ಅಹಮದಾಬಾದ್: ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಶಿಕ್ಷಣ ಇಲಾಖೆಯ ಇತ್ತೀಚಿನ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿರ್ಣಯವನ್ನು ಗುಜರಾತ್ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ಆಮ್ ಆದ್ಮಿ ಪಕ್ಷವು (ಎಎಪಿ) ನಿರ್ಣಯವನ್ನು ಸ್ವಾಗತಿಸಿ ಅದಕ್ಕೆ ತನ್ನ ಬೆಂಬಲವನ್ನು ನೀಡಿದರೆ, ಕಾಂಗ್ರೆಸ್ ಸದಸ್ಯರು ಆರಂಭದಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ನಂತರ ಮತದಾನದ ಸಮಯದಲ್ಲಿ ಅದನ್ನು ಬೆಂಬಲಿಸಿದ್ದಾರೆ. ಸರ್ಕಾರದ ನಿರ್ಣಯವನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಭಗವದ್ಗೀತೆಯಲ್ಲಿರುವ ತತ್ವಗಳು ಮತ್ತು ಮೌಲ್ಯಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೆ ಕಲಿಸಲಾಗುವುದು ಎಂದು ಘೋಷಿಸಿತ್ತು.

ಈ ನಿರ್ಣಯವನ್ನು ಶಿಕ್ಷಣ ಖಾತೆ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಅವರು ಸದನದಲ್ಲಿ ಮಂಡಿಸಿದ್ದರು. ಪನ್ಶೇರಿಯಾ ಅವರು ತಮ್ಮ ಭಾಷಣದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳು ಮತ್ತು ಸಂಪ್ರದಾಯಗಳಿಗೆ ಹೆಮ್ಮೆಯ ಭಾವನೆ ಮತ್ತು ಸಂಪರ್ಕವನ್ನು ಬೆಳೆಸಲು ಒತ್ತು ನೀಡುತ್ತದೆ. ಅದಕ್ಕೆ ಅನುಗುಣವಾಗಿ, ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳ ದೈನಂದಿನ ಜೀವನದಲ್ಲಿ ಸಂಯೋಜಿಸುವುದು ಅತ್ಯಗತ್ಯ, ಇದರಿಂದ ಅವರು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ತೆರೆದುಕೊಳ್ಳುತ್ತಾರೆ ಮತ್ತು ಭಾರತೀಯರೆಂದು ಹೆಮ್ಮೆಪಡುತ್ತಾರೆ. ಇದಕ್ಕಾಗಿ, ಭಗವದ್ಗೀತೆಯಲ್ಲಿ ಅಡಕವಾಗಿರುವ ಮೌಲ್ಯಗಳು ಮತ್ತು ತತ್ವಗಳನ್ನು ಶಾಲೆಗಳಲ್ಲಿ ಬೋಧಿಸಲು ನಿರ್ಧರಿಸಲಾಗಿದೆ ಎಂದು ಪನ್ಶೇರಿಯಾ ಹೇಳಿದ್ದಾರೆ.

6ರಿಂದ 8ನೇ ತರಗತಿವರೆಗೆ ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ ಒಳಗೊಂಡಿರುವ ಸರ್ವಾಂಗೀಣ ಶಿಕ್ಷಣ ವಿಷಯದ ಪಠ್ಯಪುಸ್ತಕದಲ್ಲಿ ಕಥೆ ಮತ್ತು ವಾಚನದ ರೂಪದಲ್ಲಿ ಭಗವದ್ಗೀತೆ ಪರಿಚಯಿಸಲಾಗುವುದು, ಗೀತಾ ಬೋಧನೆಗಳನ್ನು ಪ್ರಥಮ ಭಾಷೆಯಲ್ಲಿ ಅಳವಡಿಸಲಾಗುವುದು. 9 ರಿಂದ 12 ನೇ ತರಗತಿಯವರೆಗೆ ಕಥೆಗಳು ಮತ್ತು ಪಠಣಗಳಾಗಿ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿಸಲಾಗುವುದು. ಭಗವದ್ಗೀತೆಯು ಭಾರತದ ಸಂತರು ಮತ್ತು ಕ್ರಾಂತಿಕಾರಿಗಳಿಗೆ ನಿರ್ದೇಶನ ನೀಡಿರುವುದು ಮಾತ್ರವಲ್ಲದೆ ಆಧುನಿಕ ಮತ್ತು ಪಾಶ್ಚಿಮಾತ್ಯ ಚಿಂತಕರ ಮೇಲೂ ಹೆಚ್ಚಿನ ಪ್ರಭಾವ ಬೀರಿದೆ. ಗೀತೆಯು ಯಾವುದೇ ಗಡಿಗಳಿಲ್ಲದ ಗ್ರಂಥವಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. 6 ರಿಂದ 12ನೇ ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಬೋಧನೆಗಳನ್ನು ಸೇರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಈ ಸದನವು ರಾಜ್ಯ ಸರ್ಕಾರ ಅದರ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತದೆ ಎಂದು ಪನ್ಶೇರಿಯಾ ಹೇಳಿದ್ದಾರೆ.
#Bagavdgeetha #Gujarat #Legislative #Assembly #schools