ಇಲ್ಲಿ ಆಗಬೇಕಿರುವುದು ಎರಡು ರೀತಿಯ ಚರ್ಚೆಗಳು. ಒಂದು, ಹಿಜಾಬ್ ಧರಿಸಿದ್ದು ತಪ್ಪೇ? ಮತ್ತೊಂದು, ಹಿಜಾಬ್ ಹೆಸರಿನಲ್ಲಿ ಕ್ಯಾಂಪಸ್ಗಳಲ್ಲಾದ ದಾಂಧಲೆಗಳು? ವಾಸ್ತವದಲ್ಲಿ ಇವರೆಡೂ ಆಗದೆ ಹಿಜಾಬ್ ಹಿಂದೆ ಕಾಣದ ಕೈಗಳು? ಷಡ್ಯಂತ್ರ? ಹೀಗೆ ನೂರೆಂಟು ಚರ್ಚೆಗಳು ಸದ್ಯ ನಡೆಯುತ್ತಿವೆ. ಅಸಲಿಗೆ ಹಿಜಾಬ್ ಒಂದು ಚರ್ಚೆಯ ವಿಷಯವೇ ಅಲ್ಲ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ನಡೆಯುತ್ತಿರುವುದು ಜನಾಂಗೀಯ ಹಗೆತನ ಸಾಧಿಸುವಿಕೆ. ಅದರ ಒಂದು ಟೂಲ್ ಆಗಿ ಇಲ್ಲಿ ಹಿಜಾಬ್ ಮುನ್ನೆಲೆಗೆ ಬಂದಿದೆ ಅಷ್ಟೇ!
ನೀವೇ ನೋಡಿ. ಬೆಂಗಳೂರಿನಂಥ ಮೆಟ್ರೋ ಪಾಲಿಟನ್ ಸಿಟಿಯಲ್ಲಿ ಸಂಪೂರ್ಣವಾಗಿ ಮುಖ ಸೇರಿದಂತೆ ತಲೆಯನ್ನೂ ಮುಚ್ಚಿಕೊಂಡು ಹೆಂಗಸರು ಓಡಾಡುತ್ತಾರೆ. ಕಾರಣ ಕೇಳಿದರೆ ಧೂಳು, ಬಿಸಿಲಿನ ಹೊಡೆತ ಎನ್ನುತ್ತಾರೆ. ಅಕ್ಷರಶಃ ಅದು ಅವರ ಆಯ್ಕೆ. ನಾವು ಗೌರವಿಸಲೇ ಬೇಕು. ಅದೇ ರೀತಿ ಮುಖ ಮುಚ್ಚಿ, ತಲೆ ಕೂದಲು ಮುಚ್ಚಿ ಮುಸ್ಲಿಮರು ಬಟ್ಟೆ ಹಾಕಿದರೆ? ಹಾಗಾದರೆ ಇಲ್ಲಿ ಹಿಜಾಬ್ ಒಂದು ಸಮಸ್ಯೆಯೇ? ಖಂಡತಾ ಅಲ್ಲ. ಮತ್ತೇನು ಹಾಗಾದರೆ?
ಹಿಜಾಬ್ ಬದಿಗಿಡಿ, ದನದ ಮಾಂಸ ತಿಂದರೆಂದು ಹೊಡೆದು ಕೊಲ್ಲಲಾಯಿತು! ಥಳಿತಕ್ಕೆ ಒಳಗಾಗಿ ಬೀಫ್ ಹೆಸರಿನಲ್ಲಿ ಪ್ರಾಣಕಳೆದುಕೊಂಡವರು ಎಲ್ಲರೂ ಮುಸ್ಲಿಮರಲ್ಲವೇ? ಹಾಗಿದ್ದರೆ ಮುಸ್ಲಿಮೇತರರು ಬೀಫ್ ತಿನ್ನುವುದೇ ಇಲ್ಲವೇ? ಹಾಗಿದ್ದರೆ ದನದ ಮಾಂಸದ ಹೆಸರಿನಲ್ಲಿ ಮುಸ್ಲಿಮರನ್ನು ಮಾತ್ರವೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಭಾರತ ಎಷ್ಟು ಪ್ರಮಾಣದಲ್ಲಿ ಬೀಫ್ ರಫ್ತು ಮಾಡುತ್ತಿದೆ ಎಂಬ ಲೆಕ್ಕ ಮಗದೊಂದು ಕಡೆ. ಅದಿರಲಿ, ಆದರೂ ದನದ ಮಾಂಸ ತಿನ್ನಲಾಯ್ತು ಎಂದು ಮುಸ್ಲಿಮರನ್ನು ಮಾತ್ರವೇ ಏಕೆ ಕೊಲ್ಲಲಾಗುತ್ತಿದೆ? ವಿಪರ್ಯಾಸವೆಂದರೆ ಇಲ್ಲೂ ಬೀಫ್ ಸಮಸ್ಯೆ ಅಲ್ಲ, ಬದಲಿಗೆ ಅದನ್ನು ಮುಸ್ಲಿಮರು ತಿನ್ನುತ್ತಾರೆ ಎಂಬುವುದೇ ವಾಸ್ತವದ ಸಮಸ್ಯೆ.
