ಡಿಸೆಂಬರ್ 19 ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭ ಆಗ್ತಿದೆ. 15ನೇ ವಿಧಾನಸಭೆಯ 14ನೇ ಅಧಿವೇಶನದ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದು, ಅಧಿವೇಶನಕ್ಕೆ ಜಿಲ್ಲಾಡಳಿತ ಹದಿನೈದು ತಂಡಗಳನ್ನ ಮಾಡಿಕೊಂಡಿದ್ದಾರೆ. ಉಭಯ ವಿಧಾನಮಂಡಲದ ವತಿಯಿಂದ ಅಧಿಕಾರಿಗಳ ಜೊತೆಗೆ ಸಭೆ ಮಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು, ಶಾಸಕರು, ಅಧಿಕಾರಿಗಳ ವಸತಿ ಬಹಳ ದೊಡ್ಡ ವ್ಯವಸ್ಥೆ ಮಾಡಿದ್ದೇವೆ. ಎರಡು ಸಾವಿರಕ್ಕೂ ಅಧಿಕ ರೂಮ್ಗಳನ್ನ ಈಗಾಗಲೇ ವ್ಯವಸ್ಥೆ ಮಾಡಿದ್ದೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಹತ್ತನೇ ಅಧಿವೇಶನ ಇದಾಗಿದೆ ಎಂದಿದ್ದಾರೆ. ಬೆಳಗಾವಿಯಲ್ಲಿ ಈ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಕೊನೆಯ ಅಧಿವೇಶನ, ಈಗಾಗಲೇ ಪ್ರಶ್ನೆಗಳನ್ನ ನಾವು ತೆಗೆದುಕೊಳ್ಳುತ್ತಿದ್ದೇವೆ. ಸಾರ್ವಜನಿಕರಿಗೆ ಸದನ ನೋಡಲು ಮುಕ್ತವಾದ ಅವಕಾಶ ಇದೆ ಎಂದಿದ್ದಾರೆ.
ಕುಮಾರಸ್ವಾಮಿ ಕೆಂಗಣ್ಣಿನಿಂದ ಪಾರಾಗಲು ತಂತ್ರ..!
ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಸರ್ಕಾರದ ಕಡೆಯಿಂದ ಈ ಅಧಿವೇಶನದಲ್ಲಿ ಆರು ಬಿಲ್ಗಳನ್ನು ಮಂಡನೆ ಮಾಡಲಾಗ್ತಿದೆ. ಆದರೆ ಇದು ಬೆಳಗಾವಿಯಲ್ಲಿ ನಡೆಯುವ ಕೊನೆಯ ಅಧಿವೇಶನ ಆಗಿದ್ದು, ಮುಂದಿನ ಅಧಿವೇಶದ ವೇಳೆಗೆ ಚುನಾವಣೆ ಕಾವು ಏರಿಕೆ ಆಗಿರುತ್ತದೆ. ಇನ್ನು ಈ ಅಧಿವೇಶನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಲು ಯೋಜನೆ ರೂಪಿಸಿಕೊಂಡಿದ್ದರು. ಕಳೆದ ಅಕ್ಟೋಬರ್ 1ರಂದು ಚನ್ನಪಟ್ಟಣದಲ್ಲಿ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಲು ಮುಂದಾಗಿದ್ದರು. ಆದರೆ ಸ್ಥಳೀಯ ಶಾಸಕರಾದ ಕುಮಾರಸ್ವಾಮಿಗೆ ಆಹ್ವಾನ ನೀಡದೆ ವಿಧಾನಪರಿಷತ್ ಸದಸ್ಯರು ಕಾರ್ಯಕ್ರಮ ಮಾಡಲು ಮುಂದಾಗಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಜೆಡಿಎಸ್ ಕಾರ್ಯಕರ್ತರು ಸಿ.ಪಿ ಯೋಗೇಶ್ವರ್ ಕಾರಿನ ಮೇಲೆ ದಾಳಿ ಮಾಡಿದ್ರು. ಅಲ್ಲಿಂದ ವಾಪಸ್ ಹೋಗುವಂತೆ ಮಾಡಿದ್ದರು. ಈ ಬಗ್ಗೆ ಸರ್ಕಾರದ ಬಳಿ ಪ್ರಶ್ನಿಸುವುದಾಗಿ ಕುಮಾರಸ್ವಾಮಿ ಅಂದೇ ಮಾಧ್ಯಮಗಳ ಎದುರು ಹೇಳಿದ್ದರು.
