
ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಾವು ನೋವು ಸಂಭವಿಸುತ್ತಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕದ ದಸರಾ ಆನೆಗಳನ್ನು ಹೊರತು ಪಡಿಸಿ 4 ಕುಮ್ಕಿ ಆನೆಗಳನ್ನು (Kumki elephants) ಆಂಧ್ರಕ್ಕೆ ನೀಡಲಾಗವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರದ ಅರಣ್ಯ ಇಲಾಖೆ ಸಿಬ್ಬಂದಿಗೆ ಮತ್ತು ಮಾವುತರಿಗೆ ಆನೆ ಸೆರೆ ಹಿಡಿಯುವ, ಪಳಗಿಸುವ ಮತ್ತು ಅದನ್ನು ಆನೆ ಕಾರ್ಯಾಚರಣೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು ಎಂದರು.



ದಸರಾ ಆನೆ ಕೊಡುವುದಿಲ್ಲ ರಾಜ್ಯದ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಆನೆಗಳ ಬಗ್ಗೆ ಜನರಲ್ಲಿ ಭಾವನಾತ್ಮಕ ನಂಟಿರುತ್ತದೆ. ಹೀಗಾಗಿ ದಸರಾದಲ್ಲಿ ಭಾಗಿಯಾದ ಯಾವುದೇ ಆನೆಯನ್ನಾಗಲೀ, ಮುಂಬರುವ ದಸರಾ ಮಹೋತ್ಸವಕ್ಕಾಗಿ ಗುರುತಿಸಲಾದ ಯಾವುದೇ ಕುಮ್ಕಿ ಆನೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.



ಆಂಧ್ರ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಆಂಧ್ರ ಪ್ರದೇಶದ ಕಾಡಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಅಪಾರ ಬೆಳೆ ನಷ್ಟ, ಪ್ರಾಣ ಹಾನಿ ಉಂಟಾಗಿದೆ. ಹೀಗಾಗಿ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಲು ಕುಮ್ಕಿ ಆನೆಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕಕ್ಕೆ ಆಂಧ್ರ ಪ್ರದೇಶ ಸರ್ಕಾರ ಮನವಿ ಮಾಡಿತ್ತು. ಶುಕ್ರವಾರ ಈ ಸಂಬಂಧ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ 8 ಕುಮ್ಕಿ ಆನೆಗಳನ್ನು ನೀಡುವ ಕುರಿತು ಒಪ್ಪಂದ ನಡೆದಿದೆ. ಕುಮ್ಕಿ ಆನೆಗಳೆಂದರೆ ತರಬೇತಿ ಪಡೆದ ಆನೆಗಳಾಗಿದ್ದು, ಇವುಗಳನ್ನು ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಬಳಸಲಾಗುತ್ತದೆ.