ಹಿಜಾಬ್, ದನದ ಮಾಂಸವನ್ನು ಸದ್ಯಕ್ಕೆ ಪಕ್ಕಕ್ಕಿಡಿ. ಗಡ್ಡ ಬಿಡುವುದು ಒಂದು ಸಮಸ್ಯೆಯೇ? ಅಲ್ಲವಲ್ಲಾ ಎಂದಾದ ಮೇಲೆ ಗಡ್ಡ ಬಿಟ್ಟ ಮುಸ್ಲಿಮರನ್ನೇಕೆ ಪ್ರತ್ಯೇಕಿಸಿ ನೋಡಲಾಗುತ್ತಿದೆ. ಗಡ್ಡ ಬಿಟ್ಟ ಸೈಯ್ಯದ್ ಖಾನ್ ಘಾತುಕನಾಗಿಯೂ ಹಾಗೆಯೇ ಗಡ್ಡ ಬಿಟ್ಟೇ ಬದುಕಿನ ಬಹುಪಾಲ ಬದುಕಿ ಮುಗಿಸಿದ ಎಂಎಸ್ ಗೋಳ್ವಾಲ್ಕರ್ ಅಪ್ಪಟ ದೇಶ ಪ್ರೇಮಿಯಾಗಿಯೂ ಇಲ್ಲಿ ಬಿಂಬಿಸಲ್ಪಟ್ಟಿದೆ. ಈ ಕ್ರೊನಾಲಜಿ ಅರ್ಥಮಾಡಿಕೊಂಡವರಿಗೆ ಇಲ್ಲಿ ನಡೆಯುತ್ತಿರುವುದು ಸಮವಸ್ತ್ರ ಪಾಲನೆ, ಸಮಾನತೆಯ ಹೋರಾಟ ಅಲ್ಲವೇ ಅಲ್ಲ. ಬದಲಿಗೆ, ಇದು ಜನಾಂಗೀಯ ದ್ವೇಷದ ಮತ್ತೊಂದು ಮುಖವಷ್ಟೇ ಎಂಬುವುದು ಸರಳ ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು.
ಸ್ವಾತಂತ್ರ್ಯವೇ ಸಿಗದ ಕಾಲದಲ್ಲಿ ಎಂದರೆ 1925ರಲ್ಲೇ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕೆಂದು ಪ್ರತ್ಯೇಕವಾದಿಗಳು ಸಂಘಟನೆ ಆರಂಭಿಸಿದ್ದರು. ಕಳೆದ ಸುಮಾರು ನೂರು ವರ್ಷದ ಅವಧಿಯಲ್ಲಿ ನಡೆಸಿಕೊಂಡು ಬರಲಾದ ಹತ್ಯಕಾಂಡಗಳು, ಥಳಿತಗಳು, ತಳ ಸಮುದಾಯಗಳ ಮೇಲಿನ ದಬ್ಬಾಳಿಕೆಗಳು ಇವೆಲ್ಲವನ್ನೂ ಮಾಡಿದವರು ಮುಸ್ಲಿಮರಲ್ಲ, ದಲಿತರಲ್ಲ, ಕ್ರೈಸ್ತರಲ್ಲ. ಬದಲಿಗೆ ಹಿಂದೂ ರಾಷ್ಟ್ರದ ಕನಸುಗಾಣುತ್ತಿರುವ ಸಂಘವೇ ಆಗಿದೆ. ಇದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ.

