ಮಂಡ್ಯ (Mandya) : ಹೊಟ್ಟೆಪಾಡಿಗಾಗಿ ದೇವೇಗೌಡರು (DeveGowda) ಬಿಜೆಪಿ (BJP) ಜತೆ ಹೋಗಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ (N Chaluvarayaswamy) ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ಅವರು ತೀವ್ರ ಆಕ್ರೋಶ ವ್ಯಕ್ತಪಡಿ̧ಸಿ, ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ತಮ್ಮನ್ನು ಮಂತ್ರಿ ಮಾಡಿಸುವಂತೆ ಈ ವ್ಯಕ್ತಿ ನನಗೆ ದುಂಬಾಲು ಬಿದ್ದಿದ್ದರು. ಹೊಟ್ಟೆ ಪಾಡಿಗಾಗಿ ಆಗ ಇವರು ನನಗೆ ದುಂಬಾಲು ಬಿದ್ದಿದ್ದರಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಈತನನ್ನು ಮಂತ್ರಿ ಮಾಡಲು 58 ಶಾಸಕರ ಸಭೆಯನ್ನು ನಾನು ನಡೆಸಬೇಕಾಯಿತು. ಪಿ.ಜಿ.ಆರ್.ಸಿಂಧ್ಯಾ ಅವರ ಮನೆಯಲ್ಲಿ ನಿರ್ಧಾರ ಆಗಿದ್ದು, ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರನ್ನು ಮಂತ್ರಿ ಮಾಡಬೇಕು ಎಂದು. ಆದರೆ ನಾನು ಎಲ್ಲರನ್ನೂ ಒಪ್ಪಿಸಿ ಚೆಲುವರಾಯಸ್ವಾಮಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ವಿಜಯಲಕ್ಷ್ಮಿ ಅವರ ಹೆಸರನ್ನು ಹೊಡೆಸಿ ಹಾಕಿಸಿದೆ. ಇದನ್ನು ನಾನು ಮಾಡಿದ್ದು ಹೊಟ್ಟೆಪಾಡಿಗಾಗಿಯೇ? ಇಂಥ ಮನುಷ್ಯ ನಮ್ಮ ಹೊಟ್ಟೆಪಾಡಿನ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮದು ಹೊಟ್ಟೆಪಾಡು ಎನ್ನುವ ಈ ಮನುಷ್ಯ ಹುಟ್ಟಿದಾಗಲೇ ಮಹಾರಾಜರ ವಂಶಸ್ಥರಾ? ಅವರ ಬಗ್ಗೆ ನನಗಿಂತ ನಾಗಮಂಗಲದ (Nagamangala) ಜನತೆಗೆ ಚೆನ್ನಾಗಿ ಗೊತ್ತಿರಬೇಕು. ನನ್ನ ಹೊಟ್ಟೆಪಾಡಿನ ಬಗ್ಗೆ ಮಾತನಾಡುವ ಇವರು, ಆರು ತಿಂಗಳು ನನ್ನ ಬಳಿ ಗೋಳಾಡಿದರು. ಮಂತ್ರಿ ಮಾಡಲಿಲ್ಲ ಅಂತಾ ನನ್ನ ಹಿಂದೆ ಬಿದ್ದಿದ್ದರು. ಈ ಮನುಷ್ಯನಿಗಾಗಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರಿಗೆ ಅವಕಾಶ ತಪ್ಪಿಸಲಾಯಿತು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ಪಕ್ಷ ಹೇಗೆ ಕಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ನನ್ನ ಬಿಡದಿ ತೋಟ ಮಾರಿ ಚುನಾವಣೆ ಮಾಡಲು ಹೋಗಿದ್ದೆ. ಬಡ್ಡಿ ವ್ಯವಹಾರ ಮಾಡುವವರಿಂದ ಹಣ ತಂದು ಚುನಾವಣೆ ಮಾಡಿದ್ದೇವೆ. ನಾವು ಬೇರೆ ಹಾದಿಯಿಂದ ಹಣ ಸಂಪಾದಿಸಿಲ್ಲ. ಇವತ್ತು ಪಕ್ಷದಿಂದ ಜಾತ್ಯತೀತ ಪದ ತೆಗೆದು ಬಿಡಿ ಅಂತಾರೆ ಇವರು. ನಮಗಾಗಿ ಇನ್ನೊಬ್ಬರಿಗೆ ನಾನು ತೊಂದರೆ ಕೊಟ್ಟಿಲ್ಲ. ಮತ್ತೊಬ್ಬರ ಬಾಳು ಹಾಳು ಮಾಡಿಲ್ಲ ನಾನು. ಬಿಜೆಪಿ (BJP) ಮೈತ್ರಿಗೆ ಕಾರಣ ಯಾರು? ನಮ್ಮ ಪಕ್ಷದ ವಿರುದ್ಧ ಸಂಘಟಿತ ಅಪಪ್ರಚಾರ ನಡೆಸಿದ್ದು ಇವರೇ ಅಲ್ಲವೇ ಎಂದು ಅವರು ಕಿಡಿಕಾರಿದರು.

2018ರಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲೂ ಬಹಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು, ಮಂಡ್ಯ ಜನ. ಅಂದು ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ (Congress) ಜತೆ ಸರಕಾರ ಮಾಡಿದೆ. ಮೊದಲ ಬಜೆಟ್ ಮಂಡಿಸಲು ಅವಕಾಶ ಕೊಡಲಿಲ್ಲ. ನಮ್ಮ ಹಳೆಯ ಬಜೆಟ್ ಮುಂದುವರಿಸಿ ಅಂದರು. ಸ್ವತಂತ್ರವಾಗಿ ಸರಕಾರ ನಡೆಸಲು ಬಿಡಲಿಲ್ಲ. ಆದರೂ ದೇವೇಗೌಡರ ಬಗ್ಗೆ ಇವರು ಕೇವಲವಾಗಿ ಮಾತನಾಡುತ್ತಾರೆ. ಪ್ರಧಾನಿಯಾಗಿ ಅವರು ಅದ್ಭುತ ಕಾರ್ಯಕ್ರಮಗಳನ್ನು ಕೊಟ್ಟರು. ಅವರು ಎಂದೂ ಸ್ವಾಭಿಮಾನ ಬಿಟ್ಟುಕೊಡಲಿಲ್ಲ. ಇವತ್ತು ಗ್ಯಾರಂಟಿ ಗ್ಯಾರಂಟಿ (guarantee) ಅಂತಾರೆ. ಫ್ರೀ ಕರೆಂಟ್ ಅಂತಾರೆ. ಅದರಲ್ಲಿ ದೊಡ್ಡ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆ ಅನ್ನೋದು ಬೋಗಸ್ ಎಂದು ಕೆಂಡಮಂಡಲಾರಾದರು.
ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ. ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಈ ಜಿಲ್ಲೆಯ ಜನತೆಗೆ ಸ್ಪಷ್ಟವಾಗಿ ಮನವಿ ಮಾಡಲು ಬಯಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಿದ್ಧರಿದ್ದೇವೆ. ತಪ್ಪು ತಿದ್ದಿಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
#karnataka #mandya #loksabhaelection #hdkumarswamy #hddevegowdru #chaluvarayaswamy #jds #bjp