ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಕೋಮು ಗಲಭೆಗೆ ಪ್ರಚೋದಿಸಿದ ಆರೋಪದಡಿಯಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅಖಿಲ ಭಾರತ ಕ್ರೈಸ್ತ ಮಹಾಸಭಾ ನೀಡಿದ ದೂರಿನ ಮೇಲೆ ಹಾಗೂ ಖಾಸಗಿ ದೂರದರ್ಶನ ವಾಹಿನಿ ಬಿತ್ತರಿಸಿರುವ ಅಂಶಗಳ ಆಧಾರದಲ್ಲಿ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದು ಓಡಿಸಿ ಎಂದು ಕೋಮು ದ್ವೇಷ ಭಾಷಣ ಮಾಡಿ ಅಲ್ಪಸಂಖ್ಯಾತ ಕ್ರೈಸ್ತರ ಗೌರವ ಹಾಗೂ ಹಕ್ಕುಗಳಿಗೆ ಚ್ಯುತಿ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನ ಹಿನ್ನಲೆ 2023ನೇ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿರುವ ಚುನಾವಣಾಧಿಕಾರಿಗಳು ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2023ನೇ ಸಾರ್ವತ್ರಿಕ ಚುನಾವಣೆಯ ಕರ್ತವ್ಯದಲ್ಲಿರುವ ಪ್ರೈಯಿಂಗ್ ಸ್ಕಾಡ್ ಟೀಮ್ 11ರ ಲೀಡರ್ ಮನೋಜ್ ಕುಮಾರ್ ಅವರು ಠಾಣೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆ ಎಫ್ ಐಆರ್ ದಾಖಲಾಗಿದೆ.
ಸಚಿವ ಮುನಿರತ್ನ ಅವರ ವಿರುದ್ಧ ಪ್ರಜಾಪ್ರತಿನಿಧಿಗಳ ಕಾಯ್ದೆ 1950, 1951, 1969ರ ಕಲಂ 125 ಹಾಗೂ ಭಾರತೀಯ ದಂಡ ಸಂಹಿತೆ 1860ರ ಕಲಂ 117 ಹಾಗೂ 1535 ರ ಅಡಿಯಲ್ಲಿ ಎಫ್ ಐಆ ಸಂಖ್ಯೆ 0109/2023ರಂತೆ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.