ಹಾಸನ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಈ ಬಾರಿ ಯಾರು ಅಧಿಕಾರದ ಗದ್ದುಗೆ ಏರುತ್ತಾರೆ ಅನ್ನೋದೇ ದೊಡ್ಡ ಸವಾಲಾಗಿದೆ. ಈ ಎಲ್ಲದರ ನಡುವೆ ದಳಪತಿಗಳಿಗೆ ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಸನ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡೋದು ಎಂಬುದೇ ಇದೀಗ ದಳಪತಿಗಳಿಗೆ ದೊಡ್ಡ ಪ್ರಶ್ನೆಯಾಗಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇದೀಗ ಹಾಸನ ಟಿಕೆಟ್ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ.

ಇಂದು ಹಾಸನ ಜಿಲ್ಲೆಯ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಹಾಗೂ ಹಾಸನ ಜಿಲ್ಲಾ ಪಕ್ಷದ ಮುಖಂಡರ ಜೊತೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಇಂದು ಸಭೆ ಕರೆದಿದ್ದಾರೆ. ಎಲ್ಲರಿಂದ ಅಭಿಪ್ರಾಯ ಸಂಗ್ರಹ ಮಾಡಿ ಬಳಿಕ ಟಿಕೆಟ್ ಯಾರಿಗೆ ನೀಡೋದು ಎಂಬ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಹಾಸನ ಕ್ಷೇತ್ರದ ಟಿಕೆಟ್ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಪತ್ನಿಗೆ ಹೇಗಾದರೂ ಮಾಡಿ ಟಿಕೆಟ್ ಕೊಡಿಸಬೇಕು ಅನ್ನೋದು ಮಾಜಿ ಸಚಿವ ರೇವಣ್ಣರ ಪ್ಲಾನ್ ಆಗಿದೆ. ಆದರೆ ಇದಕ್ಕೆ ಹೆಚ್ಡಿಕೆ ಸಮ್ಮತಿ ನೀಡುತ್ತಿಲ್ಲ ಮಾತ್ರವಲ್ಲದೇ ಸ್ವರೂಪ್ ಕಡೆಗೆ ಕುಮಾರಸ್ವಾಮಿ ಒಲವು ಹೆಚ್ಚಿದೆ. ಆದರೆ ಸ್ವರೂಪ್ಗೆ ಹಾಸನದಲ್ಲಿ ಟಿಕೆಟ್ ಸಿಕ್ಕರೆ ರೇವಣ್ಣರ ಪ್ರತಿಷ್ಠೆಗೆ ಮುಖಭಂಗವಾದಂತಾಗುತ್ತದೆ. ಹಾಸನ ಜಿಲ್ಲೆಯ ಟಿಕೆಟ್ ಸಹೋದರರ ನಡುವೆ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಇದೀಗ ದೇವೇಗೌಡರು ಮಧ್ಯ ಪ್ರವೇಶ ಮಾಡಿದ್ದಾರೆ. ಇಂದು ಎಲ್ಲರಿಂದ ಅಭಿಪ್ರಾಯ ಸ್ವೀಕರಿಸಿ ದೇವೇಗೌಡ ಹಾಸನ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆಯಿದೆ.