ಬೆಂಗಳೂರು: ನಗರದ ಪ್ರತಿಷ್ಠಿತ ಏರಿಯಾ ಸದಾಶಿವ ನಗರದಲ್ಲಿ ವಾಸವಿರೋ ಉದ್ಯಮಿ ಅಭಿಷೇಕ್ ಎಂಬುವವರ ಮನೆಯಲ್ಲಿ ಕೋಟ್ಯಾಂತರ ರೂ.ಚಿನ್ನಾಭರಣ, ವಾಚ್ ಗಳನ್ನ ದೋಚಿ ನಾಪತ್ತೆಯಾಗಿದ್ದ ಮನೆಗೆಲಸ ದಂಪತಿಯನ್ನ ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ಮನೆಯಲ್ಲಿ ಕೆಲಸಕ್ಕಿದ್ದ ಪ.ಬಂಗಾಳ ಮೂಲದ ಹಾಜಿರಾ ಬೇಗಂ & ಪತಿ ಶಾಹೀರ್ ಬಂಧಿತ ಆರೋಪಿಗಳಾಗಿದ್ದಾರೆ.

2022ರಿಂದ 2024ರವರೆಗೆ ಅಭಿಷೇಕ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಹಾಜಿರಾ ಮದುವೆ ಬಳಿಕ 2025 ಡಿ.27ರಂದು ತನ್ನ ಪತಿ ಶಾಹೀರ್ ಜೊತೆ ಮತ್ತೆ ಕೆಲಸಕ್ಕೆ ಸೇರಿದ್ದಳು. ಮನೆ ಕೆಲಸ, ಮಕ್ಕಳನ್ನ ನೋಡಿಕೊಳ್ಳುತ್ತ ಅದೇ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.
ಡಿ.30ರಂದು ವರ್ಷಾಚರಣೆ ಸಲುವಾಗಿ ಅಭಿಷೇಕ್ ತಮ್ಮ ಕುಟುಂಬದ ಜೊತೆ ಕೊಯಮ್ಮತ್ತೂರಿಗೆ ಹೋಗಿದ್ದರು. ಹೋಗುವಾಗ ಹಾಜಿರಗೆ ತಮ್ಮ ಅತ್ತೆಗೆ ಕೊಡು ಎಂದು ಮನೆಯ ಒಂದು ಕೀಯನ್ನ ಕೊಟ್ಟಿದ್ರು. ಆದರೆ ಸಂಜೆಯಾದ್ರೂ ಹಾಜಿರಾ ಮನೆಯ ಕೀಯನ್ನ ತಮ್ಮ ಅತ್ತೆಗೆ ತಲುಪಿಸದಿದ್ದಾಗ ಅನುಮಾನ ಬಂದು ಆಕೆಗೆ ಕರೆ ಮಾಡಿದಾಗ ಹಾಜಿರ ದಂಪತಿ ಮೊಬೈಲ್ ಸ್ವಿಚ್ಡ್ ಆಪ್ ಆಗಿತ್ತು. ಬಳಿಕ ತಮ್ಮ ಕಾರಿನ ಡ್ರೈವರ್ ಕಳಿಸಿ ಮನೆ ಪರಿಶೀಲಿಸಿದಾಗ ಮನೆಯಲ್ಲಿದ್ದ 1.37 ಕೋಟಿ ರೂ. ಮೌಲ್ಯದ 787 ಗ್ರಾಂ. ಚಿನ್ನಾಭರಣ, 281 ಬೆಳ್ಳಿ ವಸ್ತುಗಳು, 7 ದುಬಾರಿ ವಾಚ್ ಗಳು ಕಳುವು ಆಗಿದ್ದವು.

ಈ ಘಟನೆ ಬಗ್ಗೆ ಮನೆ ಮಾಲೀಕ ಅಭಿಷೇಕ್ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆಗೆ ಇಳಿದ ಇನ್ಸ್ ಪೆಕ್ಟರ್ ಪ್ರದೀಪ್ ಬಿ. ನೇತೃತ್ವದ ಪೊಲೀಸರ ತಂಡ ಪ.ಬಂಗಾಳದ ಹೌರದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿ ಕಳವು ಮಾಡಿದ್ದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.





