ಸಾಗರ : ಕಾಂಗ್ರೆಸ್ನ ಪ್ರಣಾಳಿಕೆ ರಚನಾ ಸಮಿತಿಯಲ್ಲಿದ್ದ ಮಧು ಬಂಗಾರಪ್ಪ ಕೂಡ ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಕಾರಣರು ಎಂಬ ವಿಚಾರವಾಗಿ ಪ್ರತಿಕ್ರಯಿಸಿದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಸೊರಬದಲ್ಲಿ ಮಧು ಬಂಗಾರಪ್ಪರಿಗೆ ಏನೂ ಗೊತ್ತಿಲ್ಲ. ಅದೊಂತರ ಮಳ್ಳಿದೆ. ದೊಡ್ಡ ಸಾಹೇಬರ ಮಗ ಅನ್ನೋದೊಂದೇ ಕ್ಯಾಪಾಸಿಟಿ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಹಾಗೂ ನನಗೆ ಇಬ್ಬರಿಗೂ ಗೋಪಾಲಕೃಷ್ಣ – ಮಧು ಬಂಗಾರಪ್ಪ ಕಣ್ಣೀರು ಹಾಕಿಸಿದ್ದರು. ನನ್ನ ಸಂಕಷ್ಟ ನೋಡಿ ನನ್ನ ಮಗಳು ಕೂಡ ಕಣ್ಣೀರು ಹಾಕಿದ್ದಳು . ಅದಕ್ಕೆ ಭಗವಂತ ಗೋಪಾಲಕೃಷ್ಣ ಬೇಳೂರು ಪುತ್ರಿಯನ್ನು ಕರೆಸಿ ಕಣ್ಣೀರು ಹಾಕಿಸುತ್ತಾ ಮತಗಳನ್ನು ಕೇಳಲು ಬಿಟ್ಟಿದ್ದಾನೆ. ನನ್ನ ಮಗಳು ಬೇರೆಯಲ್ಲ, ಗೋಪಾಲಕೃಷ್ಣ ಮಗಳು ಬೇರೆಯಲ್ಲ. ಆದರೆ ಇವರು ನನ್ನ ಪತ್ನಿ – ಮಕ್ಕಳಿಗೆ ಕಣ್ಣೀರು ಹಾಕಿಸಿದ್ರು. ಅದಿಕ್ಕೆ ದೇವರು ಅವರಿಗೆ ಕಣ್ಣೀರು ಹಾಕಿಸುತ್ತಿದ್ದಾನೆ ಎಂದು ಹೇಳಿದರು.
ಚುನಾವಣಾ ಪ್ರಚಾರ ಮನೆಮನೆ ಭೇಟಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಪ್ರತಿ ಬೂತ್ ನಲ್ಲಿ ಕೆಲ ಮನೆಗಳಿಗೆ ನಾನು ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಕಾರ್ಯಕರ್ತರು ಮನೆಗಳಿಗೆ ತೆರಳಿ ನಮ್ಮ ಸಾಧನೆ ವಿವರಿಸುತ್ತಿದ್ದಾರೆ. ಜನರಲ್ಲಿ ಅಭಿವೃದ್ಧಿಗಾಗಿ ವೋಟ್ ನೀಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಗೋಪಾಲಕೃಷ್ಣ ಬೇಳೂರ್ ಪರ ನಟ ಶಿವರಾಜ್ ಕುಮಾರ್ ದಂಪತಿ ಬಂದು ಪ್ರಚಾರ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ, ಹರತಾಳು ಹಾಲಪ್ಪ, ನಟರ ಭೇಟಿ ಜನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಶಿವರಾಜ್ ಕುಮಾರ್ ಒಬ್ಬ ಪ್ರಸಿದ್ಧ ನಟ . ಅವರ ತಂದೆ ಕೂಡ ಖ್ಯಾತ ನಟರು. ಹಾಗಾಗಿ ಅವರ ರ್ಯಾಲಿಗಳಲ್ಲಿ ಜನರು ಸೇರಿದ್ದರು ಎಂದರು .