ಬೆಂಗಳೂರು: May:15: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಬಹುಮತ ಒಲಿದಿದ್ದರೂ ಸಿಎಂ ಆಯ್ಕೆಯಲ್ಲಿ ಒಮ್ಮತ ದಕ್ಕಿಸಿಕೊಳ್ಳಲು ಆಗಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಈಗ ಕೆಪಿಸಿಸಿ ಅಧ್ಯಕ್ಷ ಮತ್ತು ಪ್ರಬಲ ಸಿಎಂ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಸಖತ್ ರೆಬೆಲ್ ಆಗಿದ್ದಾರೆ. ಇದರ ಪರಿಣಾಮವಾಗಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಮತ್ತಷ್ಟು ಟ್ರಬಲ್ ಎದುರಾಗಿದೆ.
ಮುಖ್ಯಮಂತ್ರಿ ಆಯ್ಕೆ ಅಂತಿಮಗೊಳಿಸುವ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಇದ್ರ ಬೆನ್ನಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಲ್ಲಿನ ಖಾಸಗಿ ಹೋಟೆಲ್ ನಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ತಂಗಿರುವ ಸಿದ್ದರಾಮಯ್ಯ, ಸಿಎಂ ಸ್ಥಾನದ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.

ತಾವು ಕೊಟ್ಟ ಮಾತಿನಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ಅಧಿಕಾರಕ್ಕೆ ತಂದಿದ್ದರೂ ಹೈಕಮಾಂಡ್ ನನ್ನ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಈಗ ಹೈಕಮಾಂಡ್ ವಿರುದ್ಧವೇ ತೀವ್ರ ಬೇಸರಗೊಂಡಿದ್ದಾರೆ. ನವದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದ್ದರೂ ಡಿಕೆ ಶಿವಕುಮಾರ್ ತೆರಳಲು ಹಿಂದೇಟು ಹಾಕಿದ್ದಾರೆ. ಇತ್ತ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಡಿಕೆಶಿ ಕೂಡ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಪೊಲೀಸರು ಕೂಡ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕೊನೆಯ ಕ್ಷಣದಲ್ಲಿ ದೆಹಲಿಗೆ ತೆರಳುವುದನ್ನು ಡಿಕೆಶಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

ನನಗೆ ಹೊಟ್ಟೆನೋವು ಇದೆ, ಗ್ಯಾಸ್ಟ್ರಿಕ್ ಸಮಸ್ಯೆ ಇದೆ, ಹೀಗಾಗಿ ನನಗೆ ವಿಶ್ರಾಂತಿ ಬೇಕಿದೆ ಎಂಬ ನೆಪ ಹೇಳಿ ದೆಹಲಿಗೆ ತೆರಳುವುದರಿಂದ ಡಿ.ಕೆ.ಶಿವಕುಮಾರ್ ತಪ್ಪಿಸಿಕೊಂಡು ಬೆಂಗಳೂರಿನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದಲ್ಲೇ ಇದ್ದುಕೊಂಡೇ ಮುಂದಿನ ಕಾರ್ಯತಂತ್ರ ಹೆಣೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.