ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಅವರ ಲಂಚ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ ಎನ್ನಲು ಆಗುವುದಿಲ್ಲ. ಸಂಬಂಧಪಟ್ಟವರನ್ನು ಜವಾಬ್ದಾರಿ ಮಾಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಸಾಗರ ಇದ್ದಂತೆ. ಎಲ್ಲೊ ಆ ಒಂದು ಕಡೆ ಏನೋ ಆದರೆ, ದಾಳಿ ನಡೆದರೆ, ಭ್ರಷ್ಟಾಚಾರ ಆದರೆ ಮುಜುಗರ ಆಗುತ್ತದೆ. ಇಲ್ಲ ಎನ್ನಲು ಸಾಧ್ಯವಿಲ್ಲ ಎಂದರು.

ಲೋಕಾಯುಕ್ತ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದರೆ ಸರ್ಕಾರ ಏನು ಮಾಡಲು ಆಗುತ್ತದೆ. ಲೋಕಾಯುಕ್ತರೇ ಅವರನ್ನು ವಿಚಾರಿಸಬೇಕು. ಆ ವಕೀಲರು ಲೋಕಾಯುಕ್ತದ ವ್ಯಾಪ್ತಿಗೆ ಬರುತ್ತಾರೆ. ಅಲ್ಲಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಅವರ ವಿರುದ್ಧವೂ ಲೋಕಾಯುಕ್ತರೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪ್ರಶಾಂತ್ ಮಾಡಾಳ್ ನ್ಯಾಯಾಂಗ ಬಂಧನದಲ್ಲಿ 48 ಗಂಟೆಗಳು ಕಳೆದಿದ್ದರೆ, ಅವರ ಮೇಲೆ ಕ್ರಮ ಜರುಗಿಸಲು ಬೆಂಗಳೂರು ಜಲ ಮಂಡಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.