ರಾಜ್ಯ ವಿಧಾನಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಡೀ ಕರ್ನಾಟಕದಲ್ಲಿ ಮೂರು ರಾಜಕೀಯ ಪಕ್ಷಗಳು ತಾಮುಂದು ನಾಮುಂದು ಎನ್ನುತ್ತ ಚುನಾವಣಾ ಪ್ರಚಾರ ಸಭೆ, ಱಲಿಗಳನ್ನು ಮಾಡಿದ್ದು, ಅಂತಿಮ ಪ್ರಚಾರಕ್ಕೆ ಇಂದೇ ಕೊನೇ ದಿನ. ರಾಜ್ಯ ಮಟ್ಟದ ಸುದ್ದಿ ವಾಹಿನಿಗಳಲ್ಲಿ ದಿನಕ್ಕೆ ಒಂದರಂತೆ ಚುನಾವಣಾ ಸಮೀಕ್ಷೆಗಳನ್ನು ಪ್ರಕಟ ಮಾಡಲಾಗುತ್ತಿದೆ. ಅದರಲ್ಲಿ ಒಂದು ಚಾನೆಲ್ ಒಂದು ಪಕ್ಷಕ್ಕೆ ಮುನ್ನಡೆ ಅಂತಾ ಮಾಹಿತಿ ಕೊಟ್ಟರೆ, ಮತ್ತೊಂದು ಚಾನೆಲ್ ಇನ್ನೊಂದು ಪಕ್ಷಕ್ಕೆ ಮುನ್ನಡೆ ಎಂದು ಹೇಳುತ್ತಿವೆ. ಇದು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟವನ್ನು ಪ್ರದರ್ಶನಕ್ಕೆ ಇಟ್ಟಂತೆ ಆಗಿದೆ. ಜನರು ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಅನ್ನೋದ್ರ ಬಗ್ಗೆ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈ ಸರ್ವೇಗಳು ಎಷ್ಟು ಸತ್ಯ ಎನ್ನುವ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ.

ಚುನಾವಣಾ ಸರ್ವೇ ಅಂದರೆ ಹಗೇಗಿರಬೇಕು..? ಈಗ ಏನಾಗಿದೆ..?
ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದಾಗ ಚುನಾವಣಾ ಸಮೀಕ್ಷೆಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಒಂದು ಸರ್ವೇ ಹಾಗು ಮತ್ತೊಂದು ಸರ್ವೇ ಅಂಕಿ ಅಂಶಗಳಿಗೆ ಕೆಲವೊಂದಿಷ್ಟು ನಂಬರ್ಗಳಲ್ಲಿ ವ್ಯತ್ಯಾಸ ಇರುತ್ತದೆ. ಸೂಕ್ತ ರೀತಿಯಲ್ಲಿ ಸರ್ವೇ ಮಾಡಿದ್ದರೆ ರಾಜ್ಯದ ಜನರ ಮನಸ್ಸಿತಿ ಯಾವ ಕಡೆಗೆ ಇದೆ ಎನ್ನುವುದು ಎಲ್ಲರಿಗೂ ತಿಳಿಯುವಂತೆ ಇರುತ್ತದೆ. ಆದರಲ್ಲಿ ಒಂದೆರಡು ಸ್ಥಾನಗಳ ವ್ಯತ್ಯಾಸ ಇರಬಹುದು. ಆದರೆ ರಾಜ್ಯದಲ್ಲಿ ಒಂದು ಸರ್ವೇ ಒಂದು ಪಕ್ಷಕ್ಕೆ ಮತ್ತೊಂದು ಸರ್ವೇ ಮತ್ತೊಂದು ಪಕ್ಷಕ್ಕೆ ಎನ್ನುವಂತಿದೆ. ಈ ಸರ್ವೇಗಳು ಹಣ ಕೊಟ್ಟು ಮಾಡಿಸಿರುವುದು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುವಂತಿದೆ. ಅದರಲ್ಲೂ ವಿಶೇಷವಾದ ಸಂಗತಿ ಎಂದರೆ ಒಂದೇ ಟಿವಿಯಲ್ಲಿ ಬೆಳಗ್ಗೆ ಒಂದು ಪಕ್ಷಕ್ಕೆ ಬಹುಮತ ಕೊಟ್ಟು ಸಂಜೆ ಇನ್ನೊಂದು ಪಕ್ಷಕ್ಕೆ ಬಹುಮತ ಎಂದು ಹೇಳಿರುವುದು ಮುಜುಗರ ಸೃಷ್ಟಿಸುವಂತಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಸತ್ಯವೇ..?
ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ರಾಜ್ಯದಲ್ಲಿ 123 ಸ್ಥಾನಗಳಲ್ಲಿ ಗೆಲುವು ಕಾಣಬೇಕು ಎನ್ನುವ ಉದ್ದೇಶದಿಂದ ರಾಜ್ಯಾದ್ಯಂತ ಪಂಚರತ್ನ ಯೋಜನೆಗಳ ಬಗ್ಗೆ ಅಬ್ಬರದ ಪ್ರಚಾರ ಮಾಡಿದ್ದಾರೆ. ಆದರೂ ಸರ್ವೇಗಳಲ್ಲಿ ಒಂದಿಷ್ಟು ಸ್ಥಾನಗಳು ಏರಿಕೆ ಕಂಡಿಲ್ಲ. ಬದಲಿಗೆ ಜೆಡಿಎಎಸ್ 20 ರಿಂದ 25 ಸ್ಥಾನ ಅಥವಾ 30 ರಿಂದ 32 ಸ್ಥಾನ ಎಂದೇ ಎಲ್ಲಾ ಸರ್ವೇಗಳಲ್ಲೂ ತೋರಿಸುತ್ತಿದ್ದಾರೆ. ಈ ಬಗ್ಗೆ ಪ್ರಚಾರ ಸಭೆಗಳಲ್ಲಿ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಕೂಡ ಮಾಧ್ಯಮಗಳಿಗೆ 20 ಕೋಟಿ ರೂಪಾಯಿ ಖರ್ಚು ಮಾಡಿದರೆ ನಮ್ಮ ಜೆಡಿಎಸ್ ಪಕ್ಷದ ಸಂಖ್ಯೆ 129 ಆಗುತ್ತದೆ. ಯಾರೊಬ್ಬರೂ ಸರ್ವೇ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ 100 ಸ್ಥಾನಗಳನ್ನು ಮೀರುವುದಕ್ಕೆ ಸಾಧ್ಯವೇ ಇಲ್ಲ. ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರುವುದು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಸುಳ್ಳು ಸರ್ವೇಗಳಿಂದ ಆಗುವ ಲಾಭ ಆದರೂ ಏನು..?
ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗು ಬಿಜೆಪಿ ಭರ್ಜರಿ ಹಣ ವೆಚ್ಚ ಮಾಡುತ್ತಿರುವುದು ಸುಳ್ಳೇನು ಅಲ್ಲ. ಕೋಟಿ ಕೋಟಿ ರೂಪಾಯಿ ಪಾರ್ಟಿ ಫಂಡ್ ಇರುವ ಕಾರಣಕ್ಕೆ ಕೋಟಿ ಕೋಟಿ ಹಣವನ್ನು ಪ್ರಚಾರಕ್ಕಾಗಿ ಸುರಿಯುತ್ತಿದ್ದಾರೆ. ಅದರಲ್ಲಿ ಸರ್ವೇ ಅನ್ನೋದು ಕೂಡ ಒಂದು ಪ್ರಚಾರದ ಭಾಗವೇ ಆಗಿದೆ. ಒಂದೊಂದು ಸಂಸ್ಥೆಗಳ ಹೆಸರಲ್ಲಿ ಸರ್ವೇಗಳನ್ನು ಜನರಿಗೆ ಮುಟ್ಟಿಸುವುದು. ಈ ಮೂಲಕ ಪಕ್ಷದ ಪರವಾಗಿ ಜನರ ಒಲವು ಇದೆ ಎನ್ನುವುದನ್ನು ಪ್ರಚಾರ ಮಾಡುವುದು ಇದರ ಉದ್ದೇಶ. ಆದರೆ ಸರ್ವೇಗಳಿಗೆ ಪ್ರತಿಯಾಗಿ ಮತ್ತೊಂದು ಪಕ್ಷ ಕೂಡ ಸರ್ವೇ ಹೆಸರಲ್ಲೇ ಜನರನ್ನು ಮೋಸಗೊಳಿಸಿ ಜನರ ಮನಸ್ಸು ನಮ್ಮ ಕಡೆಗೆ ಇದೆ ಎಂದು ಜನರಲ್ಲಿ ಗೊಂದಲ ಮೂಡಿಸುವುದು. ಒಂದು ಪಕ್ಷದ ಪರವಾಗಿ ಜನಾಭಿಪ್ರಾಯ ಮೂಡದಂತೆ ಮಾಡುವುದೇ ಇದರ ಉದ್ದೇಶ ಆಗಿದೆ ಎನಿಸುತ್ತದೆ. ಆದರೂ ಸರ್ವೇಗಳನ್ನು ಮುಂದಿನ ದಿನಗಳಲ್ಲಿ ನಂಬುವ ಸಾಧ್ಯತೆ ಕಡಿಮೆ ಆದಂತಿದೆ.
ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆ ನಿಜ ಇರುತ್ತಾ..!?
ಈ ಬಾರಿ ಸರ್ವೇಗಳಿಗೆ ಲೆಕ್ಕ ಇಲ್ಲದಂತಾಗಿದ್ದು, ಸರ್ವೇಗಳು ಮಾನ್ಯತೆ ಕಳೆದುಕೊಳ್ಳುವಂತಾಗಿದೆ. ಆದರೆ ಚುನಾವಣೆ ಮುಗಿದ ಬಳಿಕ ಅಂದತೆ ಮೇ 10 ರಂದು ಚುನಾವಣೋತ್ತರ ಸಮೀಕ್ಷೆ ಪ್ರಕಟ ಆಗಲಿದೆ. ಆಗಲಾದರೂ ನಿಜವಾದ ಸಮೀಕ್ಷೆ ಪ್ರಕಟಗೊಂಡರೆ ಸಮೀಕ್ಷೆಗಳ ಮಾನ ಉಳಿಯಲಿದೆ. ಆದರೆ ಆಗಲೂ ಒಂದೊಂದು ಪಕ್ಷಗಳಿಗೆ ಒಂದೊಂದು ಟಿವಿ ಎನ್ನುವಂತೆ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದರೆ ಮುಂದಿನ ದಿನಗಳಲ್ಲಿ ಸರ್ವೇ ಎನ್ನುವುದೇ ಸುಳ್ಳಿನ ಕಂತೆ ಅನ್ನೋದು ಜನರ ಎದುರು ಬಟಾಬಯಲಾಗಲಿದೆ. ಅಷ್ಟೇ ಅಲ್ಲದೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಯಾವುದೇ ಸರ್ವೇಗಳಲ್ಲಿ 35 ಸ್ಥಾನಗಳನ್ನು ದಾಟಿಸಿಲ್ಲ. ಒಂದು ವೇಳೆ ಜೆಡಿಎಸ್ಗೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಸರ್ವೇ ಮಾನ ಹರಾಜಕು ಆಗಲಿದೆ.
ಕೃಷ್ಣಮಣಿ