ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಲವೇ ದಿನಗಳು ಇವೇ ಎನ್ನುವುವಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಮಮತ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಬಿಜೆಪಿ ವಿರುದ್ದ ಗುಡುಗಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದ ಗೆಲವು ಸಾಧಿಸುವುದು ಖಚಿತ ಎಂದು ಹೇಳಿದ್ದಾರೆ.
ಅವರ ಟ್ವೀಟ್ ಮುಂದುವರೆದು, ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ವತಃ ಆ ಪಕ್ಷದ ನಾಯಕ ರಾಜೀವ್ ಬ್ಯಾನರ್ಜಿ ಹೇಳಿರುವುದರಲ್ಲಿ ಅಚ್ಚರಿಯೇನು ಇಲ್ಲ. ಇದು ಅಪ್ಪಟ ಸತ್ಯ. ಮಮತಾ ಬ್ಯಾನರ್ಜಿ ಅವರು ಕೇವಲ ನಾಯಕಿಯಲ್ಲ, ಸಮಸ್ತ ಬಂಗಾಳಿಗರ ನಾಡಿಮಿಡಿತ. ಈ ಸತ್ಯವನ್ನು ಅರಿಯುವಲ್ಲಿ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.
ಇತಿಹಾಸ ಸೃಷ್ಟಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಮತಾ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 294 ವಿಧಾಸಭೆ ಕ್ಷೇತ್ರಗಳ ಪೈಕಿ 214 ಸ್ಥಾನಗಳನ್ನು ಜಯಿಸಿದ್ದರು. ಆಗಲೇ ಅವರು ಚರಿತ್ರೆ ಬರೆದಿದ್ದರು. ಈಗ ಹೊಸ ಚರಿತ್ರೆ ಸೃಷ್ಟಿಗೆ ಅಣಿಯಾಗಿದ್ದಾರೆ ಭವಿಷ್ಯ ನುಡಿದಿದ್ದಾರೆ.

ಜನರ ಬಾವನೆಗಳನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಂಡು ಗೌರವಿಸಬೇಕು. 2021ರ ಚುನಾವಣೆಯಲ್ಲಿ ಬಂಗಾಳದ ಮಹಾಜನತೆ ಮಮತಾ ಅವರಿಗೆ ಸ್ಪಷ್ಟ ಜನಾದೇಶ ನೀಡಿದ್ದಾಗಿದೆ. ಈ ಉಪ ಚುನಾವಣೆಯಲ್ಲಿ ಯಾವ ಪಕ್ಷವೂ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.
ಬಿಜೆಪಿ ತನ್ನ ಸಂಕುಚಿತ ಮನೋಭಾವ ತೊರೆದು ದೊಡ್ಡತನ ಪ್ರದರ್ಶಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಪ್ರಜಾಬಲಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದು ಟ್ವೀಟಿಸಿದ್ದಾರೆ.






