ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರು ದೇವಾಲಯ ಆಡಳಿತ ಮಂಡಳಿ ಶರಾವತಿ ಅಭಯಾರಣ್ಯ ಸೇರಿದಂತೆ ನಡೆಸಿರುವ ವ್ಯಾಪಕ ಅಕ್ರಮ ಅರಣ್ಯ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗೆ ರಾಜ್ಯ ಹೈಕೋರ್ಟ್ ನಿರ್ದೇಶಿಸಿದೆ.
ದೇವಾಲಯದ ಹೆಸರಿನಲ್ಲಿ ನಡೆದಿರುವ ಅರಣ್ಯ ಒತ್ತುವರಿ ಕುರಿತು ಈ ಹಿಂದೆ ‘ಪ್ರತಿಧ್ವನಿ’ ವಿಶೇಷ ತನಿಖಾ ವರದಿ ಪ್ರಕಟಿಸಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯರು ಒತ್ತುವರಿ ತೆರವು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದು, ಒಂದು ತಿಂಗಳ ಒಳಗೆ ಒತ್ತುವರಿ ತೆರವಿಗೆ ಕೈಗೊಳ್ಳುವ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ.
ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 65ರಲ್ಲಿ 12.16 ಎಕರೆ ಅರಣ್ಯ ಭೂಮಿಯನ್ನು ದೇವಾಲಯದ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಲಾಗಿದೆ ಎಂದು ಸಾಗರದ ಲಕ್ಷ್ಮೀನಾರಾಯಣ ಮತ್ತಿತರರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನಾಯಮೂರ್ತಿ ಎ ಎಸ್ ವೋಕ್ ನೇತೃತ್ವದ ವಿಭಾಗೀಯ ಪೀಠ ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಿದೆ.

ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಪೀಠದ ಮುಂದೆ ಹಾಜರುಪಡಿಸಿದ ಸರ್ಕಾರಿ ವಕೀಲರು, ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 65ರಲ್ಲಿ ದೇವಾಲಯದ ಹೆಸರಿನಲ್ಲಿ 12.16 ಎಕರೆ ಅರಣ್ಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಅಲ್ಲಿ ಹೋಟೆಲ್, ರೆಸ್ಟೋರೆಂಟ್, ಕಲ್ಯಾಣಮಂಟಪ, ಪಾರ್ಕಿಂಗ್ ಜಾಗ ಸೇರಿದಂತೆ ವಿವಿಧ ಕಟ್ಟಡ ಮತ್ತು ಸೌಕರ್ಯಗಳನ್ನು ನಿರ್ಮಿಸಲಾಗಿದೆ. ನ್ಯಾಯಾಲಯದ ಹಿಂದಿನ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿರುವ ಸ್ಥಳೀಯ ತಹಶೀಲ್ದಾರರು, ಒತ್ತುವರಿ ಜಾಗವನ್ನು ಗುರುತಿಸಿದ್ದಾರೆ. ಅಲ್ಲದೆ, ಹಾಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳ ಕೆಲಸವನ್ನೂ ಸ್ಥಗಿತಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ಪೀಠದ ಗಮನಕ್ಕೆ ತಂದರು.
ಆ ವರದಿಯ ವಿವರ ಗಮನಿಸಿದ, ನ್ಯಾಯಪೀಠ, ಅರಣ್ಯ ಒತ್ತುವರಿದಾರರು ಯಾರು, ಅಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದು ಯಾರು? ಮುಂತಾದ ಮಾಹಿತಿಯೊಂದಿಗೆ, ಅಂತಹ ಅಕ್ರಮ ಒತ್ತುವರಿ ಮತ್ತು ನಿರ್ಮಾಣಗಳ ತೆರವಿಗೆ ತಾವೇನು ಕ್ರಮಕೈಗೊಂಡಿದ್ಧೀರಿ ಎಂಬ ಬಗ್ಗೆ ಮುಂದಿನ ಒಂದು ತಿಂಗಳ ಒಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದೆ. ಈ ನಡುವೆ, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ದೇವಾಲಯದ ಟ್ರಸ್ಟಿ ಪರ ವಕೀಲರು ಪೀಠದ ಗಮನ ಸೆಳೆದಿದ್ದು, ಪೀಠ ಅದಕ್ಕೆ ಅವಕಾಶ ನೀಡಿದೆ.
ಕಳೆದ ಒಂದು ದಶಕದಿಂದ ಈಚೆಗೆ ದೇವಾಲಯದ ಹೆಸರಿನಲ್ಲಿ ಶರಾವತಿ ಅಭಯಾರಣ್ಯವೂ ಸೇರಿದಂತೆ ಕಳಸವಳ್ಳಿ ಗ್ರಾಮ ವ್ಯಾಪ್ತಿಯ ಸಿಗಂದೂರಿನಲ್ಲಿ ನಡೆದಿರುವ ಭಾರೀ ಅರಣ್ಯ ಒತ್ತುವರಿಯ ಬಗ್ಗೆ ‘ಪ್ರತಿಧ್ವನಿ’ ಕಳೆದ ಸೆಪ್ಟೆಂಬರಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ದಾಖಲೆ ಸಹಿತ ಸಾಕ್ಷಾತ್ ವರದಿ ಮಾಡಿತ್ತು. ದೇವಾಲಯ ಸೇರಿದಂತೆ ಅಲ್ಲಿನ ಪ್ರತಿ ಕಟ್ಟಡವೂ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿದ ಅಕ್ರಮ ನಿರ್ಮಾಣಗಳೇ ಎಂಬುದನ್ನು ಎಲ್ಲಾ ಸಾಕ್ಷ್ಯಾಧಾರಗಳೊಂದಿಗೆ ವಿವರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ವನ್ಯಜೀವಿ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿವರ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ, ಆ ವರದಿಯ ಹಿನ್ನೆಲೆಯಲ್ಲಿ ಸ್ಥಳೀಯರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ದಾಖಲಿಸಿದ್ದರು.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಅರಣ್ಯ ಅಕ್ರಮ ಒತ್ತುವರಿ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಈ ಹಿಂದೆ ಸೂಚಿಸಿತ್ತು.




