
ಒಕ್ಕಲಿಗ ಸಮುದಾಯದ ಪಾರುಪತ್ಯಕ್ಕೆ ಡಿಕೆಶಿ ಹಾಗೂ ದೊಡ್ಡಗೌಡ್ರ ಕುಟುಂಬದ ನಡುವೆ ದಶಕಗಳಿಂದಲೂ ಪೈಪೋಟಿ ಇದ್ದೇ ಇದೆ. ಪ್ರಸಕ್ತ ಲೋಕಸಭಾ ಎಲೆಕ್ಷನ್ನಲ್ಲಿ ಇದೇ ವಿಚಾರ ತೀವ್ರ ಮಟ್ಟದ ವಾಕ್ಸಮರಕ್ಕೂ ಸಾಕ್ತಿಯಾಗ್ತಿದೆ. ದೇವೇಗೌಡ್ರ ಆಸ್ತಿ ಬಗ್ಗೆ ದೊಡ್ಡ ಮಟ್ಟದ ಆರೋಪ ಮಾಡಿದ್ದ ಡಿಕೆಶಿಗೆ ದೊಡ್ಡಗೌಡ್ರು ಸರಿಯಾಗಿಯೇ ಟಾಂಗ್ ನೀಡಿದ್ದಾರೆ.ಲೋಕಸಭಾ ಚುನಾವಣೆ ಹಿನ್ನಲೆ ಅಬ್ಬರದ ಪ್ರಚಾರವನ್ನ ನಡೆಸುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನನ್ನ ಕೈ ಬಲಪಡಿಸಿ ಎಂದು ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿರುಗೇಟು ನೀಡಿದ್ದಾರೆ.

ಅವರನ್ನ ಬಲಪಡಿಸಬೇಕೇ…ಏಕೆ…? 9 ವರ್ಷದ ಹುಡುಗಿಯನ್ನ ತೆಗೆದುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕಾ? ಎಂದು ಡಿ ಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಅಮೇರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಸ್ವದೇಶಕ್ಕೆ ವಾಪಸ್ಸಾದ ವ್ಯಕ್ತಿಯೊಬ್ಬ ಬಿಡದಿ ಬಳಿ ಒಂದು ಐಟಿ ಕಂಪನಿ ಸ್ಥಾಪಿಸಲು ಜಮೀನು ಖರೀದಿಸುತ್ತಾರೆ. ಆದರೆ ಡಿ ಕೆ ಶಿವಕುಮಾರ್ ಸುಳ್ಳು ದಾಖಲಾತಿ ಪತ್ರಗಳನ್ನು ತಯಾರಿಸಿ ಆ ಜಮೀನನ್ನು ಕಬಳಿಸಲು ಪ್ರಯತ್ನಿಸುತ್ತಾರೆ. ಆ ವ್ಯಕ್ತಿ ಕೋರ್ಟ್ ಮೊರೆಹೊಕ್ಕಾಗ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯ ಎರಡರಲ್ಲೂ ಶಿವಕುಮಾರ್ ಗೆ ಸೋಲಾಗುತ್ತದೆ. ನಂತರ ಅ ನಿರ್ದಿಷ್ಟ ಜಮೀನನ್ನು ಪಡೆಯಲೇ ಬೇಕೆಂದು ಹಠಕ್ಕೆ ಬೀಳುವ ಶಿವಕಮಾರ್ ಅ ವ್ಯಕ್ತಿಯ 9-ವರ್ಷದ ಮಗಳನ್ನು ಅಪಹರಿಸಿ ಯಾವುದೋ ಮನೆಯಲ್ಲಿ ಕೂಡಿಹಾಕುತ್ತಾರೆ ಎಂದು ದೇವೇಗೌಡರು ಹಿಂದಿನ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಮಗು ದೂರವಾದ ಕಾರಣ ಅನ್ನ ನೀರು ಬಿಟ್ಟಿದ್ದ ತಾಯಿ ತನ್ನ ಗಂಡನಿಗೆ ಜಮೀನಿನ ಸಹವಾಸವೇ ಬೇಡ, ಮಗುವನ್ನು ವಾಪಸ್ಸು ಕರೆದುಕೊಂಡು ಬರಲು ಹೇಳಿದಾಗ ಅ ವ್ಯಕ್ತಿ ಅಲ್ಲಿಗೆ ಹೋದಾಗಲೂ ಆತನಿಗೆ ಮತ್ತು ಮಗುವಿಗೆ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಹೇಳಲಾಗಿದೆ. ನಿನ್ನ ಮಗಳು ಬೇಕು ಅಂದ್ರು ಸಹಿ ಮಾಡು ಎನ್ನುತ್ತಾರೆ. ಆ ತಾಯಿ ಎಲ್ಲಾ ಬರೆದುಕೊಡು ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಗಂಡನ ಕಾಲು ಹಿಡಿಯುತ್ತಾಳೆ. ಅಲ್ಲಿಗೆ ಹೋದಾಗ, ಆ ಮಗುನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ನನ್ನ ಮುಂದೆ ದಾಖಲೆ ಇದೆ, ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತಾ ಲಾಯರ್ ತಂದು ಕೊಟ್ರು. ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲೀಸ್ಟ್ ನಲ್ಲಿ ಇಲ್ಲ. ಈ ಕರ್ನಾಟಕ ಸಾಕು ಅಂತಾರೆ. ಅವರ ಹೆಸರು ನನಗೆ ಮರೆತೋಗಿದೆ, ಬಹಳ ವರ್ಷ ಆಯ್ತು, ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡುತ್ತಾರೆ ಎಂದು ದೇವೇಗೌಡ್ರು ಹೇಳಿದರು.ಒಟ್ನಲ್ಲಿ ದಿನದಿಂದ ದಿನಕ್ಕೆ ಡಿಕೆಶಿ ಹಾಗೂ ದೊಡ್ಡಗೌಡ್ರ ಫ್ಯಾಮಿಲಿ ನಡುವೆ ವಾಗ್ಯುದ್ಧ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಷನ್ ಅಖಾಡದಲ್ಲಿ ಮತ್ತಷ್ಟು ಆರೋಪ ಪ್ರತ್ಯಾರೋಪಗಳು ತೂರಿಬರುವ ಸಾಧ್ಯತೆ ಇದೆ.