ಭಾರತದ ರಾಜಕೀಯ ಕ್ಷೇತ್ರವೇ ವಿಚಿತ್ರ ಮತ್ತು ವಿಲಕ್ಷಣ. ಇಲ್ಲಿ ರಾಜಕೀಯ ನಾಯಕತ್ವವು ತನ್ನ ಜನಸೇವೆಯ ಮೂಲಕ ಹೇಗೆ ಕ್ರಮೇಣ ರೂಪುಗೊಳ್ಳಬಲ್ಲದೊ ಹಾಗೆಯೇ ಜನಪೀಡಕ ವ್ಯಕ್ತಿಯೊಬ್ಬ ಮಹಾ ನಾಯಕನಾಗಿ ಹೊರಹೊಮ್ಮಬಲ್ಲ. ತನ್ನ ರಾಜಕೀಯ ಜೀವನದುದ್ದಕ್ಕೂ ಒಂದೇ ಒಂದು ಜನಪರ ಕೆಲಸ ಮಾಡದೆ ಕೇವಲ ಈ ದೇಶದಲ್ಲಿ ಘಟಿಸುವ ಎಲ್ಲ ಅವಘಡಗಳನ್ನು ಅಧಿಕಾರದ ಅವಕಾಶಗಳಾಗಿ ಪರಿವರ್ತಿಸಿಕೊಂಡು ಪ್ರಧಾನಿ ಹುದ್ದೆಯವರೆಗೆ ತಲುಪಿದವರೆಂದರೆ ಮೋದಿ ಒಬ್ಬರೆ. ಅದಷ್ಟೇ ಅಲ್ಲದೆ ಪ್ರಧಾನಿ ಹುದ್ದೆಯಲ್ಲಿ ಸತತವಾಗಿ ಮುಂದುವರೆಯಲು ಕೂಡ ಅವರು ಅದೇ ಹಾದಿಯನ್ನು ತಮ್ಮದಾಗಿಸಿಕೊಂಡವರು. ಮೋದಿಯವರು ರಾಜಕೀಯದಲ್ಲಿ ಮುಂದುವರೆಯಲು ಹೊಂದಿರುವ ಏಕೈಕ ಅರ್ಹತೆ ಎಂದರೆ ಹಿಂದುತ್ವ ಮತ್ತು ರಾಷ್ಟ್ರೀಯವಾದದ ವೇಷದಲ್ಲಿ ಪುರೋಹಿತಶಾಹಿಗಳ ಹಿತಾಸಕ್ತಿ ಕಾಯುವ ಸಂಘದ ಗುಪ್ತ ಸೂಚಿಯನ್ನು ಚಾಚೂತಪ್ಪದೆ ಅನುಷ್ಠಾನಗೊಳಿಸುತ್ತಿರುವುದು. ಬಹುಶಃ ಭಾರತದ ರಾಜಕೀಯ ಕ್ಷೇತ್ರದಲ್ಲಿ ಯಾವ ವಿದ್ವತ್ತಿನˌ ಕೌಟುಂಬಿಕˌ ಸೈದ್ಧಾಂತಿಕ ಅಥವಾ ಜನಪರ ಹೋರಾಟಗಳ ಹಿನ್ನೆಲೆಯೂ ಇಲ್ಲದೆ ಕೇವಲ ಕೋಮುದ್ವೇಷ ಒಂದನ್ನೇ ಬಂಡವಾಳವಾಗಿಸಿಕೊಂಡು ಬಹಳ ಸುದೀರ್ಘ ಅವಧಿ ಅಧಿಕಾರ ಅನುಭವಿಸಿದ ಏಕೈಕ ರಾಜಕಾರಣಿ ಮೋದಿ ಎಂದರೆ ತಪ್ಪಾಗಲಿಕ್ಕಿಲ್ಲ.
ಇದೇ ವರ್ಷದ ಫೆಬ್ರುವರಿ ೨೭ˌ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯ ೨೦ ನೇ ವರ್ಷಾಚರಣೆಯ ದಿನ. ೨೦೦೨ ರ ಫೆಬ್ರುವರಿ ೨೭ ರಂದು ಮುಂಜಾನೆ ಗುಜರಾತಿನ ಗೋಧ್ರಾ ರೈಲು ನಿಲ್ದಾಣದ ಹೊರಗೆ ಸಾಬರಮತಿ ಎಕ್ಸ್ಪ್ರೆಸ್ನ ದ್ವಿತಿಯ ದರ್ಜೆ ಬೋಗಿ ಸಂಖ್ಯೆ ಎಸ್-೬ ಸುಟ್ಟು ೫೯ ಜನರನ್ನು ಕೊಲ್ಲದಿದ್ದರೆ, ಗುಜರಾತ್ ಗಲಭೆಗಳು ಸಂಭವಿಸುತ್ತಿರಲಿಲ್ಲ ಮತ್ತು ನರೇಂದ್ರ ಮೋದಿ ಇಂದು ಭಾರತದ ಪ್ರಧಾನಿಯಾಗುತ್ತಿರಲಿಲ್ಲ. ಅಂದು ಗೋಂಧ್ರಾದಲ್ಲಿ ಉರಿದ ರೈಲುˌ ಮತ್ತು ಆ ಘಟನೆಯ ಸುತ್ತ ಸೃಷ್ಠಿಸಲಾದ ಸುಳ್ಳುಗಳು ಹಾಗು ಕಪೋಲಕಲ್ಪಿತ ನಿರೂಪಣೆಗಳು ನರೇಂದ್ರ ಮೋದಿಯನ್ನು ಗುಜರಾತ್ನಲ್ಲಿ ಮೂರು ಅವಧಿ ಅಧಿಕಾರದಲ್ಲಿ ಇರಿಸಲು ಕಾರಣವಾದವು ಮತ್ತು ಮೋದಿ ಭಾರತದ ಪ್ರಧಾನಿಯಾಗುವ ಹಾದಿಯನ್ನು ಸುಗಮಗೊಳಿಸಿದವು ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.
ಕಳೆದ ತಿಂಗಳು ಅಂದರೆ ಮಾರ್ಚ್ ೩ ರ “ದಿ ವೈರ್” ಅಂತರ್ಜಾಲ ನಿಯತಕಾಲಿಕೆಯಲ್ಲಿ ಮಾಜಿ ಸಂಪಾದಕರು ಹಾಗು ಹಿರಿಯ ಪತ್ರಕರ್ತರಾದ ಪ್ರೇಮ್ ಶಂಕರ್ ಝಾ ಅವರು ಗೋಧ್ರಾ ಘಟನೆ ಮತ್ತು ಅದರ ಸುತ್ತ ಸುತ್ತಿಕೊಂಡಿರುವ ಸತ್ಯಾಸತ್ಯತೆಗಳ ಕುರಿತು ಒಂದು ಸುದೀರ್ಘ ಅಂಕಣವನ್ನು ಬರೆದಿದ್ದಾರೆ. ಝಾ ಅವರು ಡಾನ್ ಆಫ್ ದಿ ಸೋಲಾರ್ ಏಜ್: ಆನ್ ಎಂಡ್ ಟು ಗ್ಲೋಬಲ್ ವಾರ್ಮಿಂಗ್ ಅಂಡ್ ಫಿಯರ್ (ಸೇಜ್ ೨೦೧೭) ನ ಲೇಖಕರು ಮತ್ತು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್ನ ಪರಿಸರ ಅಧ್ಯಯನ ಕೇಂದ್ರದಲ್ಲಿ ಸಂದರ್ಶಕ ಫೆಲೊ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದಿ ವೈರ್ˌ ನಲ್ಲಿ ಅವರು ಬರೆದ ಅಂಕಣವನ್ನು ಆಧಾರವಾಗಿಟ್ಟುಕೊಂಡು ಗೋಧ್ರಾ ಘಟನೆಯನ್ನು ನಾನು ಇಲ್ಲಿ ಪುನರ್ ವಿಮರ್ಶಿಸಲು ಪ್ರಯತ್ನಿಸಿದ್ದೇನೆ. ಆ ಘಟನೆ ಘಟಿಸಿ ಎರಡು ದಶಕಗಳು ಕಳೆದಿವೆ. ಆ ಭಯಂಕರ ಘಟನೆಯ ಸುತ್ತಲು ಸುತ್ತಿಕೊಂಡ ವಿವಾದಗಳು ಹಾಗು ಅದರ ನೇರ ಫಲಾನುಭವಿ ಮೋದಿಯ ರಾಜಕೀಯ ನಡೆಯನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ.
