ಗೃಹ ಸಚಿವ ಅರಗ ಜ್ಞಾನ ಸೇರಿದಂತೆ ಕೆಲವು ಗಣ್ಯ ವ್ಯಕ್ತಿಗಳಿಗೆ ಬಿಡಿಎ ಕಮಿಷನರ್ ಬಿಡಿಎನ 11a ನಿಯಮವನ್ನು ಗಾಳಿಗೆ ತೂರಿ ನಿವೇಶನ ನೀಡಿರೋದಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದೆ. ಅಲ್ಲದೆ ಕೋರ್ಟ್ ಮಾತು ಕೇಳದಿದ್ದಕ್ಕೆ ವರ್ಗ ಮಾಡುವಂತೆ ಮೌಖಿಕ ಆದೇಶವನ್ನೂ ನೀಡಿದೆ. ಅದರಂತೆ ಸರ್ಕಾರ ಕೂಡ ಬಿಡಿಎ ಕಮಿಷನರ್ ರಾಜೇಶ್ ಗೌಡರನ್ನು ಎತ್ತಂಗಡಿ ಮಾಡಿ ಆದೇಶ ಮಾಡಿದೆ.
ಬಿಡಿಎ 11a ನಿಯಮ ಗಾಳಿಗೆ ತೂರಿ VIP ಗಳಿಗೆ ಪರ್ಯಾಯ ನಿವೇಶನ ನೀಡಿರುವ ಆರೋಪ
ನಿನ್ನೆ ಸುಪ್ರೀಂ ಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ರಾಜೇಶ್ ಗೌಡ ವಿರುದ್ಧ ಗರಂ ಆಗಿತ್ತು. ಬಿಡಿಎ 11a ಪ್ರಕಾರ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆ ಮಾಡುವಂತಿಲ್ಲ. ಒಂದು ವೇಳೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಲೇಔಟ್ಗಳ ನಿವೇಶನಗಳನ್ನು ಸಾರ್ವಜನಿಕವಾಗಿ ಹಾರಾಜು ಹಾಕಿ ಹಂಚಿಕೆ ಮಾಡಬೇಕು ಎಂದು 2021ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಇವೆಲ್ಲವನ್ನೂ ಗಾಳಿಗೆ ತೂರಿರುವ ಬಿಡಿಎ ಕಮಿಷನರ್ ರಾಜೇಶ್ ಗೌಡ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಗೆ ನಿವೇಶನಕ್ಕೆ ಹೆಚ್ಚಿನ ಮೌಲ್ಯ ಇರುವ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿ ಇದೀಗ ಭಾರೀ ಮುಖಭಂಗ ಅನಭವಿಸಿದ್ದಾರೆ.
ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಜಾಗ ತೋರಿಸದೆ ಬಿಡಿಎ ಕಮಿಷನರ್ ರಾಜೇಶ್ ಗೌಡ ಎತ್ತಂಗಡಿ
ಈ ಬಗ್ಗೆ ನಿನ್ನೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಖುದ್ದಾಗಿ ರಾಜೇಶ್ ಗೌಡಗೆ ಹಾಜರಾಗುವಂತೆ ಹೇಳಿತ್ತು. ಆದರೆ ಕೊರೋನಾ ನೆಪಕೊಟ್ಟು ಬಿಡಿಎ ಕಮಿಷನರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆ ರಾಜೇಶ್ ಗೌಡರನ್ನು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ಬಿಡಿಎ ಆಯುಕ್ತ ರಾಜೇಶ್ ಗೌಡರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಜಾಗಕ್ಕೆ ನೂತನ ಆಯುಕ್ತರಾಗಿ ಕುಮಾರ್ ನಾಯ್ಕ್ ನೇಮಕ ಮಾಡಲಾಗಿಧ. ಕುಮಾರ್ ನಾಯ್ಕ್ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೊತೆಗೆ ಬಿಡಿಎ ಆಯುಕ್ತರಾಗಿ ನಿರ್ವಹಿಸಲು ಆದೇಶ ಮಾಡಲಾಗಿದೆ.
ಗೃಹ ಸಚಿವ ಅರಗಗೆ ಕೊಡಲಾಗಿರುವ ಪರ್ಯಾಯ ನಿವೇಶನ ವಾಪಾಸ್
ಇನ್ನು ಈ ಬಗ್ಗೆ ಮಾತನಾಡಿರುವ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಸುಪ್ರೀಂ ಕೋರ್ಟ್ ಹೇಳಿರೋದು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದು ಕೇವಲ ಅರಗ ಜ್ಞಾನೇಂದ್ರ ಅವರಿಗೆ ಮಾತ್ರ ಅಲ್ಲ, ಸಾಮಾನ್ಯರಿಗೂ ಕೊಡುವುಗಾಲೂ ಆಗಿದೆ. ನಮ್ಮ ಬಿಡಿಎ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಅದನ್ನು ಗುರುತಿಸಿ ಹೇಳಿದೆ.ನಾನು ಈಗಾಗಲೇ ಅರಗ ಜ್ಞಾನೇಂದ್ರ ಅವರಿಗೆ ಮಾತನಾಡಿದ್ದೇನೆ. ಅವರಿಗೆ ಕೊಟ್ಟಿರುವ ನಿವೇಶನವನ್ನು ವಾಪಾಸ್ ಪಡೆಯುತ್ತೇವೆ. ಅವರ ನಿವೇಶನದ ಕೆಟಗರಿ ತಕ್ಕಂತೆ ಅವರಿಗೆ ನಿವೇಶನ ಕೊಡ್ತೇವೆ ಎಂದರು. ಒಟ್ಟಾರೆ ಗೋಲ್ಮಾಲ್ ಮಾಡೋಕೆ ಹೋಗಿ ಬಿಡಿಎ ಕಮಿಷನರ್ ರಾಜೇಶ್ ಗೌಡ ಆಯುಕ್ತ ಸ್ಥಾನ ಕಳೆದುಕೊಂಡಿದ್ದಾರೆ. ಜೊತೆಗೆ ಕೋರ್ಟ್ ಕೂಡ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ. ಕೋರ್ಟ್ ನಿರ್ದೇಶನದಂತೆ ಸರ್ಕಾರ ಕೂಡ ಬಿಡಿಎ ಆಯುಕ್ತ ಸ್ಥಾನದಿಂದ ಕೊಕ್ ನೀಡಿದೆ. ಈ ಪ್ರಕರಣದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೆಸರೂ ತಳುಕು ಹಾಕಿಕೊಂಡಿರೋದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.