
ಪ್ರೀತಿಯ ಬಲೆಗೆ ಬಿದ್ದು ಪ್ರಿಯತಮನ ಸಹಾಯದಿಂದ ತನ್ನ ಪತಿಯನ್ನು ಕೊಡಗಿನ ಪನ್ಯ ಎಸ್ಟೇಟ್ ಬಳಿ ಸುಟ್ಟು ಹತ್ಯೆ ಮಾಡಿದ ಯುವತಿಯ ಪ್ರಕರಣ ಕೊಡಗು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂತು. ಯಾವುದೇ ಕುರುಹು ಸಿಗದಂತೆ ಮೃತ ದೇಹ ಸುಟ್ಟು ಹಾಕಿದ್ದ ಅತ್ಯಂತ ಕ್ಲಿಷ್ಟಕರ ಎನಿಸಿದ್ದ ಪ್ರಕರಣವನ್ನು ಚಾಣಕ್ಷತನದಿಂದ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದ ಕೊಡಗು ಜಿಲ್ಲಾ ಪೊಲೀಸ್ ತಂಡ ಇಡೀ ದೇಶದ ಗಮನ ಸೆಳೆದಿತ್ತು. ಪೊಲೀಸರ ಈ ಸಾಧನೆಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ. ಅಂಕುರ್ ರಾಣಾ ಇದೇ ಪೊಲೀಸರ ಖ್ಯಾತಿಗೆ ಮಣ್ಣು ಎರಚುವ ಕೃತ್ಯ ಮಾಡಿದ. ಆರೋಪಿ ಅಂಕುರ್ ರಾಣಾ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿ ಪೊಲೀಸ್ ಇಲಾಖೆಗೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ.
ಆದರೂ ಕುಗ್ಗದ ಪೊಲೀಸ್ ವಿಶೇಷ ತನಿಖಾ ತಂಡ ಛಲ ಬಿಡದೇ ಕಾರ್ಯಾಚರಣೆಗೆ ಇಳಿದು ನೆನ್ನೆ ದಿನ ರಾಜಸ್ಥಾನದ ಜೈಪುರದಲ್ಲಿ ಅಂಕುರ್ ರಾಣಾನ ಪಲಾಯನಕ್ಕೆ ಅಂಕುಶ ಹಾಕಿ ಪೊಲೀಸ್ ತಂಡ ಮತ್ತೆ ಈತನ ಹೆಡೆಮುರಿ ಕಟ್ಟಿದೆ.
ಅಕ್ಟೋಬರ್ ತಿಂಗಳ ಎಂಟನೇ ತಾರೀಖಿನಂದು ಸುಂಟಿಕೊಪ್ಪ ಪನ್ಯ ತೋಟದ ಮಾರಿಗುಡಿ ಬಳಿ ಕಾಫಿ ತೋಟದ ನಡುವೆ ಅಪರಿಚಿತ ಪುರುಷನ ಅರೆಬೆಂದ ಮೃತದೇಹ ಪತ್ತೆಯಾಗಿತ್ತು.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 4 ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ನಂತರ ಆರೋಪಿಗಳ ಹೆಡೆಮುರಿ ಕಟ್ಟಲಾಗಿತ್ತು. ಇದಕ್ಕಾಗಿ ಕೊಡಗು ಪೊಲೀಸರು ವ್ಯಾಪಕ ಪ್ರಶಂಸೆ ಪಡೆದಿದ್ದರು.ಮೂವರು ಆರೋಪಿಗಳನ್ನು ಅ. 28 ರಂದು ಸ್ಥಳ ಮಹಜರಿಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.
ತನಿಖೆ ಮುಗಿದ ನಂತರ ಕಳೆದ ಮಂಗಳವಾರ ಆರೋಪಿಗಳ ಪೈಕಿ ನಿಹಾರಿಕ ಮತ್ತು ಅಂಕುರ್ ರಾಣಾನನ್ನು ತೆಲಂಗಾಣಾದ ಉಪ್ಪಲ್ ಎಂಬಲ್ಲಿಗೆ ಕರೆದುಕೊಂಡು ಹೋಗಿ ಆ ದಿನದ ಮಹಜರು ಮುಗಿಸಿ ಲಾಡ್ಜ್ ನಲ್ಲಿ ತನಿಖಾ ತಂಡ ವಾಸ್ತವ್ಯ ಹೂಡಿತ್ತು.
ಗುರುವಾರ ಬೆಳಗಿನ ಜಾವ ಎರಡೂವರೆಯಿಂದ ಮೂರೂವರೆ ಗಂಟೆಯ ನಡುವೆ ಅಂಕುರ್ ರಾಣಾ ಕೈಕೊಳವನ್ನು ಬಿಡಿಸಿಕೊಂಡು ಪೊಲೀಸ್ ಸಿಬ್ಬಂದಿಯೊಬ್ಬರ ಮೊಬೈಲ್ ಅನ್ನು ಎಗರಿಸಿ ಕಿಟಕಿ ಮೂಲಕ ಪರಾರಿ ಆಗಿದ್ದ.ಇದರಿಂದ ತಬ್ಬಿಬ್ಬಾದ ಪೊಲೀಸರು ಈತನ ಪತ್ತೆಗಾಗಿಉತ್ತರ ಭಾರತಕ್ಕೆ ತೆರಳಿದರು.ಈ ತನಿಖಾ ತಂಡ ನಿನ್ನೆ ಜೈಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿ ಕೊಡಗಿಗೆ ಕರೆ ತರಲಾಗುತ್ತಿದೆ.
ಮೊನ್ನೆ ಸೋಮವಾರ ನಿಹಾರಿಕಾ ಹಾಗೂ ಅಂಕುರ್ ರಾಣಾನನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು.ಆದರೆ ಅಂಕುರ್ ರಾಣಾ ತಪ್ಪಿಸಿಕೊಂಡಿದ್ದರಿಂದ ನಿಹಾರಿಕಾಳನ್ನು ಮಾತ್ರ ಹಾಜರುಪಡಿಸಿ ತೆಲಂಗಾಣದಲ್ಲಿ ದೂರು ನೀಡಲಾದ ಎಫ್.ಐ.ಆರ್.ಅನ್ನು ಹಾಜರುಪಡಿಸಿ, ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವುದಾಗಿ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.ಕೊನೆಗೂ ಕೊಡಗು ಪೊಲೀಸರು ಕೆಚ್ಚೆದೆಯಿಂದ ನಿಟ್ಟುಸಿರು ಬಿಡುವಂತೆ ಆಗಿದೆ.