ಆ ದುರಂತ ಘಟನೆ ನಡೆಯದೇ ಹೋಗಿದ್ದರೆ, ಆ ಮೊದಲು ಏಪ್ರಿಲ್ ೨೦೦೩ ಕ್ಕೆ ನಿಗದಿಯಾಗಿದ್ದ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸುಲಭವಾಗಿ ಸೋಲಬಹುದಿತ್ತು. ಆದರೆ ಗೋಧ್ರಾ ಘಟನೆ ಮತ್ತು ಗೋಧ್ರೋತ್ತರ ಹಿಂಸಾಚಾರ ಉಂಟು ಮಾಡಿದ ಧಾರ್ಮಿಕ ಧ್ರುವೀಕರಣದ ಲಾಭ ಪಡೆಯಲು ಮೋದಿಯವರ ಒತ್ತಾಯದ ಮೇರೆಗೆ ಡಿಸೆಂಬರ್ ೨೦೦೨ ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ನಿರ್ಧಾರಿತ ಅವಧಿಗೆ ಮುಂಚೆಯೇ ನಡೆಸಲಾಯಿತು. ಅದಕ್ಕೆ ಮುಂಚೆ ೨೦೦೧ ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ಮತ್ತು ಅದೇ ವರ್ಷ ನಡೆದ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಅದೇ ಅಕ್ಟೋಬರ್ ೨೦೦೧ ರಲ್ಲಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರ ಅನಾರೋಗ್ಯದ ನೆಪ ಮಾಡಿ ದಿಲ್ಲಿಯಲ್ಲಿ ಪಕ್ಷದ ಕೇಂದ್ರ ಪದಾಧಿಕಾರಿಯಾಗಿದ್ದ ಹಾಗು ವಿಧಾನಸಭೆಯ ಸದಸ್ಯನೂ ಅಲ್ಲದ ಮೋದಿಯವರನ್ನು ತಂದು ಗುಜರಾತ ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಗುಜರಾತ್ನಲ್ಲಿ ಬಿಜೆಪಿಯ ನೆಲೆಯನ್ನು ವಿಸ್ತರಿಸುವ ಸವಾಲು ಮೋದಿಯ ಎದುರಿಗಿತ್ತು. ಬಿಜೆಪಿ ಹೈಕಮಾಂಡ್ ಹಾಗು ಮೋದಿಗೆ ಎದುರಾಗಿದ್ದ ಗುಜರಾತಿನಲ್ಲಿ ಪಕ್ಷದ ನೆಲೆ ವಿಸ್ತಾರದ ಸವಾಲಿಗೆ ಗೋಧ್ರಾ ಘಟನೆ ಒಂದು ರಾಜಕೀಯ ಗಾಳವಾಯ್ತು ಎಂದು ಝಾ ಅವರು ಅಭಿಪ್ರಾಯ ಪಡುತ್ತಾರೆ. ಝಾ ಅವರ ಅಭಿಪ್ರಾಯ ಅಕ್ಷರಶಃ ನಿಜವೆಂದು ಈಗ ಎಲ್ಲರಿಗೂ ಮನವರಿಕೆಯಾಗಿದೆ.

ಅಂದು ಗೋಧ್ರಾದಲ್ಲಿ ಬೆಂಕಿಗಾಹುತಿಯಾದ ರೈಲಿನಲ್ಲಿ ಅಯೋಧ್ಯೆಯಲ್ಲಿ ಬಲವಂತವಾಗಿ ಹತ್ತಿಸಲಾಗಿದ್ದ ಕರಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗರಿಷ್ಠ ೧ˌ೧೦೦ ಜನರ ಕ್ಷಮತೆಯಿರುವ ರೈಲಿನಲ್ಲಿ ಅಂದು ಗೋಧ್ರಾಕ್ಕೆ ಬಂದಾಗ, ೨ˌ೦೦೦ ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ರೈಲಿನಲ್ಲಿದ್ದರು. ಎಸ್-೬ ಸಂಖ್ಯೆಯ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಾಗ, ಅದರಲ್ಲಿ ಕೆಲವು ಜನ ಕರಸೇವಕರು ತುಂಬಿಕೊಂಡಿದ್ದರು. ಒಟ್ಟಾರೆ ಇಡೀ ಪ್ರಯಾಣದ ಅವಧಿಯಲ್ಲಿ ಘಟನೆಗೆ ಪೂರಕವಾದ ಅನೇಕ ಸಂಗತಿಗಳು ಜರುಗಿದ್ದವು. ರೈಲು ನಿಲ್ದಾಣದ ಪರಿಸರದಲ್ಲಿ ಉಪಸ್ಥಿತರಿದ್ದ ಕರಸೇವಕರಲ್ಲಿ ಕೆಲವರು ಅಯೋಧ್ಯೆಗೆ ಹೋಗುವಾಗ ಮತ್ತು ಹಿಂತಿರುಗುವಾಗ ಗೋಧ್ರಾ ರೈಲು ನಿಲ್ದಾಣದ ಪ್ಲಾಟಫಾರ್ಮ್ ಮೇಲಿನ ಸಣ್ಣಪುಟ್ಟ ಮುಸ್ಲಿಂ ವ್ಯಾಪಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಮತ್ತು ರೈಲು ಹೊರಡುವ ಕೆಲವು ನಿಮಿಷಗಳ ಮೊದಲು ಪ್ಲಾಟಫಾರ್ಮ್ ಮೇಲೆ ಸಣ್ಣ ಪುಟ್ಟ ಜಗಳ ಕೂಡ ನಡೆದಿತ್ತು. ಅಂದು ಬೆಳಿಗ್ಗೆ ರೈಲು ಗೋಧ್ರಾದಿಂದ ಹೊರಟಿತ್ತು. ರೈಲು ನಿಲ್ದಾಣದಲ್ಲಿ ಜರುಗಿದ ಸಣ್ಣಪುಟ್ಟ ಘರ್ಷಣೆಯಿಂದ ಕೋಪಗೊಂಡಿದ್ದ ಮುಸ್ಲಿಮರು ರೈಲನ್ನು ಹಿಂಬಾಲಿಸಿದರು ಮತ್ತು ಸೇಡಿನ ಕ್ರಮವಾಗಿ ರೈಲಿಗೆ ಬೆಂಕಿ ಹಚ್ಚಿದರು ಎಂಬ ತೀರ್ಮಾನಕ್ಕೆ ಗುಜರಾತ್ನಲ್ಲಿ ಎಲ್ಲರೂ ಬರುವಂತಾಯಿತು ಎನ್ನುತ್ತಾರೆ ಝಾ ಅವರು.