ಇತ್ತೀಚೆಗೆ ಸಲ್ಲಿಸಿದ ಕೇಂದ್ರ ಬಜೆಟ್ ನಲ್ಲಿ ಅಫ್ಘಾನಿಸ್ತಾನಕ್ಕೆ 200ಕ್ಕೂ ಅಧಿಕ ಕೋಟಿ ರೂಪಾಯಿಯನ್ನು ಅನುಮೋದಿಸಲಾಗಿದೆ. ತೀರಾ ಇತ್ತೀಚಿನವರೆಗೂ ಅಫ್ಘಾನಿಸ್ತಾನ ಎಂದರೆ ಭಯೋತ್ಪಾದಕರ ಹಿಂಡು ಎಂದು ಬೊಗಳೆ ಹೊಡೆದ ಕೇಂದ್ರ ಸರ್ಕಾವರೇ ಹೀಗೆ ಏಕಾಏಕಿಯಾಗಿ ದೇಶದ ಹಿಂದೂಗಳು ಸೇರಿ ಇತರೆ ಜನರು ಕಟ್ಟಿದ ತೆರಿಗೆ ಹಣ್ಣವನ್ನು ಭಯೋತ್ಪಾದಕರಿಗೆ ನೀಡಿ ಸಹಾಯ ಮಾಡುವುದು ಎಂದರೆ? ಹಿಂದೂತ್ವದ ಸೈನಿಕರಿಗೊಂದು ನ್ಯಾಯ, ನಿಯಂತ್ರಕರಿಗೊಂದು ನ್ಯಾಯ ಎಂದರ್ಥವೇ? ಎಲ್ಲವೂ ಒಂದೇ ಎನ್ನುವ ಇವರೇ ಹೀಗೆ ಎರಡೆರಡು ನಿಲುವು ತಾಳಿಕೊಳ್ಳುವುದು ತಪ್ಪಲ್ಲವೇ?
ಇದು ಯಾವುದು ಗೊತ್ತಿರದ ಮತ್ತು ಗೊತ್ತಿದ್ದೂ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ನಡೆದುಕೊಳ್ಳುವ ಕೆಲ ʻಜಾತ್ಯಾತೀತ ಹಿಂದೂಗಳು ಹಾಗೂ ಅಪ್ಪಟ ಪ್ರಗತಿಪರರುʼ ಈ ಹಿಡೆನ್ ಅಜೆಂಡಾಗೆ ಬಲಿಯಾಗಿದ್ದಾರೆ. ಈ ಮೂಲಕ ಮುಸ್ಲಿಮರ ಮೇಲೆ ಅವರಿಗಿರುವ ಅಸಹನೆಯನ್ನು ಇತ್ತೀಚೆಗೆ ಕಾರ್ಯಪ್ರವೃತ್ತರಾದ ಸಂಘಟನೆಯ ತೆಲೆಗೆ ಕಟ್ಟಿ ಮೂಲ ಸಮಸ್ಯೆಗಳನ್ನು ಬಚ್ಚಿಡುವ ಕೆಲಸ ಮಾಡುತ್ತಿದ್ದಾರೆ. Social Inclusiveness ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಬೇಕಾದ ಕಾಲಘಟ್ಟದಲ್ಲಿ ಸಂಘಪರಿವಾರ ತಯಾರಿಸಿದ ಟೂಲ್ ಕಿಟ್ ಗಳನ್ನೇ ಚರ್ಚಿಸಿ Intelectual ಗಳೆಂಬ ಬಿರುದು ಪಡೆದುಕೊಳ್ಳುತ್ತಾರೆ.
ದೇಶದಲ್ಲಿ ಮುಸ್ಲಿಮರು ದಲಿತ ಸಮುದಾಯಕ್ಕಿಂತಲೂ ತಳಮಟ್ಟದಲ್ಲಿದೆ ಎಂದು ಸಾಚಾರ್ ವರದಿಯೊಂದು ಹೇಳುತ್ತದೆ. ಹೀಗಿದ್ದರೂ ರಾಜಕೀಯವಾಗಿ ಮುಸ್ಲಿಮರಿಗೆ ಈಗಲೂ ಮೀಸಲಾತಿ ನೀಡುವುದು ಬಿಡಿ ಈವರೆಗೆ ಈ ಬಗ್ಗೆ ಒಂದೇ ಒಂದು ಗಂಭೀರ ಮಂಥನವಾದ ಉದಾಹರಣೆಗಳು ಇವೆಯೇ? ಕೇವಲ ಬೋಳು ಆಶ್ವಾಸನೆಗಳನ್ನಷ್ಟೇ ಕೊಡುತ್ತಾ ಕಾಲಕಾಲದಿಂದಲೂ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಟ್ಟುಕೊಂಡಿರುವ ಕಾಂಗ್ರೆಸ್ ಕೂಡ ಈ ಬಗ್ಗೆ ಕನಿಷ್ಠ ಮಾತಾಡಿರುವ ಉಲ್ಲೇಖಗಳು ನಮಗೆ ಸಿಗುವುದ ಅನುಮಾನ.
