ಹಾಸನ: ಒಳ ಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳ ಮೀಸಲಾತಿ ಕೊಡಬೇಕೆಂದು ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಇದನ್ನು ಇಲ್ಲೇ ಮಾಡ ಬಹುದಿತ್ತು, ಈಗಿನ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲೇ ಬಹಳ ಜನ ಇದ್ದಾರೆ. ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ, ಒಕ್ಕಲಿಗರಿಗೆ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟೆ. ಇದನ್ನು ನಿರ್ಣಯ ಮಾಡಿದ್ದು ದೇವೇಗೌಡ. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಇವತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ, ಅಹಿಂದಾ ಅಹಿಂದಾ ಅಂತ ಹೇಳಿದ್ದ ಅವರು, ಈ ರಾಜ್ಯದಲ್ಲಿ ದೇವೇಗೌಡರು ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದರು ಎಂದು ಕಿಡಿಕಾರಿದರು.
ನಾನು ಏನು ಮಾಡಿದ್ದೇನೆ ಎಂಬುದರ ಬಗ್ಗೆ ಡಿಬೆಟ್ ಆಗಲಿ, ಇದನ್ನು ಲಾಜಿಕಲ್ ಎಂಡ್ ಮಾಡುತ್ತೇನೆ. ನಾನು ಪ್ರಧಾನಿಯಾಗಿದ್ದಾಗ ಯಾರು ನಮ್ಮ ಸರ್ಕಾರನಾ ಯಾರು ತೆಗೆದಿದ್ದು ಕಾಂಗ್ರೆಸ್, ಬಿಜೆಪಿನಾ? ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು, ನನ್ನ ಪ್ರಧಾನಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾರು? ಈ ವಿಷಯ ರಾಜ್ಯಾದ್ಯಂತ ಚರ್ಚೆ ಆಗಬೇಕು. 1995ರಲ್ಲಿ ನಾನು ನಿರ್ಣಯ ಮಾಡಿದ್ದೆ, ಇವತ್ತು ಒಳಮೀಸಲಾತಿ ಜಾರಿ ಮಾಡಲು ಹೊರಟಿದ್ದಾರೆ. ಇದನ್ನೇ ಈ ಚುನಾವಣೆಯಲ್ಲಿ ಇಟ್ಟುಕೊಂಡು ಹೋರಾಟ ಮಾಡುತ್ತೇನೆ ಎಂದ ಅವರು, ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಅಯೋಧ್ಯೆಗೆ ಹೋಗ್ತೇನೆ: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಾನು ನನ್ನ ಪತ್ನಿ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಹೋಗುತ್ತೇವೆ. ಜನವರಿ 22ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ ಅದರಲ್ಲೆ ಹೋಗ್ತೇವೆ, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ದಲ್ಲಿ ಭಾಗಿಯಾಗುತ್ತೇನೆ ಎಂದರು.