ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ಮಾಡಿರುವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ವಾಗ್ದಾಳಿ ನಡೆಸಿರುವ ಇಂಧನ ಸಚಿವ ಕೆಜೆ ಜಾರ್ಜ್ ಅವರು, ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ (Dharmasthala) ಆಣೆ ಮಾಡಿದರೆ ಯಾರು ನಂಬುತ್ತಾರೆ?. ಆತ್ಮಸಾಕ್ಷಿಯೇ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಅದಕ್ಕಾಗಿ ಹಣಪಡೆದ ಆಣೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಾರ್ಜ್, ನಾನು 1989 ರಲ್ಲಿ ಮೊದಲ ಬಾರಿ ಮಂತ್ರಿಯಾದವನು, ಕುಮಾರಸ್ವಾಮಿ ಸಂಪುಟದಲ್ಲೂ ಮಂತ್ರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ನಾನು ವರ್ಗಾವಣೆ, ಪ್ರಮೋಷನ್ ಗೆ ಹಣ ಪಡೆದಿಲ್ಲ. ನನ್ನ ಗಮನಕ್ಕೆ ಬಾರದೆ ಆಗುವ ಘಟನೆಗಳಿದ್ದರೆ ನಾನು ಕ್ರಮ ಕೈಗೊಳ್ಳುವೆ, ಸರ್ಕಾರದ ಮೇಲೆ ಆಪಾದನೆ ದಾಖಲೆಗಳಿದ್ದರೆ ನೀಡಲಿ. ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ಯಾರು ನಂಬುತ್ತಾರೆ? ಆತ್ಮಸಾಕ್ಷಿ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಸ್ಪಷ್ಟಪಡಿಸಿದರು.
ವಿದ್ಯುತ್ ಖರೀದಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪ ಆಧಾರ ರಹಿತ. ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ, ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇದೆ. ಅದನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಿಂದ ವಿದ್ಯುತ್ ಕೊರತೆಯಾಗಿಲ್ಲ. ಈ ಬಾರಿ ಮಳೆಯಾಗದ ಕಾರಣ ಜಲ ವಿದ್ಯುತ್ ಕೊರತೆಯಾಗಿದೆ. ಗಾಳಿಯೂ ಸರಿಯಾಗಿ ಬೀಸದ ಹಿನ್ನೆಲೆ ಪವನ ಶಕ್ತಿಯೂ ಕಡಿಮೆಯಾಗಿದೆ. ಕಲ್ಲಿದ್ದಲು ವಿದ್ಯುತ್ ಗುಣಮಟ್ಟದ ಕಾರಣದಿಂದ ಕಡಿಮೆಯಾಗಿದೆ. ಈ ಹಿನ್ನೆಲೆ ವಿದ್ಯುತ್ಕೊರತೆ ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಆದರೆ, ಈ ವರ್ಷ, ಬೇಡಿಕೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ವಿದ್ಯುತ್ ಬೇಡಿಕೆಯು ತುಂಬಾ ಹೆಚ್ಚಿದ್ದು, ಆಗಸ್ಟ್ನಲ್ಲಿನ ವಿದ್ಯುತ್ ಬಳಕೆ ಬೇಸಿಗೆಯ ತಿಂಗಳ ಬಳಕೆಯನ್ನು ಮೀರಿಸಿದೆ’ ಎಂದು ಹೇಳಿದರು.
