
ಬೀದರ್ನಲ್ಲಿ ಹಾಡಹಗಲೇ ಹತ್ಯೆ ಮಾಡಿ, ಹಣ ಕದ್ದೋಯ್ದ ಪ್ರಕರಣದ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷ ಮುಗಿ ಬಿದ್ದಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ಜಂಗಲ್ ರಾಜ್ಯವಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಪುಟ್ಟ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿವೆ. ಅಪರಾಧ ಮಾಡುವವರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಆರೋಪಿಸಿದ್ದರು.
ಬೀದರನಲ್ಲಿ ಹಾಡಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದರಿಂದ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು. ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಕರ್ನಾಟಕ ಜಂಗಲ್ ರಾಜ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ರು.

ಬೀದರ್ ದರೋಡೆ ಪ್ರಕರಣ ನಡೆಯುತ್ತಿದ್ದ ಹಾಗೆ ಆ್ಯಕ್ಟೀವ್ ಆಗಿದ್ದ ಬೀದರ್ ಪೊಲೀಸರು ಸಿಸಿಟಿವಿಯಲ್ಲಿ ಆರೋಪಿಗಳ ಕ್ಲಿಯರ್ ವಿಡಿಯೋವನ್ನು ಅಕ್ಕಪಕ್ಕದ ರಾಜ್ಯಗಳಿಗೆ ರವಾನೆ ಮಾಡಿದ್ದರು. ದರೋಡೆಕೋರರನ್ನು ಹೈದ್ರಾಬಾದ್ನಲ್ಲಿ ಬಂಧನ ಮಾಡಲಾಗಿದೆ. ಭೀಕರ ಗುಂಡಿನ ದಾಳಿ ಬಳಿಕ ದರೋಡೆಕೋರರು ಲಾಕ್ ಆಗಿದ್ದಾರೆ. ಅಫ್ಜಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರನ್ನ ನೋಡಿ ಟ್ರಾವೆಲ್ ಕಚೇರಿಗೆ ನುಗ್ಗಿದ್ದು, ಆರೋಪಿಗಳಿಗೆ ಶರಣಾಗಿ ಎಂದರೂ ಶರಣಾಗದೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಆ ಗುಂಡು ಪೊಲೀಸರ ಬದಲು ಖಾಸಗಿ ಬಸ್ ಸಿಬ್ಬಂದಿಗೆ ಬಿದ್ದಿದೆ. ಕೂಡಲೇ ಬಂಧನ ಮಾಡಿದ್ದಾರೆ.
ಕರ್ನಾಟಕ ಪೊಲೀಸರು ಮತ್ತು ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದರು ಸುಮಾರು 9 ತಂಡಗಳನ್ನು ರಚಿ ಆರೋಪಿಗಳಿಗಾಗಿ ಬಲೆ ಬೀಸಲಾಗಿತ್ತು. ಹೈದ್ರಾಬಾದ್ನ ಅಫ್ಜಲ್ಗಂಜ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಬಾಡಿ ವಾರೆಂಟ್ ಮೂಲಕ ಆರೋಪಿಗಳನ್ನು ಬೀದರ್ಗೆ ಕರೆತರಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷಗಳ ಟೀಕೆಗೆ ತಮ್ಮ ಕೆಲಸದ ಮೂಲಕ ಉತ್ತರ ಕೊಟ್ಟಿದೆ ಕರ್ನಾಟಕ ಪೊಲೀಸ್ ಪಡೆ.