ಅಧಿಕಾರಿಯನ್ನು ಅಮಾನತು ಮಾಡಿ ಸರ್ಕಾರದ ಜಾಣ ನಡೆ..!
ಶಾಸಕರನ್ನು ಆಹ್ವಾನಿಸಿ, ಆ ಬಳಿಕ ಶಾಸಕರಿಗೆ ಕಾರ್ಯಕ್ರಮ ಮುಂದೂಡಿಕೆ ಆಗಿದೆ ಎನ್ನುವ ಪತ್ರವನ್ನು ಕಳುಹಿಸಿ ಕುಮಾರಸ್ವಾಮಿ ಅವರ ಗೈರು ಹಾಜರಿಯಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ನಡೆದಿತ್ತು. ಆದರೆ ಇದನ್ನು ಜೆಡಿಎಸ್ ಕಾರ್ಯಕರ್ತರು ತಡೆದಿದ್ದರು. ಇದೀಗ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದಲ್ಲಿ ರಾಮನಗರ ವಿಭಾಗದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ವಿ.ಶ್ರೀಧರ್ ಅವರನ್ನು ಅಮಾನತು ಮಾಡಲಾಗಿದೆ. ಚನ್ನಪಟ್ಟಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕುಮಾರಸ್ವಾಮಿ ಒತ್ತಾಯಿಸಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸಿರಲಿಲ್ಲ. ಇದೀಗ ಬೆಳಗಾವಿ ಅಧಿವೇಶನ ನಡೆಯುವ ಮುನ್ನ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಕ್ಷೇತ್ರದ ಕಾರ್ಯಕ್ರಮದಲ್ಲಿ ಶಾಸಕರು ಇರಲೇ ಬೇಕಾ..?
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆದಿತ್ತು. ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಕ್ಷೇತ್ರದಲ್ಲಿ ಶಾಸಕರ ಗೈರು ಹಾಜರಿಯಲ್ಲಿ ಕಾರ್ಯಕ್ರಮ ಮಾಡಲು ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ ಎಂದು ಕುಮಾರಸ್ವಾಮಿ ದೂರಿದ್ದರು. ಅಕ್ಟೋಬರ್ 1 ರಂದು ಚನ್ನಪಟ್ಟಣದಲ್ಲಿ ನಡೆದಿದ್ದ ಗಲಾಟೆ ವಿಚಾರವಾಗಿ KRIDL ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಜೆ.ಹಿರೇಮಠ ರಾಮನಗರ ವಿಭಾಗದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ವಿ.ಶ್ರೀಧರ್ ಅವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸ್ವತಃ ಶಾಸಕರ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆಯಬೇಕು ಅನ್ನೋ ಕಾನೂನು ಜಾರಿಯಲ್ಲಿದೆ. ಸಿ.ಪಿ ಯೋಗೇಶ್ವರ್ ಸ್ವಯಂ ಸರ್ಕಾರದ ಬಳಿ ಮನವಿ ಮಾಡಿಕೊಂಡು 50 ಕೋಟಿ ಅನುದಾನ ತಂದರೂ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆಯಬೇಕು ಅನ್ನೋದು ನಿಯಮ. ಹೀಗಾಗಿ ಆ ಕಾರ್ಯಕ್ರಮದಲ್ಲಿ ತಪ್ಪು ನಡೆದಿದೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ಅಮಾನತು ಆದೇಶ ಹೊರಬಿದ್ದಿದೆ.
ಕೃಷ್ಣಮಣಿ