![](https://pratidhvani.com/wp-content/uploads/2023/10/IMG-20231026-WA0007.jpg)
ರಾಜ್ಯದ ಸ್ಥಾಪಿತ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಸರ್ಕಾರ ಕೃತಕ ವಿದ್ಯುತ್ ಅಭಾವವನ್ನು ಸೃಷ್ಟಿಸುತ್ತಿದೆ. ವಿದ್ಯುತ್ ಖರೀದಿಗೆ ಕಮಿಷನ್ ಪಡೆಯಲಾಗುತ್ತಿದೆ. ರಾಜ್ಯವು 32,912 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಸದ್ಯ ಅಸಮರ್ಪಕ ನಿರ್ವಹಣೆಯಿಂದ ಸುಮಾರು 12,000 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರ ಉತ್ಪಾದಿಸಲಾತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೆಜೆ ಜಾರ್ಜ್, ರಾಜ್ಯವು ಒಟ್ಟು 32,009 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದು ರಾಜ್ಯದೊಳಗೆ ಉತ್ಪಾದಿಸಬಹುದಾದ ಗರಿಷ್ಠ ಪ್ರಮಾಣದ ವಿದ್ಯುತ್ ಆಗಿದೆ. ಈ ಸ್ಥಾಪಿತ ಸಾಮರ್ಥ್ಯದಲ್ಲಿ, 26,000 ಮೆಗಾವ್ಯಾಟ್ ವಿದ್ಯುತ್ ರಾಜ್ಯದ ಯುಟಿಲಿಟಿ ಕಂಪನಿಗಳಿಗೆ ಬಳಸಲು ಲಭ್ಯವಿದೆ. ಆದರೆ, ಉಳಿದ 6,000 ಮೆಗಾವ್ಯಾಟ್ ಅನ್ನು ಖಾಸಗಿ ಬಳಕೆಗೆ ಮೀಸಲಿಡಲಾಗಿದೆ. ರಾಜ್ಯದ ಯುಟಿಲಿಟಿ ಕಂಪನಿಗಳಲ್ಲಿ ಲಭ್ಯವಿರುವ 26,000 ಮೆಗಾವ್ಯಾಟ್ನಲ್ಲಿ ಶೇ 50ರಷ್ಟನ್ನು ಈಗಾಗಲೇ ಬಳಸಲಾಗುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಅಂದಾಜು 11,000 ರಿಂದ 12,000 ಮೆಗಾವ್ಯಾಟ್ ಸಂಗ್ರಹಿಸುವ ಸಾಮರ್ಥ್ಯವಿದೆ. ರಾಜ್ಯವು ಸೌರ ವಿದ್ಯುತ್ ಮೂಲಗಳಿಂದ ವಿದ್ಯುತ್ ಉತ್ಪಾದಿಸುತ್ತದೆ. ಸೌರ ವಿದ್ಯುತ್ ಉತ್ಪಾದನೆ (ಬಿಸಿಲು ಜಾಸ್ತಿಯಿರುವ) ಅತ್ಯಧಿಕವಾಗಿರುವ ಸಮಯದಲ್ಲಿ ಸುಮಾರು 15,000 ರಿಂದ 16,000 ಮೆಗಾವ್ಯಾಟ್ ವರೆಗೆ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದರು.
ಹೀಗಾಗಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಸವಾಲುಗಳ ನಡುವೆಯೂ ರಾಜ್ಯದ ಜನತೆಗೆ ಹಾಗೂ ನಿರಂತರ ವಿದ್ಯುತ್ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರನ್ನು ದಾರಿ ತಪ್ಪಿಸುವ ಸಲುವಾಗಿಯೇ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಹೀಗಾಗಿ, ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ಅಥವಾ ಸರ್ಕಾರದ ಯಾವುದೇ ಅವ್ಯವಹಾರದ ಪ್ರಶ್ನೆಯೇ ಇಲ್ಲ ಎಂದು ಎಚ್ಡಿ ಕುಮಾರಸ್ವಾಮಿ ಅವರಿಗೆ ಹೇಳಬಯಸುತ್ತೇನೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ವಿದ್ಯುತ್ ಖರೀದಿ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತಾರೆ ಮತ್ತು ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಸತ್ಯಕ್ಕೆ ದೂರವಾಗಿದ್ದು, ರಾಜ್ಯದ ಜನರನ್ನು ದಾರಿ ತಪ್ಪಿಸುವ ಹುಚ್ಚು ಕಲ್ಪನೆಗಳು ಮಾತ್ರ ಇವೆ’ ಎಂದು ಅವರು ಹೇಳಿದರು.