ಈ ಕೃತ್ಯವನ್ನು ಸಮೀಪದ ಗುಡಿಸಲು ವಾಸಿಗಳಾದ ಘಾಂಚಿ ಮುಸ್ಲಿಮರು ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು ಸೀಮೆ ಎಣ್ಣೆಯಲ್ಲಿ ಅದ್ದಿದ ಕಲ್ಲುಗಳು ಮತ್ತು ಚಿಂದಿ ಬಟ್ಟೆಗಳನ್ನು ಕೈಯಲ್ಲಿ ಹಿಡಿದು ಕಾಯುತ್ತಿದ್ದರೆಂತಲುˌ ರೈಲು ನಿಂತ ತಕ್ಷಣ ಅವರು ಕಿಟಕಿಗಳನ್ನು ಒಡೆದು ಸೀಮೆ ಎಣ್ಣೆಯಲ್ಲಿ ನೆನೆಸಿದ್ದ ಚಿಂದಿ ಬಟ್ಟೆಗಳನ್ನು ಬೋಗಿಗೆ ಎಸೆದು ಬೆಂಕಿ ಹಚ್ಚಿದರು ಎಂತಲು ಫೆಬ್ರವರಿ 27 ರ ಮಧ್ಯಾಹ್ನದ ವೇಳೆಗೆ, ಸ್ಥಳಿಯ ಗುಜರಾತಿ ಪತ್ರಿಕೆಗಳು ವರದಿ ಮಾಡಿದವು. ಸ್ಥಳಿಯ ಗುಜರಾತಿ ಪತ್ರಿಕೆಗಳು ಯಾವುದೇ ಆಧಾರವಿಲ್ಲದೆ ಘಟನೆಗೆ ಮುಸ್ಲಿಮರನ್ನು ಹೊಣೆಯಾಗಿಸಿ ಸಾರ್ವತ್ರಿಕವಾಗಿ ಮುಸ್ಲಿಮರ ಮೇಲೆ ಆರೋಪ ಹೊರಿಸಿ ವರದಿ ಮಾಡಿದ್ದವು. ಹೊರಗಿನಿಂದ ಕೋಚ್ಗೆ ಸೀಮೆ ಎಣ್ಣೆ ಎಸೆಯಲಾಗಿದೆ ಎಂಬರ್ಥದ ಒಂದೇ ರೀತಿಯ ಹೇಳಿಕೆಗಳನ್ನು ಸಿದ್ಧಗೊಳಿಸಿದ ಪ್ರತ್ಯಕ್ಷದರ್ಶಿಗಳೆನ್ನಲಾದ ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರ ಬಾಯಿಯಿಂದ ಹೇಳಿಸಲಾಗಿತ್ತು. ಈ ಹೇಳಿಕೆಗಳು ಮತ್ತು ಪತ್ರಿಕಾ ವರದಿಗಳು ಪ್ರಕರಣದ ಮೊದಲ ಪೊಲೀಸ್ ಚಾರ್ಜ್ಶೀಟ್ಗೆ ಆಧಾರವಾಗಿ ಮಾರ್ಪಟ್ಟವು. ನಂತರ ನಡೆದ ಹತ್ಯಾಕಾಂಡ ಈಗ ಇತಿಹಾಸ. ಆದರೆ, ಇತಿಹಾಸದ ಮತ್ತೊಂದು ಮಹತ್ವದ ವ್ಯಂಗ್ಯ ಏನೆಂದರೆ, ಈ ಬೆಂಕಿ ಪ್ರಕರಣದ ಬಗ್ಗೆ ಪೊಲೀಸರ ಈ ಆರಂಭಿಕ ಆರೋಪಪಟ್ಟಿ ಸಂಪೂರ್ಣವಾಗಿ ಆಧಾರರಹಿತವಾಗಿತ್ತು. ಮೊದಲ ದಿನದಿಂದಲೇ ಈ ಘಟನೆಯು ಮುಸ್ಲಿಮರು ನಡೆಸಿದ ಒಂದು ಪೂರ್ವನಿಯೋಜಿತ ಪಿತೂರಿ ಎಂದು ಘೋಷಿಸಿದ ನಂತರ, ಆ ಆರೋಪವನ್ನು ಕೊನೆಯವರೆಗೆ ಉಳಿಸಿಕೊಳ್ಳಲು ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಲಾಗಿತ್ತು ಎಂದು ಪ್ರೇಮ್ ಶಂಕರ್ ಝಾ ಅವರು ಅಭಿಪ್ರಾಯ ಪಡುತ್ತಾರೆ.
ಈ ಘಟನೆಯ ನಂತರ ಮೋದಿ ನೇತೃತ್ವದ ರಾಜ್ಯ ಸರಕಾರವು ವಿವರಿಸಲು ಸಾಧ್ಯವಾಗದ ಅನೇಕ ವೈಪರೀತ್ಯಗಳ ಮುಖಾಂತರ ಹಸಿ ಸುಳ್ಳುಗಳನ್ನು ಇನ್ನೂ ಹೆಚ್ಚು ಬಲಪಡಿಸಲು ಮತ್ತು ಅವನ್ನು ಜೀವಂತವಾಗಿಡಲು ಮಾಡಿದ ಪ್ರತಿಯೊಂದು ಪ್ರಯತ್ನಗಳು ಆಕಸ್ಮಿಕವಂತೂ ಖಂಡಿತ ಅಲ್ಲ. ಗುಜರಾತ್ನಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದಕ್ಕಾಗಿ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಮುಸ್ಲಿಮ್ ದ್ವೇಷದ ಅಲೆಯನ್ನು ಸೃಷ್ಟಿಸುವ ಸ್ಪಷ್ಟ ಉದ್ದೇಶದಿಂದ ಮೋದಿಯವರೇ ಈ ಎಲ್ಲ ಆಧಾರರಹಿತ ಆರೋಪಗಳನ್ನು ಅನುಮೋದಿಸಿದ್ದರು ಮತ್ತು ಸಮರ್ಥಿಸಿಕೊಂಡಿದ್ದರು ಎನ್ನುತ್ತಾರೆ ಪ್ರೇಮ್ ಶಂಕರ್ ಝಾ ಅವರು. ದುರ್ಘಟನೆಯ ಕುರಿತು ೨೦೦೫ ರಲ್ಲಿ, ಅಂದಿನ ಯುಪಿಎ ಸರ್ಕಾರದಲ್ಲಿ ರೈಲು ಖಾತೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ನಿವೃತ್ತ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾದ ಯು.ಸಿ. ಬ್ಯಾನರ್ಜಿ ನೇತೃತ್ವದಲ್ಲಿ ಒಂದು ತನಿಖಾ ಆಯೋಗವನ್ನು ನೇಮಿಸುತ್ತಾರೆ. ಬ್ಯಾನರ್ಜಿ ಆಯೋಗವು ಸಾಕ್ಷ್ಯಗಳನ್ನು ಮರು ಪರಿಶೀಲಿಸಲು ಐದು ಜನ ತಜ್ಞರ ತಂಡವೊಂದನ್ನು ರಚಿಸುತ್ತದೆ. ಮೂರು ವರ್ಷಗಳ ಕಾಲಾವಧಿಯ ನಂತರ, ತಜ್ಞರ ಸಮಿತಿಯು ಬೆಂಕಿ ಹೊತ್ತಿಕೊಂಡ ಇತರ ಬೋಗಿಗಳನ್ನು ಪರಿಶಿಲಿಸಿ ಅವುಗಳಲ್ಲಿನ ಸುಟ್ಟ ಸ್ಥಳ ಹಾಗು ಹೊಗೆ ಮಾದರಿಗಳನ್ನು ಎಸ್-೬ ಸಂಖ್ಯೆಯ ಬೋಗಿಯೊಂದಿಗೆ ಹೋಲಿಸುತ್ತದೆ. ವಿಧಿವಿಜ್ಞಾನ ಪರೀಕ್ಷೆಗಳ ನಂತರ ರೈಲ್ವೆ ಯಾರ್ಡ್ಗಳಲ್ಲಿ ಐದು ಬೋಗಿಗಳನ್ನು ಸಂರಕ್ಷಿಸಿಡಲಾಗುತ್ತದೆ. ಇವುಗಳ ಪೈಕಿ ಒಂದರಲ್ಲಿ, ಸುಟ್ಟ ಸ್ಥಳ ಮತ್ತು ಹೊಗೆಯ ಮಾದರಿಯು ಎಸ್-೬ ಸಂಖ್ಯೆಯ ಬೋಗಿಯಲ್ಲಿ ಕಂಡುಬಂದ ಮಾದರಿಯನ್ನು ಹೋಲುತ್ತಿತ್ತು. ಬೋಗಿಯ ಮಧ್ಯಭಾಗದಲ್ಲಿ ಬಹುಶಃ ಯಾರೊ ಪ್ರಯಾಣಿಕರು ಒಲೆಯ ಮೇಲೆ ಬೆಳಗಿನ ಅಡುಗೆˌ ತಿಂಡಿ ಅಥವಾ ಚಹ ತಯಾರಿಸುವಾಗ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಗಳಿರಬಹುದೆಂದು ತನಿಖಾ ಆಯೋಗ ಅನುಮಾನ ವ್ಯಕ್ತಪಡಿಸಿತ್ತು ಎನ್ನುತ್ತಾರೆ ಝಾ.
