುವುದನ್ನೆಲ್ಲಾ ಪಾಲಿಸುತ್ತಾನೆ. ಈ ಮಾರ್ಗವನ್ನು ನರಸಿಂಗ್ ಮೆಹತಾ ಅವರ “ವೈಷ್ಣವಜನ” ಎಂಬ ಪದ್ಯದಲ್ಲಿ ಕಾಣಬಹುದು. ಪದ್ಯದಲ್ಲಿ ಒಪ್ಪಿತವಾಗಿರುವ ಗುಣಗಳನ್ನು ಸಾಧಿಸಲು ಓರ್ವ ವೈಷ್ಣವ ಪ್ರಯತ್ನಿಸುವುದನ್ನು ನಾವು ನೋಡಬಹುದು.
ಈ ಧಾರ್ಮಿಕತೆ ಗಾಂಧಿಗೆ ಕುಟುಂಬದ ಮೂಲಕ ಪರಿಚಯವಾಗಿದ್ದರೂ, ಒಂದು ಹಂತದಲ್ಲಿ ಹಿಂದೂಯಿಸಂ ಕುರಿತು ಸಂದೇಹಗಳು ಅವರಲ್ಲಿ ಮೂಡಿದವು. ಗಾಂಧಿ ಅವರು ರಾಯ್ಚಂದ್ ಭಾಯ್ ಎಂದು ಕರೆಯುತ್ತಿದ್ದ ರಾಜಚಂದ್ರ ರಾವ್ಜೀಭಾಯ್ ಮೆಹತಾ ಅವರು ಇಂತಹ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಅವರಿಗೆ ಸಹಕರಿಸಿದ್ದರು.
ಕೃಪೆ: ಸ್ಕ್ರಾಲ್