ಅನಿವಾಸಿ ಕನ್ನಡಿಗರ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾಸಿ ಕನ್ನಡಿಗರ ರಕ್ಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಇದುವರೆಗೂ ಓರ್ವ ಪ್ರತಿನಿಧಿಯನ್ನು ನೇಮಿಸಲು ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಕೇರಳ ಈ ವಿಚಾರದಲ್ಲಿ ಬಹಳ ಕಾಳಜಿವಹಿಸಿದೆ. ಆದರೆ ಅನಿವಾಸಿ ಕನ್ನಡಿಗರು ಅಲ್ಲಿ ಕೆಲಸ ಮಾಡಿ ದೇಶಕ್ಕೆ ಸಂಪತ್ತು ತಂದುಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಕೆಲವರು ಇಲ್ಲಿನ ಅನೇಕರಿಗೆ ಉದ್ಯೋಗ ಸಹ ನೀಡಿದ್ದಾರೆ ಎಂದರು.
ಇದೇ ವೇಳೆ ತಮ್ಮ ಶಾರ್ಜಾ ಭೇಟಿಯ ಬಗ್ಗೆ ಮಾತನಾಡಿದ ಅವರು, ಕೋರ್ಟ್ ಅನುಮತಿ ಮೇರೆಗೆ ನಾನು ಶಾರ್ಜಾ ಪ್ರವಾಸ ಕೈಗೊಂಡು, ಮರಳಿದ್ದೇನೆ. ಅಲ್ಲಿ ಭಾರತೀಯ ಸಂಘದವರು 51ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಭಾರತೀಯರು ಹಾಗೂ ಕನ್ನಡ ಸಂಘಟನೆ ಸದಸ್ಯರು ರಾಜ್ಯದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿ ನಮ್ಮವರು ಅಲ್ಪಸಂಖ್ಯಾತರು. ಅವರು ಅಲ್ಲಿ ಬದುಕಿ, ಸಂಪಾದಿಸಿ ಇಲ್ಲಿಗೆ ಹಣ ಕಳುಸುತ್ತಿದ್ದಾರೆ. ಇಲ್ಲಿ ಉದ್ಯೋಗ ಸೃಷ್ಟಿಸಬೇಕಿದ್ದ ಸಮೂಹ ಬಹಳ ಆತಂಕದಿಂದ ಹೊರದೇಶಗಳಿಗೆ ವಲಸೆ ಹೋಗುತ್ತಿವೆ. ಇಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರದ ಕಿರುಕುಳದಿಂದ ನೊಂದು ಅಲ್ಲಿಗೆ ಸ್ಥಳಾಂತರ ಆಗುತ್ತಿದ್ದಾರೆ ಎಂದರು.
ಅಲ್ಲದೇ ಅಲ್ಲಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ವಿಶೇಷ ಸಚಿವಾಲಯ ಸ್ಥಾಪಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಬಹಳ ಉತ್ತಮ ನೆರವು ನೀಡಿದೆ. ಆದರೆ ಅಲ್ಲಿರುವ ಕನ್ನಡಿಗರ ಬೇಸರವೇನೆಂದರೆ, ಕೋವಿಡ್ ಸಮಯದಲ್ಲಿ ಅವರು ತವರಿಗೆ ಹಿಂದಿರುಗಲು ಯತ್ನಿಸಿದಾಗ ಅವರನ್ನು ಇಲ್ಲಿಗೆ ಬರಬೇಡಿ ಎಂದು ಹೇಳುವ ಮೂಲಕ ಅವರ ಮನಸ್ಸು ನೋಯಿಸಿದ್ದಾರೆ. ಅವರು ತಮ್ಮ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು, ನಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಆ ಬೇಡಿಕೆಗಳನ್ನು ಸೇರಿಸಲಾಗುವುದು. ಆ ಮೂಲಕ ವಿಶ್ವದ ಯಾವುದೇ ಭಾಗದಲ್ಲಿರುವ ಕನ್ನಡಿಗರ ರಕ್ಷಣೆಗೆ, ಅವರ ಜತೆ ಸಂಪರ್ಕ ಸಾಧಿಸಲು ಪ್ರತ್ಯೇಕ ಇಲಾಖೆ ಮಾಡುವುದಾಗಿ ಅವರಿಗೆ ಮಾತು ನೀಡಿದ್ದೇನೆ ಎಂದು ತಿಳಿಸಿದರು.