ಹಾಗೆ ಹತ್ತಿಕೊಂಡ ಬೆಂಕಿಯ ಜ್ವಾಲೆಯು ಆ ಬೋಗಿಗೆ ಮಾತ್ರ ಸೀಮಿತವಾಗಿತ್ತು ಆದರೆ ಬೆಂಕಿಯು ಸೃಷ್ಟಿಸಿದ ಹೊಗೆಯು ಉಳಿದ ಬೋಗಿಗಳಿಗೂ ವ್ಯಾಪಿಸಿತ್ತು. ಎಸ್-೬ ಸಂಖ್ಯೆಯ ಬೋಗಿಯಲ್ಲಿ ಹೆಚ್ಚಿನ ಸಾವುಗಳು ಉಸಿರುಕಟ್ಟುವಿಕೆಯಿಂದ ಉಂಟಾಗಿತ್ತು ಎಂದು ಆಯೋಗ ಅಭಿಪ್ರಾಯ ಪಟ್ಟಿತ್ತು. ಇದು ವಿಶ್ವಾಸಾರ್ಹ ಅನಿಸಿಕೆ ಎನ್ನಿಸಿತುˌ ಏಕೆಂದರೆ ರೈಲಿನ ಎರಡನೇ ದರ್ಜೆಯ ಕಂಪಾರ್ಟ್ಮೆಂಟ್ಗಳಲ್ಲಿ ಬೆಂಕಿ ಜ್ವಾಲೆ-ನಿರೋಧಕಗಳನ್ನು ಬಳಸುವುದಿಲ್ಲ. ಆದ್ದರಿಂದ ಬೆಂಕಿಯು ದೊಡ್ಡ ಪ್ರಮಾಣದ ವಿಷಕಾರಿ ಹೊಗೆಯನ್ನು ಹೊರಹಾಕುತ್ತದೆ. ದೂರದ ಹಾದಿಯ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಹಿಂದೂ ಸಾಂಪ್ರದಾಯವಾದಿ ಪ್ರಯಾಣಿಕರು ತಮ್ಮ ಆಹಾರವನ್ನು ಸ್ವಂತ ಬೇಯಿಸಿ ತಿನ್ನುವುದು ಸಹಜವಾದ ಪ್ರಕ್ರೀಯೆಯಾಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದ್ದರ ಕುರಿತು ಝಾ ಅವರು ಬೆಳಕು ಚೆಲ್ಲಿದ್ದಾರೆ. ಬ್ಯಾನರ್ಜಿ ಆಯೋಗದ ವರದಿಯನ್ನು ಬಿಜೆಪಿ ತೀವ್ರವಾಗಿ ಆಕ್ಷೇಪಿಸಿ ತಿರಸ್ಕರಿಸಿದ್ದು ˌ ಪಕ್ಷದ ಆಗಿನ ವಕ್ತಾರಾಗಿದ್ದ ಅರುಣ್ ಜೇಟ್ಲಿ ಅವರು ತನಿಖಾ ಕಾರ್ಯವಿಧಾನಕ್ಕೆ ಬಲವಾದ ಆಕ್ಷೇಪಣೆಗಳನ್ನು ಎತ್ತಿದ್ದರ ಕುರಿತು ಝಾ ಅವರು ವಿವರಿಸಿದ್ದಾರೆ. ರೈಲ್ವೆ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಸೇರಿದಾಗಿದ್ದರೂ ಈ ರೀತಿಯ ತನಿಖೆ ನಡೆಸುವ ಹಕ್ಕು ಹೊಂದಿಲ್ಲ ಎಂದು ಜೇಟ್ಲಿ ವಾದಿಸಿದ್ದರಂತೆ. ಇದು ಒಂದು ಆಕಸ್ಮಿಕ ಘಟನೆಯಾಗಿದ್ದರೆ ಪ್ರಯಾಣಿಕರು ರೈಲಿನಿಂದ ಹೊರಗೆ ಏಕೆ ಜಿಗಿಯಲಿಲ್ಲ ಎಂದು ಪ್ರಶ್ನಿಸಿದ್ದರಂತೆ. ಒಟ್ಟಾರೆ ಇದೊಂದು ಮುಸ್ಲಿಮರು ಮಾಡಿದ ಪೂರ್ವನಿಯೋಜಿತ ಕೃತ್ಯವೆಂದು ಬಿಜೆಪಿಯ ವಾದವಾಗಿತ್ತು ಎಂದು ಝಾ ಅವರು ಬರೆಯುತ್ತಾರೆ.
ಎದುರಾಳಿಗಳನ್ನು ಮಣಿಸಲು ನಮಗೆ ಗೊತ್ತಿರುವ ಬಿಜೆಪಿಯ ಅತ್ಯಂತ ಸಾಮಾನ್ಯ ತಂತ್ರಗಳ ಅನುಸಾರ, ೨೦೦೨ ರಲ್ಲಿ ಗೋಧ್ರಾ ರೈಲು ನಿಲ್ದಾಣದ ಪ್ಲಾಟಫಾರ್ಮ್ ನಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡ ಹಿಂದೂಗಳಲ್ಲಿ ಒಬ್ಬ ವ್ಯಕ್ತಿಯನ್ನು ರಾಜ್ಯ ಸರ್ಕಾರವು ಗುಜರಾತ್ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಬ್ಯಾನರ್ಜಿಯವರ ವರದಿಯನ್ನು ಪ್ರಶ್ನಿಸಲು ಪ್ರಚೋದಿಸಿತ್ತು. ಈ ವಿಚಾರಣೆಯ ಹೊಣೆಹೊತ್ತ ನ್ಯಾಯಪೀಠದ ಮುಖ್ಯ ನ್ಯಾಯಾಧೀಶರು ವಿಚಾರಣೆಯ ನಂತರ ಬ್ಯಾನರ್ಜಿ ಸಮಿತಿಯ ರಚನೆಯನ್ನೇ ಅಸಂವಿಧಾನಿಕ, ಕಾನೂನುಬಾಹಿರˌ ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸುತ್ತಾರೆˌ ಹಾಗು ಈ ತನಿಖಾ ಆಯೋಗ ರಚನೆಯು ಒಂದು ದುರುದ್ದೇಶಪೂರಿತ ಅಧಿಕಾರದ ಪ್ರಯೋಗವೆಂದು ಕರೆಯುತ್ತಾರೆ. ಗುಜರಾತ ರಾಜ್ಯ ಸರ್ಕಾರವು ಅದಾಗಲೇ ಷಾ ಆಯೋಗವನ್ನು ನೇಮಿಸಿರುವಾಗ ಮತ್ತೊಂದು ಆಯೋಗ ನೇಮಿಸಿದ್ದರ ಔಚಿತ್ಯ ಕುರಿತು ಅವರು ರೈಲ್ವೆ ಸಚಿವಾಲಯವನ್ನು ಟೀಕಿಸುತ್ತಾರೆ. ಗೋಧ್ರೋತ್ತರ ಹಿಂಸಾಕಾಂಡದ ನಂತರ ರಾಜ್ಯ ಸರಕಾರ ನೇಮಿಸಿದ್ದ ಷಾ ಆಯೋಗಕ್ಕೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿಯವರು ಮಾರ್ಚ್ ೮ ರಂದು ಸೇರಿಕೊಳ್ಳುತ್ತಾರೆ. ರೃಲು ಇಲಾಖೆ ತನ್ನ ಸ್ವಂತ ಆಸ್ತಿಗೆ ಬೆಂಕಿ ಹೇಗೆ ಬಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ತನಿಖೆಗಾಗಿ ಆಯೋಗ ನೇಮಿಸುವ ಹಕ್ಕನ್ನು ನ್ಯಾಯಮೂರ್ತಿ ನಾನಾವತಿಯವರು ವಜಾಗೊಳಿಸಿದ್ದರ ಕುರಿತು ಝಾ ಅವರು ವಿವರಿಸಿದ್ದಾರೆ.