ಹೀಗೆ ಸಂಘಪರಿವಾರ ತಮ್ಮ ಮೂಲ ಗುರಿಯಾಗಿರುವ ಹಿಂದೂ ರಾಷ್ಟ್ರದ ಹಾದಿಯಲ್ಲಿ ಮುಸ್ಲಿಮರನ್ನು ಶತ್ರುಗಳೆಂದು ಘೋಷಿಸಿಕೊಂಡು ತಮ್ಮ ರಾಜಕೀಯ ಎದುರಾಳಿಗಳಾದ ಕಾಂಗ್ರೆಸ್ ನಾಯಕರಿಗೂ ಅದನ್ನು ಮುಟ್ಟಿಸುವಲ್ಲಿ ಯಶಕಂಡಿದ್ದಾರೆ. ಮತ್ತು ಈ ಹಾದಿಯಲ್ಲಿ ಹಲವು ವರ್ಷಗಳಿಂದ ಮುಸ್ಲಿಮರು ಏಕಾಂಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತೀರಾ ಇತ್ತೀಚೆಗೆ ಎಂಬಂತೆ ದಲಿತರು ಕೂಡ ಮುಸ್ಲಿಮರ ಈ ಹೋರಾಟಕ್ಕೆ ಕೈ ಜೋಡಿಸಿದ್ದು ಅಲ್ಪ ಮಟ್ಟಿಗೆ ಸಂಘದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ದಲಿತರ ಮೇಲಿನ ದೌರ್ಜನ್ಯ ಮತ್ತು ಮುಸ್ಲಿಮರು ಪರಕೀಯರು, ಈ ಎರಡೂ ಹೆಚ್ಚು ಕಮ್ಮಿ ಒಂದೇ ಎಂಬುವುದು ಇತ್ತೀಚಿಗೆ ಈ ಎರಡು ಸಮುದಾಯಗಳ ಹೊಸ ತಲೆಮಾರಿಗೆ ಬೋಧಿಸಿದೆ. ಆದರೂ ಪ್ರತಿಗತಿಪರತೆ ಮುಖವಾಡ ಧರಿಸಿಕೊಂಡಿರುವ ಹಿಡೆನ್ ಹಿಂದುತ್ವ ವಾದಿಗಳು ಮುಸ್ಲಿಮರ ಮತ್ತು ದಲಿತರ ನಡುವಿನ ಐಕ್ಯತೆಯ ಗೋಡೆಗೆ ಮೊಳೆ ಹೊಡೆಯುವ ಕೆಲಸದಲ್ಲಿದ್ದಾರೆ. ಸದ್ಯ ಈ ಹಿಜಾಬ್ ವಿವಾದ ಹೊತ್ತಲ್ಲಿ ಅದಕ್ಕೆ ಬಳಿಸಿಕೊಂಡಿರುವುದು ಫೆಮಿನಿಸಂ ಎಂಬ ಟೂಲ್ ಕಿಟ್ ಅನ್ನು.

ಹೀಗೆ ಹಿಜಾಬ್ ನೆರಳಿನಲ್ಲಿ ಅಡಗಿರುವ ಅಸಲಿ ವಿಚಾರಗಳು ಸಾಕಷ್ಟಿವೆ. ಕ್ಯಾಂಪಸ್ಗಳಲ್ಲಿ ಹಿಜಾಬ್ ಧರಿಸುವುದು ಅಸಮಾನತೆ ಎಂದು ಬಿಂಬಿಸಿ ಒಳಗೊಳಗೆ ತಮ್ಮ ನಿಜ ಅಜೆಂಡಾವನ್ನು ಸಂಘಪರಿವಾರ ಬಿಜೆಪಿ ಮೂಲಕ ಸಾಧಿಸಿಕೊಳ್ಳುತ್ತಿದೆ. ಮತ್ತು ಅದಕ್ಕೆ ಕೆಲ ಪ್ರಗತಿಪರರೂ ಸಾಥ್ ಕೊಟ್ಟಿದ್ದು ಮತ್ತೆ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಇದು ಹೊಸತೇನು ಅಲ್ಲವಾದರೂ ಇಂಥ ಪ್ರಕರಣಗಳಿಂದ ಅಹಿಂದ ವರ್ಗ ಒಂದಿಷ್ಟು Socio Understanding ಗ್ರಹಿಕೆಗಳನ್ನು ಧಕ್ಕಿಸಿಕೊಂಡಿದೆ ಎಂಬುವುದು ವಾಸ್ತವ.






