ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಂ ಮಾರಾಟಗಾರರ ತಳ್ಳುಗಾಡಿ ಹಿಂದುತ್ವ ಕಾರ್ಯಕರ್ತರು ಶನಿವಾರ ಧ್ವಂಸಗೊಳಿಸಿದ್ದಾರೆ. ಕೇಸರಿ ಶಾಲುಗಳನ್ನು ಧರಿಸಿ ಬಂದ ಶ್ರೀ ರಾಮಸೇನೆ ಸದಸ್ಯರು ಶ್ರೀ ನುಗ್ಗಿಕೇರಿ ಹನುಮಂತ ದೇವಸ್ಥಾನದ ಬಳಿ ಮುಸ್ಲಿಮರಿಗೆ ಸೇರಿದ ಕನಿಷ್ಠ ನಾಲ್ಕು ತಳ್ಳುಗಾಡಿಗಳನ್ನು ಧ್ವಂಸಗೊಳಿಸಿದ್ದಾರೆ. ನೂರಾರು ಕಲ್ಲಂಗಡಿ, ತೆಂಗಿನಕಾಯಿಗಳನ್ನು ರಸ್ತೆಗೆ ಎಸೆದು ವಿಕೃತಿ ಮೆರೆದಿದ್ದಾರೆ.
ಕಲ್ಲಂಗಡಿ ಮಾರಾಟಗಾರ ನಬಿಸಾಬ್ ಮಾಧ್ಯಮದವರೊಂದಿಗೆ ಮಾತನಾಡಿ, ”ಸುಮಾರು 8-10 ಮಂದಿ ಬಂದಿದ್ದು, ನಾನೊಬ್ಬನೇ ಇದ್ದೆ. ಅವರು ಸರಿಯಾಗಿ ಮಾತನಾಡಲಿಲ್ಲ ಆದರೆ ಇಡೀ ಅಂಗಡಿಯನ್ನು ಧ್ವಂಸಗೊಳಿಸಿದರು. ನಾನು ಆರು ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿದ್ದೆ, ಅದರಲ್ಲಿ ಕೇವಲ ಒಂದು ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. .
“ಏಕಾಏಕಿ ಬಂದ ಅವರು ಥಳಿಸತೊಡಗಿದರು. ಇಲ್ಲಿ ಅಂಗಡಿ ಇಡಬಾರದೆಂದು ಎಚ್ಚರಿಸಿದ್ದಾಗಿ ಹೇಳಿದರು, ಆದರೆ ಅಂತಹ ಯಾವುದೇ ಎಚ್ಚರಿಕೆ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ತಂದಿದ್ದ ಕಲ್ಲಂಗಡಿಗಳನ್ನು ಪ್ಯಾಕ್ ಮಾಡಲೂ ನನಗೆ ಸಮಯ ನೀಡಿಲ್ಲ, ಅವನ್ನು ನಾಶಪಡಿಸಿದರು. ಸುಮಾರು 8000 ರುಪಾಯಿ ನನಗೆ ನಷ್ಟವಾಗಿದೆ. ಇಲ್ಲಿ ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ, ಯಾರೂ ಇದುವರೆಗೂ ವಿರೋಧ ವ್ಯಕ್ತಪಡಿಸಿರಲಿಲ್ಲ,” ಎಂದು ನಬಿಸಾಬಿ ಹೇಳಿದ್ದಾರೆ.

ಅಕ್ಕಪಕ್ಕದಲ್ಲಿ ಪೊಲೀಸರು ಇದ್ದರು ಆದರೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಅವರು ಮೌನವಾಗಿಯೇ ಇದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ವಿಧ್ವಂಸಕ ಕೃತ್ಯದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಆದರೆ ಯಾವುದೇ ಬಂಧನವಾಗಿಲ್ಲ ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಬಡ ವ್ಯಾಪಾರಿಗಳಿಗೆ ಹಣ್ಣು, ತರಕಾರಿ, ಹೂವು, ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಇಲ್ಲಿ ಇರುವವರಲ್ಲಿ ಸುಮಾರು 99 ಪ್ರತಿಶತ ಹಿಂದೂಗಳು. ನಾವು ಶ್ರೀರಾಮಸೇನೆ ಸಲ್ಲಿಸಿದ ಮನವಿ ಪತ್ರವನ್ನು ಪರಿಶೀಲಿಸಿದ್ದೇವೆ ಹಾಗೂ ಇನ್ನೇನು ನಿರ್ಧಾರವನ್ನು ತೆಗೆದುಕೊಳ್ಳಲಿದ್ದೆವು. ಆದರೆ ಅದಕ್ಕೂ ಮೊದಲು ಅವರು ದಾಳಿ ನಡೆಸಿ, ಗೊಂದಲ ಸೃಷ್ಟಿಸಿದರು, ”ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಭಯೋತ್ಪಾದನಾ ಚಟುವಟಿಕೆಗಳ ಆರೋಪದಲ್ಲಿ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು. ಇವರ ವಿರುದ್ಧ ಸರಕಾರವು ಕೂಡಲೇ ಭಯೋತ್ಪಾದನೆ ವಿರುದ್ಧದ ಕಾಯ್ದೆ ಅಡಿ ಕೇಸು ದಾಖಲಿಸಬೇಕು.” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.