ಇದಾದ ಮೇಲೆˌ ಮೇ ೩, ೨೦೦೨ ರಂದು ಅಹಮದಾಬಾದ್ನಲ್ಲಿರುವ ಗುಜರಾತ್ ಸರ್ಕಾರದ ನಿಯಂತ್ರಣದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿದ ನಂತರ ವರದಿಯೊಂದನ್ನು ಸಿದ್ಧಪಡಿಸುತ್ತದೆ. ಆ ವರದಿಯು ಔಪಚಾರಿಕವಾಗಿ ಈ ಮೊದಲು ಗುಜರಾತ ಪೋಲೀಸರು ನೀಡಿದ್ದ ವಿವರಣೆಯನ್ನು ತಳ್ಳಿಹಾಕುತ್ತದೆ. ಗುಜರಾತ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್ಎಸ್ಎಲ್) ತಜ್ಞರ ತಂಡವು ಗುಜರಾತ ಪೋಲೀಸರ ಆರೋಪಪಟ್ಟಿಯಲ್ಲಿ ಮಾಡಿದ ಆರೋಪಗಳನ್ನು ಏಕೆ ಸಮಗ್ರವಾಗಿ ತಳ್ಳಿಹಾಕಿತ್ತೆಂದರೆ ನಿವೃತ್ತ ನ್ಯಾಯಮೂರ್ತಿ ವಿ.ಆರ್ ಕೃಷ್ಣಯ್ಯರ್ ಅವರ ನೇತೃತ್ವದ ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್ (ಸಿಸಿಟಿ) ಕೂಡ ಮೇ ತಿಂಗಳ ಆರಂಭದಲ್ಲಿ ದುರ್ಘಟನೆ ನಡೆದ ಗೋರ್ಧಾಕ್ಕೆ ಭೇಟಿ ನೀಡುವ ಯೋಜನೆ ಮೋದಿಗೆ ಗುಪ್ತಚರ ಇಲಾಖೆಯ ಮೂಲಕ ತಿಳಿದಿರುತ್ತದೆ. ಆದ್ದರಿಂದ ಘಾಂಚಿ ಮುಸ್ಲಿಂರ ಪ್ರತೀಕಾರದ ಕಥಾವಸ್ತುವಿನ ವಿವರಣೆಯು ಬೇರ್ಪಡಿಸಿ ಇಡುವುದು ಮೋದಿಯ ಉದ್ದೇಶವಾಗಿತ್ತು ಎನ್ನುತ್ತಾರೆ ಝಾ ಅವರು.
ಸಿಸಿಟಿ ತಾನು ದುರ್ಘಟನಾ ಸ್ಥಳಕ್ಕೆ ಸ್ವಂತ ಭೇಟಿಯ ನಂತರ ಈ ಕೆಳಗಿನ ತೀರ್ಮಾನಕ್ಕೆ ಬಂತು ಎನ್ನುತ್ತಾರೆ ಝಾ ಅವರು: ೭-೫-೨೦೦೨ ರಂದು ಸ್ಥಳಕ್ಕೆ ಭೇಟಿ ನೀಡಿದ ಸಿಸಿಟಿ ಪ್ರಕಾರ ರೈಲು ಕೋಚ್ ನಿಂತಿರುವ ಮತ್ತು ಅದನ್ನು ಸುಟ್ಟರೆನ್ನಲಾದ ಸ್ಥಳ ಎತ್ತರದ ಏರು ಪ್ರದೇಶವಾಗಿತ್ತು. ನೆಲಮಟ್ಟದಿಂದ ರೈಲು ನಿಂತ ಸ್ಥಳವು ಸುಮಾರು ೧೨-೧೫ ಅಡಿ ಎತ್ತರವಾಗಿತ್ತು ಮತ್ತು ಅದು ಒಂದು ಇಳಿಜಾರು ಪ್ರದೇಶವಾಗಿತ್ತು. ಮೇಲ್ಭಾಗದಲ್ಲಿ, ರೈಲ್ವೆ ಟ್ರ್ಯಾಕ್ನ ಎರಡೂ ಬದಿಗಳಲ್ಲಿ ೨,೦೦೦ ಜನರು ಒಟ್ಟುಗೂಡಲು ಅಷ್ಟೇನೂ ಸ್ಥಳಾವಕಾಶವಿರಲಿಲ್ಲ. ಅಷ್ಟೊಂದು ಜನರು ಆ ಸ್ಥಳದಲ್ಲಿ ಜಮಾಯಿಸಿದ್ದರು ಎಂದು ಊಹಿಸಿದರೆ, ಎಸ್-೬ ಸಂಖ್ಯೆಯ ಕೋಚ್ನ ಹತ್ತಿರಕ್ಕಿಂತ ಉಳಿದ ಕೋಚ್ಗಳ ಹತ್ತಿರವಿದ್ದ ಹೆಚ್ಚಿನ ಪ್ರದೇಶದಲ್ಲಿ ಜನಸಂದಣಿ ಹರಡಬಹುದಿತ್ತು. ಗುಜರಾತ ಸರಕಾರದ ಊಹೆ ನಿಜವಾಗಿದ್ದಲ್ಲಿ ಎಸ್-೬ ಕೋಚ್ಗಿಂತ ಇತರ ಕೋಚ್ಗಳು ಸುಲಭವಾಗಿ ದುಷ್ಕರ್ಮಿಗಳು ಗುರಿಯಾಗಿಸಬಹುದಿತ್ತು ಎಂದು ಸಿಸಿಟಿ ತನಿಖಾ ವರದಿಯ ಅಭಿಪ್ರಾಯದ ಬಗ್ಗೆ ಝಾ ಅವರು ಸುದೀರ್ಘವಾಗಿ ವಿವರಿಸಿದ್ದಾರೆ.
