ಸೌಜನ್ಯ ಪ್ರಕರಣ ಸಂಬಂಧಿಸಿದಂತೆ ಶುಕ್ರವಾರ (ಆಗಸ್ಟ್ 4) ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಆರೋಪಿಗಳು ಮತ್ತು ಅದರ ಪ್ರಮುಖ ಕುಟುಂಬ ಒಂದರ ಪರವಾಗಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿತ್ತು. ಈ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಇನ್ನು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಸಂತ್ರಸ್ತೆ ಸೌಜನ್ಯ ಕುಟುಂಬ ಕೂಡ ಆಗಮಿಸಿತ್ತು. ಸೌಜನ್ಯ ಪ್ರಕರಣ ಸಂಬಂಧ ಜಸ್ಟಿಸ್ ಫಾರ್ ಸೌಜನ್ಯ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿತ್ತು. ಸೌಜನ್ಯ ತಾಯಿ ತಂಗಿ ಹಾಗೂ ತಮ್ಮ ಈ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬಂದಿದ್ದರು. ಯಾವಾಗ ಸಂತ್ರಸ್ತೆಯ ಕುಟುಂಬ ಈ ಪ್ರತಿಭಟನೆಗೆ ಆಗಮಿಸಿತೋ ಆಗ ಹಲವರ ಕೆಂಗಣ್ಣು ಇವರ ಮೇಲೆ ಬೀರಲು ಆರಂಭಿಸಿದೆ.
(ವಿಶೇಷ ಸೂಚನೆ; ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ದಾರ್ಮಿಕ ಕ್ಷೇತ್ರದ ಹೆಸರು, ಹಾಗೂ ಆರೋಪ ಕೇಳಿ ಬಂದಿರುವ ವ್ಯಕ್ತಿ ಹಾಗೂ ಆ ಪ್ರಸಿದ್ಧ ಕುಟುಂಬದ ಹೆಸರನ್ನು ಬಳಕೆ ಮಾಡದಂತೆ ನ್ಯಾಯಾಲಯದ ಆದೇಶ ಮಾಡಿರುವುದರಿಂದ, ನ್ಯಾಯಾಂಗದ ಆದೇಶಕ್ಕೆ ಬೆಲೆ ಕೊಟ್ಟು ಪ್ರತಿಧ್ವನಿ ತಂಡ ಆ ಹೆಸರುಗಳನ್ನ ಈ ಅಂಕಣದಲ್ಲಿ ಬಳಸಿಕೊಳ್ಳುತ್ತಿಲ್ಲ, ಆದರೆ ಸೌಜನ್ಯ ಪ್ರಕರಣ ಜೀವಂತವಾಗಿ ಇಡುವ ಉದ್ದೇಶದಿಂದ, ಹಾಗೂ ಸೌಜನ್ಯಗೆ ನ್ಯಾಯ ಸಿಗುವವರೆಗೂ ಕೂಡ ಪ್ರತಿಧ್ವನಿ ತಂಡ ಈ ವಿಚಾರದ ಕುರಿತು ಧ್ವನಿ ಎತ್ತುವುದನ್ನ ಬಿಡುವುದಿಲ್ಲ)
ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ತಂಗಿ ಹಾಗೂ ತಮ್ಮ ವೇದಿಕೆಯ ಬಳಿ ಬರುತ್ತಿದ್ದ ಹಾಗೆ ಸೌಜನ್ಯ ಕುಟುಂಬವನ್ನು ಸುತ್ತುವರೆದ ಪ್ರತಿಭಟನಾಕಾರರ ಗುಂಪು ಅವರ ವಿರುದ್ಧ ದಿಕ್ಕಾರವನ್ನು ಕೂಗಿ ಹಲ್ಲೆ ನಡೆಸಲು ಮುಂದಾಗಿದೆ. ಅದರಲ್ಲೂ ವ್ಯಕ್ತಿಯೊಬ್ಬ ಸೌಜನ್ಯಳ ತಮ್ಮನ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದಾಡಿದ್ದ, ಜೊತೆಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಆರೋಪಿಗಳು ಹಾಗೂ ಆರೋಪಿತ ಕುಟುಂಬದ ಪರವಾಗಿ ಘೋಷಣೆಗಳನ್ನು ಕೂಡ ಕೂಗಲಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಲೆ ಏರಿಕೆ | ಟೊಮೆಟೊ ದರ ಕೆಜಿಗೆ 300 ರೂ. ಗೆ ಏರಿಕೆ ಸಾಧ್ಯತೆ
ಇನ್ನು ಈ ಘಟನೆಯ ದೃಶ್ಯಗಳು ಹಲವು ಮಾಧ್ಯಮಗಳಲ್ಲಿ ಕೂಡ ಪ್ರಸಾರಗೊಂಡಿದ್ದು, ಪ್ರತಿಭಟನಾಕಾರರು ಸೌಜನ್ಯ ಪ್ರಕರಣ ಸಂತ್ರಸ್ತೆಯ ಕುಟುಂಬದ ಮೇಲೆ ನಡೆಸಿದ ದೌರ್ಜನ್ಯ ಹಾಗೂ ಹಲ್ಲೆ ಯತ್ನ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.