ಹಮಾಸ್ ಬಂಡುಕೋರರ ಪಡೆ ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ ಗಾಝಾದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿಯನ್ನು ಇಸ್ರೇಲ್ ನಡೆಸುತ್ತಿರುವಂತೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಯೋಜನೆ ಚರ್ಚಾ ವಸ್ತುವಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಸ್ಥಾಪನೆ ಪ್ರಸ್ತಾವನೆಯು ಇಸ್ರೇಲ್ ಮೇಲೆ ಹಮಾಸ್ ದಾಳಿಗೆ ಕಾರಣವೆಂಬುದು ತಮ್ಮ ಅನಿಸಿಕೆಯಾಗಿದೆ ಎಂಬ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಜಿ20 ಶೃಂಗಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆ ಮಾಡಿದ್ದವು. ಈ ಸಂಬಂಧ ಮಹತ್ವದ ಎಂಒಯು (Memorandum of Understanding-MoU) ಗೂ ಸಹಿ ಹಾಕಿದ್ದವು. ಇದು ಇಡೀ ಪ್ರದೇಶವನ್ನು ರೈಲು, ರಸ್ತೆ ಮತ್ತು ಬಂದರುಗಳ ಜಾಲದೊಂದಿಗೆ ಸಂಯೋಜಿಸುವ ಮಹತ್ವದ ಒಪ್ಪಂದವಾಗಿತ್ತು. ಆದರೆ ಇದೇ ಒಪ್ಪಂದ ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಗೆ ಕಾರಣವಾಗಿರಬಹುದು, ಆದರೆ, ನನ್ನ ಬಳಿ ಅದಕ್ಕೆ ಪುರಾವೆ ಎಂದು ಜೋ ಬೈಡನ್ ಹೇಳಿರುವುದಾಗಿ ವರದಿಯಾಗಿತ್ತು.
ಈ ವರದಿಗಳ ಕುರಿತು ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಅಧಿಕಾರಿ ಜಾನ್ ಕಿರ್ಬಿ ಸ್ಪಷ್ಟೀಕರಣ ನೀಡಿದ್ದು, ಅಧ್ಯಕ್ಷರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಸುಧಾರಣೆಗೆ ನಾವು ನಡೆಸುತ್ತಿರುವ ಪ್ರಯತ್ನ ಹಾಗೂ ಎರಡು-ದೇಶ ಪರಿಹಾರ ಕುರಿತಂತೆ ಮಹತ್ತರ ಹೆಜ್ಜೆ ಹಮಾಸ್ ದಾಳಿಗೆ ಕಾರಣ ಇರಬಹುದು ಎಂದು ನಾವು ಭಾವಿಸಿದ್ದೇವೆ ಎಂದು ಬಿಡೆನ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಿರ್ಬಿ ಹೇಳಿದ್ದಾರೆ.
ಬೈಡನ್ ಅವರು ತಮ್ಮ ಹೇಳಿಕೆಯಲ್ಲಿ ಇಂಡಿಯಾ-ಮಿಡ್ಲ್ ಈಸ್ಟ್ ಯುರೋಪ್ ಇಕನಾಮಿಕ್ ಕಾರಿಡಾರ್ ಅನ್ನು ಉಲ್ಲೇಖಿಸಿಲ್ಲ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.
ಆದರೆ, ಒಟ್ಟಾರೆ ಸಂಘರ್ಷದ ಬಳಿಕ ಇಂಡಿಯಾ-ಮಿಡ್ಲ್ ಈಸ್ಟ್ ಯುರೋಪ್ ಇಕನಾಮಿಕ್ ಕಾರಿಡಾರ್ (ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್) ಬಗ್ಗೆ ಚರ್ಚೆಗಳು ಮುನ್ನಲೆಗೆ ಬಂದಿದೆ.
ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಯೋಜನೆಯು ಎರಡು ಖಂಡಗಳಲ್ಲಿ ಹೂಡಿಕೆಗೆ ಅವಕಾಶಗಳನ್ನು ಉತ್ತೇಜಿಸುತ್ತದೆ. ರೈಲು ಬಂದರು ಯೋಜನೆಯು ಹೆಚ್ಚು ಸುಸ್ಥಿರ, ಸಮಗ್ರ ಮಧ್ಯಪ್ರಾಚ್ಯವನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿದೆ.
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತ, ಅಮೇರಿಕಾ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸ್ಥಾಪಿಸಲು ಸಹಿ ಹಾಕಿದ್ದವು.
ಏಷ್ಯಾ, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವೆ ವರ್ಧಿತ ಸಂಪರ್ಕ ಮತ್ತು ಆರ್ಥಿಕ ಏಕೀಕರಣದ ಮೂಲಕ ಆರ್ಥಿಕ ಅಭಿವೃದ್ಧಿಗೆ ಈ ಕಾರಿಡಾರ್ ಪ್ರೋತ್ಸಾಹ ಮತ್ತು ಪ್ರಚೋದನೆಯನ್ನು ನೀಡುತ್ತದೆ.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಎರಡು ಪ್ರತ್ಯೇಕ ಕಾರಿಡಾರ್ಗಳನ್ನು ಒಳಗೊಂಡಿರುತ್ತದೆ, ಭಾರತವನ್ನು ಮಧ್ಯಪ್ರಾಚ್ಯಕ್ಕೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಮಧ್ಯಪ್ರಾಚ್ಯವನ್ನು ಯುರೋಪ್ಗೆ ಸಂಪರ್ಕಿಸುವುದು ಈ ಉತ್ತರ ಕಾರಿಡಾರ್ ನ ಉದ್ದೇಶವಾಗಿದೆ.
ಇದು ರೈಲು ಮಾರ್ಗವನ್ನು ಒಳಗೊಂಡಿದ್ದು, ಯೋಜನೆ ಪೂರ್ಣಗೊಂಡ ನಂತರ, ಭಾರತದ ಮೂಲಕ ಏಷ್ಯಾ-ಯುರೋಪುಗಳ ನಡುವೆ ಸರಕು ಮತ್ತು ಸೇವೆಗಳ ಸಾಗಣೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು ಎಂದು ಅಮದಾಜಿಸಲಾಗಿದೆ.