ರೈಲು ನಿಂತ ಏರು ಪ್ರದೇಶದ ಎತ್ತರ ಮತ್ತು ರೈಲಿನ ಎತ್ತರವನ್ನು ಗಣನೆಗೆ ತೆಗೆದುಕೊಂಡರೆ ಗುಜರಾತ್ ಪೋಲಿಸರು ಆರೋಪಿಸಿದಂತೆ ರೈಲಿಗೆ ಹೊರಗಿನಿಂದ ಎಸೆಯಲಾಗಿದೆ ಎನ್ನಲಾದ ಬೆಂಕಿಯ ಚೆಂಡುಗಳಿಂದ, ರೈಲು ಡಬ್ಬಿಯ ಹೊರಭಾಗಕ್ಕೆ ಸುಟ್ಟ ಗುರುತುಗಳ ಲಕ್ಷಣಗಳು ಕಾಣಬೇಕಿತ್ತು. ಆದರೆ ರೈಲು ಡಬ್ಬಿಯ ಕಿಟಕಿಗಳ ಕೆಳಗೆ ಅಂತಹ ಯಾವುದೇ ಗುರುತುಗಳಿರಲಿಲ್ಲ ಎಂದು ಸಿಸಿಟಿ ವರದಿ ಹೇಳಿತ್ತು. ಸುಟ್ಟ ಗುರುತುಗಳು ಕಿಟಕಿಗಳ ಸುತ್ತಲೂ ಮತ್ತು ಅದಕ್ಕಿಂತ ಎತ್ತರದ ಮೇಲೆ ಮಾತ್ರ ಇದ್ದವು. ಕೋಚ್ನೊಳಗೆ ಹತ್ತಿಕೊಂಡ ಬೆಂಕಿ ಕಿಟಕಿಗಳಿಂದ ಹೊರ ಜಿಗಿಯುವ ಜ್ವಾಲೆಯ ಮೂಲಕ ಡಬ್ಬಿಯ ಹೊರಭಾಗದಲ್ಲಿ, ಕಿಟಕಿಯ ಮಟ್ಟಕ್ಕಿಂತ ಮೇಲೆ ಸುಟ್ಚ ಗುರುತುಗಳು ಮಾಡಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ಆದ್ದರಿಂದ, ಬರಿಗಣ್ಣಿನಿಂದ ಪರಿಶೀಲಿದರೂ ಸಹ, ಬೆಂಕಿಯು ರೈಲು ಡಬ್ಬಿಯ ಒಳಗೆ ಹತ್ತಿಕೊಂಡಿದೆಯೇ ಹೊರತು ಹೊರಗಿನಿಂದ ಅಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಸಿಸಿಟಿ ಮಾರ್ಮಿಕ ವರದಿ ಸಲ್ಲಿಸಿದ ಕುರಿತು ಝಾ ಅವರು ಬರೆದಿದ್ದಾರೆ. ಆದರೆ ಒಳಗೆ ಬೆಂಕಿ ಹೊತ್ತಿಕೊಂಡಿದ್ದರೆ ಅದನ್ನು ಯಾರು ಹಚ್ಚಿದರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ನಂತರದ ದಿನಗಳಲ್ಲಿ ಗೋಧ್ರಾ ಘಟನೆಗೆ ಪ್ರತಿಕಾರವಾಗಿ ಹಿಂದೂಗಳು ಮುಸ್ಲಿಮರ ಮೇಲೆ ಹೇರಿದ ಸಾಮೂಹಿಕ ಶಿಕ್ಷೆಯನ್ನು ಸಮರ್ಥಿಸುವುದು ಗುಜರಾತ್ ಸರ್ಕಾರಕ್ಕೆ ಬೇಕಿತ್ತು. ಆನಂತರ ಗುಜರಾತ ವಿಧಿವಿಜ್ಞಾನ ತಜ್ಞರ ತಂಡದ ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಹೊಸ ವಿವರಣೆಯೊಂದನ್ನು ನೀಡಿತ್ತಾರೆ. ಸಿಗ್ನಲ್ ಫಾಲಿಯಾ ಎದುರು ರೈಲು ನಿಂತಾಗ ಕೆಲವು ಮುಸ್ಲಿಮರು ಎಸ್-೬ ಮತ್ತು ಎಸ್-೭ ಬೋಗಿಗಳನ್ನು ಬೆಸೆಯುವ ಸ್ಥಳವನ್ನು ಸೀಳಿ ಎಸ್-೬ ಬೋಗಿಯಲ್ಲಿ ಬಲವಂತವಾಗಿ ಪ್ರವೇಶಿಸಿ ೬೦ ಲೀಟರ್ ಪೆಟ್ರೋಲ್ ಅನ್ನು ಕಾರಿಡಾರ್ಗೆ ಸುರಿದು ಬೆಂಕಿಕಡ್ಡಿಯನ್ನು ಗೀಚಿ ಬೆಂಕಿ ಹಚ್ಚಿದ್ದಾರೆಂದು ಗುಜರಾತ ಪೋಲಿಸ್ ತನಿಖಾ ಅಧಿಕಾರಿಗಳು ಹೇಳುತ್ತಾರೆ ಎನ್ನುವ ವಿಷಯ ಪ್ರಸ್ತಾಸಿರುವ ಝಾ ಅವರು ಗುಜರಾತ ಪೋಲಿಸರ ಬದಲಾದ ತನಿಖಾ ವೈಖರಿಯ ಮೇಲೆ ಬೆಳಕು ಚೆಲ್ಲುತ್ತಾರೆ.
ಗುಜರಾತ ಪೋಲಿಸರ ಈ ಕಲ್ಪಿತ ಸಿದ್ಧಾಂತದಲ್ಲಿನ ಅಸಂಬದ್ಧತೆಗಳನ್ನು ಕಳೆದ ಎರಡು ದಶಕಗಳಲ್ಲಿ ಹಲವು ಬಾರಿ ಎತ್ತಿ ತೋರಿಸಲಾಗಿದೆ ಎನ್ನುತ್ತಾರೆ ಝಾ ಅವರು. ದುಷ್ಕರ್ಮಿಗಳು ಪೆಟ್ರೋಲ್ ತುಂಬಿದ ಬಕೆಟ್ಗಳನ್ನು ಕೈಯಲ್ಲಿ ಎತ್ತಿಕೊಂಡು ಒಯ್ಯಬೇಕುˌ ಮತ್ತು ಕನಿಷ್ಠ ೨೦ ಲೀಟರ್ ಕ್ಷಮತೆಯ ಮೂರು ಬಕೆಟ್ಗಳನ್ನು ರೈಲಿನೊಳಗೆ ಸಾಗಿಸಬೇಕು. ಸದಾ ಜಗಳಕ್ಕಾಗಿ ಹಪಹಪಿಸುವ ಕರಸೇವಕರಿಂದ ತುಂಬಿ ತುಳುಕುತ್ತಿದ್ದ ರೈಲಿನಲ್ಲಿ ಮೂವರು ಮುಸ್ಲಿಮ್ ದುಷ್ಕರ್ಮಿಗಳು ಪೆಟ್ರೋಲ್ ಬಕೇಟುಗಳನ್ನು ಹೊತ್ತೊಯ್ಯುವಾಗ ಸುಲಭವಾಗಿ ಅವರನ್ನು ಗುರುತಿಸಬಹುದಾಗಿತ್ತು. ಮೂವರು ಮುಸ್ಲಿಮರು ಪೆಟ್ರೋಲ್ ಬಕೇಟ್ಗಳೊಂದಿಗೆ ನಿಂತ ರೈಲನ್ನು ಏರಿ ಬಂದ ಬಗ್ಗೆ ಈ ಅಸಂಬದ್ಧ ಆರೋಪ ಮಾಡಿರುವ ಗುಜರಾತ ಪೋಲಿಸರು ಅದನ್ನು ದೃಢೀಕರಿಸಲು ಸಾಕ್ಷಿ ರೂಪದಲ್ಲಿ ಒಬ್ಬನೇ ಒಬ್ಬ ರೈಲು ಪ್ರಯಾಣಿಕನನ್ನು ಕಂಡುಹಿಡಿಯಲಾಗಲಿಲ್ಲವೇಕೆ ಎನ್ನುವ ಪ್ರಶ್ನೆ ಝಾ ಅವರು ಎತ್ತಿದ್ದಾರೆ.
ಕುತೂಹಲಕಾರಿ ಎನ್ನುವಂತೆ ಗುಜರಾತ್ ವಿಧಿವಿಜ್ಞಾನ ತಜ್ಞರು ತಮ್ಮ ೬೦ ಲೀಟರ್ ಪೆಟ್ರೋಲನ್ನು ತೆರೆದ ಕಂಟೇನರಗಳಲ್ಲಿ ದುಷ್ಕರ್ಮಿಗಳು ರೈಲಿನೊಳಗೆ ತಂದಿದ್ದಾರೆನ್ನುವ ಆರೋಪದ ಕುರಿತು ತಾರ್ಕಿಕವಾಗಿ ಯೋಚಿಸಿದಂತಿಲ್ಲ. ಅವರ ಲೆಕ್ಕಾಚಾರದ ಪ್ರಕಾರ ತೆರೆದ ಕಂಟೇನರನಲ್ಲಿ ಜನಸಂಧಣಿಯ ರೈಲಿನಲ್ಲಿ ಪೆಟ್ರೋಲನ್ನು ಎಷ್ಟು ದೂರ ಸಾಗಿಸಬಹುದು ಎಂಬುದು ಅವರು ಚಿಂತಿಸಿದಂತಿಲ್ಲ. ಪೆಟ್ರೋಲ್ ಸಾಗಿಸುವಾಗ ಜನರ ಬೂಟುˌ ಲಗೇಜ್ˌ ಮತ್ತು ಬಟ್ಟೆಗಳ ಮೇಲೆ ಪೆಟ್ರೋಲ್ ಚೆಲ್ಲಲಿಲ್ಲವೆ ಎನ್ನುವ ಕನಿಷ್ಟ ಸಂಗತಿ ವಿಧಿವಿಜ್ಞಾನ ತಜ್ಞರು ಯೋಚಿಸಬೇಕಿತ್ತು. ವರದಿಗಳ ಪ್ರಕಾರ ಆ ಡಬ್ಬಿಯಲ್ಲಿ ಸತ್ತ ಮತ್ತು ಗಾಯಗೊಂಡ ಪ್ರಯಾಣಿಕರ ಸಂಖ್ಯೆ ೧೦೮. ಅಂದರೆ ಬೆಂಕಿ ಹತ್ತಿಕೊಂಡಾಗ ಆ ಡಬ್ಬಿಯಲ್ಲಿದ್ದ ಪ್ರಯಾಣಿಕ ಸಂಖ್ಯೆ ಕನಿಷ್ಠ ೧೦೮. ಇದರಲ್ಲಿ ಭಯಭೀತರಾಗಿ ಬಾಗಿಲಿಗೆ ನುಗ್ಗಿ ತಪ್ಪಿಸಿಕೊಂಡವರ ಲೆಕ್ಕವಿಲ್ಲ. ಈ ಪ್ರಮಾಣದ ಜನಸಂಧಣಿಯ ಡಬ್ಬಿಯಲ್ಲಿ ತೆರೆದ ಕಂಟೇನರಗಳಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಸಾಗಿಸುವುದಾದರೂ ಹೇಗೆ ಎನ್ನುವ ಸಂಶಯ ಸಾಮಾನ್ಯರಿಗೂ ಬಾರದಿರದು. ವಿಧಿವಿಜ್ಞಾನ ತಜ್ಞರು ಇಂತಹ ಪ್ರಾಥಮಿಕ ತಪ್ಪು ಮಾಡಿದ್ದು ಊಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದˌ ಒಂದೇ ಸಾಲಿನಲ್ಲಿ ಈ ಇಡೀ ಪ್ರಕರಣವನ್ನು ವಿವರಿಸಬೇಕೆಂದರೆ, ದುರ್ಘಟನೆಗೆ ಮುಸ್ಲಿಂ ಸಮುದಾಯವನ್ನು ಹೊಣೆಗಾರರನ್ನಾಗಿಸಲು ಯಾವುದಾದರೂ ಒಂದು ವಿವರಣೆಯನ್ನು ಹುಡುಕಲು ವಿಧಿವಿಜ್ಞಾನ ತಜ್ಞರಿಗೆ ಆದೇಶಿಸಿ ಒತ್ತಡ ಹೇರಲಾಗಿತ್ತು ಎನ್ನುವ ಅಭಿಪ್ರಾಯ ಝಾ ಅವರು ವ್ಯಕ್ತಪಡಿಸಿದ್ದಾರೆ.
ದುರ್ಘಟನೆ ನಡೆದ ದಿನವೇ ಅಂದರೆ ಫೆಬ್ರವರಿ ೨೭, ೨೦೦೨ ರಂದು ಅಹಮದಾಬಾದಿನ ಬೀದಿಗಳಲ್ಲಿ ಪವಿತ್ರ ಅಯೋಧ್ಯೆ ಯಾತ್ರೆಯಿಂದ ಹಿಂತಿರುಗುತ್ತಿದ್ದ ಹಿಂದೂ ಕರಸೇವಕರನ್ನು ಗೋಧ್ರಾದಲ್ಲಿ ಮುಸ್ಲಿಮರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಘೋಷಿಸುತ್ತ ವಿಶ್ವಹಿಂದೂ ಪರಿಷತ್ನ ಕಾರ್ಯಕರ್ತರು ತಿರುಗಿದ್ದರು. ಫೆಬ್ರವರಿ ೨೮ ರಂದು ಅವರು ನಗರದಾದ್ಯಂತ ಮೆರವಣಿಗೆಗಳನ್ನು ನಡೆಸಿದ್ದರು. ಮರುದಿನ ಬೆಳಿಗ್ಗೆ ನಗರದಲ್ಲಿ ಗುರುತಿಸಲಾಗದ ಅರೆ ಬೆಂದ ಶವಗಳನ್ನು ಪ್ರದರ್ಶಿಸುತ್ತ ಅವರು ಮುಸ್ಲಿಮ್ ದ್ವೇಷದ ಪರ್ವತವನ್ನೇ ಸೃಷ್ಟಿಸಿ ಬಿಟ್ಟಿದ್ದರು. ಆಗ ಅವರ ನಡೆಯನ್ನು ಯಾರೊಬ್ಬರೂ ಅನುಮಾನಿಸಲಿಲ್ಲ ಮತ್ತು ಇವು ನಿಜವಾಗಿಯೂ ಕರಸೇವಕರ ಶವಗಳೇ ಎಂದು ಯಾರೂ ಸಂಶಯಿಸಲಿಲ್ಲ. ಆದರೆ ದುರದೃಷ್ಟಕರ ಸಂಗತಿ ಏನೆಂದರೆ ಎಸ್-೬ ಬೋಗಿಯಲ್ಲಿದ್ದ ಪ್ರಯಾಣಿಕರ ಗುರುತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಲಕ್ನೋ ಮತ್ತು ಮಧ್ಯಂತರ ನಿಲ್ದಾಣಗಳಲ್ಲಿ ರೈಲು ಹತ್ತಿದ ಸಾಮಾನ್ಯ ಪ್ರಯಾಣಿಕರು ಎಂಬುದು. ಲಕ್ನೋದ ರೈಲ್ವೆ ಬುಕಿಂಗ್ ಚಾರ್ಟ್ ಪ್ರಕಾರ ಎಸ್-೬ ಸಂಖ್ಯೆಯ ಬೋಗಿಯಲ್ಲಿನ ೭೨ ಬರ್ತ್ಗಳಲ್ಲಿ ೪೩ ಮುಂಗಡ ಬುಕಿಂಗ್ ಆಗಿದ್ದವು. ಇವುಗಳಲ್ಲಿ ೧೯ ವಯಸ್ಕ ಪುರುಷ, ೧೯ ವಯಸ್ಕ ಮಹಿಳೆ ಮತ್ತು ೫ ಅಪ್ರಾಪ್ತ ವಯಸ್ಕರಿಗೆ ಸೇರಿದ್ದವು. ಬುಕ್ ಮಾಡಿದ ಪ್ರಯಾಣಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಯಾಣಿಕರು ಕುಟುಂಬಗಳೊಂದಿಗೆ ಪ್ರಯಾಣಿಸುತ್ತಿದ್ದರು. ಇನ್ನುಳಿದ ೨೩ ಪ್ರಯಾಣಿಕರು ಮಧ್ಯಂತರ ನಿಲ್ದಾಣಗಳಲ್ಲಿ ರೈಲು ಹತ್ತಿದ್ದರು. ಅವರೆಲ್ಲರಿಗೂ ಬರ್ತ್ಗಳಿದ್ದ ಕಾರಣ, ಅವರಲ್ಲಿ ಕೆಲವರು ಡಬ್ಬಿಯ ಎರಡು ತುದಿಗಳಲ್ಲಿರುವ ದ್ವಾರಗಳ ಬಳಿ ನಿಂತ್ತಿದ್ದರು ಮತ್ತು ಬೆಂಕಿ ಹತ್ತಿಕೊಂಡಾಗ ತಪ್ಪಿಸಿಕೊಳ್ಳುವ ಸ್ಥಿತಿಯಲ್ಲಿದ್ದರು ಎನ್ನುವ ಅಭಿಪ್ರಾಯ ಝಾ ಅವರದ್ದು.
ಸಾಮಾನ್ಯವಾಗಿ ಈ ತರಹದ ಅವಘಡಗಳಲ್ಲಿ ಮೊದಲು ಸಾಯುವವರು ದುರ್ಬಲರು, ಮಹಿಳೆಯರು ಮತ್ತು ಮಕ್ಕಳು. ಮೂರು ದಿನಗಳ ನಂತರ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸತ್ತವರಲ್ಲಿ ೨೦ ಪುರುಷರು, ೨೬ ಮಹಿಳೆಯರು ಮತ್ತು ೧೨ ಮಕ್ಕಳು ಎಂದು ದೃಢಪಟ್ಟಿತ್ತು. ಒಟ್ಟಾರೆಯಾಗಿ, ಸತ್ತ ೫೮ ಜನರಲ್ಲಿ ೩೮ ಜನರಂತೂ ಮಹಿಳೆ ಮತ್ತು ಮಕ್ಕಳುˌ ಅವರು ಕರಸೇವರಾಗಿರಲು ಸಾಧ್ಯವಿಲ್ಲ. ಸತ್ತ ೨೦ ಪುರುಷರು ಕೂಡ ಬಹುಪಾಲು ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸುತ್ತಿದ್ದ ಸಾಮಾನ್ಯ ಪ್ರಯಾಣಿಕರೇ ಆಗಿದ್ದರು.
ಕೊಲ್ಲಲ್ಪಟ್ಟರೆನ್ನಲಾದ ಕರಸೇವಕರ ಸಂಖ್ಯೆ ಇನ್ನೂ ಕಡಿಮೆ ಇರಬೇಕು, ಏಕೆಂದರೆ ನ್ಯಾಯಮೂರ್ತಿ ವಿ.ಆರ್. ಕೃಷ್ಣಯ್ಯರ್ ನೇತೃತ್ವದ ಟ್ರಿಬ್ಯೂನಲ್, ಪ್ರಕಾರ ಇವರಲ್ಲಿ ಒಂದಷ್ಟು ಜನ ಪ್ರಯಾಣಿಕರು ಮಾತ್ರ ದೈಹಿಕವಾಗಿ ಸದೃಢರಾಗಿರುವ ಯುವಕರಾಗಿದ್ದು ಅವರು ಡಬ್ಬಿಯ ಎರಡೂ ತುದಿಗಳಲ್ಲಿದ್ದರುˌ ಹಾಗು ಬೆಂಕಿ ಹತ್ತಿದಾಗ ತಪ್ಪಿಸಿಕೊಳ್ಳುವಷ್ಟು ಸಮರ್ಥರಾಗಿದ್ದರು. ಡಬ್ಬಿಯಿಂದ ತಪ್ಪಿಸಿಕೊಂಡರೆನ್ನಲಾದ ೪೩ ವ್ಯಕ್ತಿಗಳಲ್ಲಿ ಐವರು ಮಾತ್ರ ಆಸ್ಪತ್ರೆಗೆ ದಾಖಲಾಗುವಷ್ಟು ಗಾಯಗೊಂಡಿದ್ದರು ಎನ್ನುವುದನ್ನು ಗಮನಿಸಬೇಕು. ಇದೆಲ್ಲವನ್ನು ಗಣನೆಗೆ ತೆಗೆದುಕೊಂಡರೆ, ದುರ್ಘಟನೆಯಲ್ಲಿ ಹತರಾದವರಲ್ಲಿ ಹನ್ನೆರಡು ಜನ ಸಹ ಕರಸೇವಕರಾಗಿರಲು ಸಾಧ್ಯತೆಯಿಲ್ಲ ಎಂದು ಸಿಸಿಟಿ ವರದಿಯಾಧರಿಸಿ ಝಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ ೨೭, ೨೦೦೨ ರ ಗೋಧ್ರಾ ಮತ್ತು ಅದಕ್ಕೆ ಪ್ರತಿಕ್ರೀಯೆಯಾಗಿ ನಡೆದ ಗೋಧ್ರೋತ್ತರ ಹಿಂಸಾಚಾರದ ಘಟನೆಗಳನ್ನು ಒಮ್ಮೆ ಅವಲೋಕಿಸಿದಾಗ, ಆ ದಿನವು ಆಧುನಿಕ ರಾಷ್ಟ್ರವಾಗುವತ್ತ ಭಾರತದ ಪ್ರಯಾಣವು ವಿಫಲಗೊಳ್ಳಲು ಆರಂಭಗೊಂಡ ದಿನ ಹಾಗು ಭಾರತದಲ್ಲಿ ಜನತಂತ್ರ ವ್ಯವಸ್ಥೆ ದುರ್ಬಲಗೊಳ್ಳಲು ಆರಂಭವಾದ ದಿನವಾಗಿ ಗುರುತಿಸಬೇಕಿದೆ ಎಂದು ಝಾ ಅವರು ಅಭಿಪ್ರಾಯ ಪಡುತ್ತಾರೆ. ಗೋಧ್ರಾ ಘಟನೆ ಗುಜರಾತ್ನಲ್ಲಿ ನರೇಂದ್ರ ಮೋದಿಯನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಮತ್ತು ಮುಂದೆ ಅವರನ್ನು ಭಾರತದ ಪ್ರಧಾನಿಯಾಗಿಸುವಲ್ಲಿ ಸಫಲವಾಯಿತು. ಗುಜರಾತಿನಲ್ಲಿ ವಿವಿಧ ಸಮುದಾಯಗಳ ನಡುವೆ ಭಯ ಮತ್ತು ಅನುಮಾನಗಳನ್ನು ಬಿತ್ತುವ ಮೂಲಕ ಮೋದಿ ತಮ್ಮ ಮತ್ತು ತಮ್ಮ ಪಕ್ಷದ ಅಧಿಕಾರವನ್ನು ಗಟ್ಟಿಗೊಳಿಸಿದರು. ಈಗ ಭಾರತದಲ್ಲೂ ಅವರು ಅದನ್ನೇ ಮಾಡುತ್ತಿದ್ದು ಅವನನ್ನು ತಡೆಯಲು ಈಗ ಯಾರೂ ಇಲ್ಲದಂತಾಗಿದೆ.
ಗೋರ್ಧಾ ಘಟನೆಯಿಂದ ಮೊದಲ್ಗೊಂಡು ಮೋದಿ-ಷಾ ಜೋಡಿ ಮಾಡಿದರೆನ್ನಲಾದ ಸಂಜಯ ಭಟ್ ಬಂಧನˌ ಹರೀನ್ ಪಾಂಡೆ ಹತ್ಯೆˌ ಯುವತಿಯೋರ್ವಳ ಸ್ನೂಪ್ಗೇಟ್ ಪ್ರಕರಣ ಹಾಗು ಮೋದಿ-ಷಾಗೆ ನೇರವಾಗಿ ಸಂಬಂಧಿಸದ ಮಾಲೇಗಾಂವ್ ಸ್ಪೋಟದ ತನಿಖಾದಿಕಾರಿಯಾಗಿದ್ದ ಹೇಮಂತ ಕರ್ಕರೆಯವರ ಮುಂಬೈಯಲ್ಲಿ ಪಾಕ್ ಉಗ್ರರ ದಾಳಿಯ ಸಂದರ್ಭದಲ್ಲಾದ ಅನುಮಾನಾಸ್ಪದ ಸಾವಿನ ಪ್ರಕರಣಗಳಗಳ ಕುರಿತು ನಿಸ್ಪಕ್ಷಪಾತ ತನಿಖೆ ಮಾಡಿಸದ ಅಂದಿನ ಕಾಂಗ್ರೆಸ್ ಸರಕಾರ ಮತ್ತು ಅದರೊಂದಿಗೆ ಅಧಿಕಾರ ಹಂಚಿಕೊಂಡ ದೇಶದ ಇನ್ನಿತರ ಪಕ್ಷಗಳು ಮಾಡಿದ ರಾಜಕೀಯ ತಪ್ಪಿನಿಂದ ಇಂದು ಕಾಂಗ್ರೆಸ್ ಸರಿಯಾದದ್ದನ್ನೇ ಅನುಭವಿಸುತ್ತಿದೆ. ಆದರೆ ಅದರೊಟ್ಟಿಗೆ ಇಡೀ ಭಾರತೀಯರೆಲ್ಲರೂ ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಮಾಡಿದ ತಪ್ಪಿನಿಂದಾಗಿ ಇಂದು ಮೋದಿಯ ಸರ್ವಾಧಿಕಾರಿ ಆಡಳಿತವನ್ನು ಅನುಭವಿಸುವಂತಾಗಿದ್ದು ಮಾತ್ರ ದುರಂತದ ಸಂಗತಿಯಾಗಿದೆ.