ಚಿತ್ರದುರ್ಗ: ಬೆಂಗಳೂರಲ್ಲಿ ಹತ್ಯೆಗೀಡಾದ ರೇಣುಕಾಸ್ವಾಮಿ ಮನೆಗೆ ನಟ ಪ್ರಥಮ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಪ್ರಥಮ್ ಭೇಟಿ ವೇಳೆ ರೇಣುಕಾ ತಂದೆ ಕಣ್ಣೀರು ಹಾಕಿದ್ದಾರೆ. ತನ್ನ ಮಗನನ್ನು ನೆನೆದು ಕಣ್ಣೀರಕಿದ ರೇಣುಕಾ ತಂದೆ. ಈ ವೇಳೆ ಮಾತನಾಡಿದ ಪ್ರಥಮ್, ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಬಂದಿದ್ದೆವು. ಹಾಗೆಯೇ ರೇಣುಕಾಸ್ವಾಮಿಯವರ ಮನೆಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಇಲ್ಲಿ ಬಂದು ಯಾರನ್ನೋ ಸಮರ್ಥನೆ ಮಾಡಿಕೊಂಡು ಮನಸ್ಸು ನೋಯಿಸಲು ಬಂದಿಲ್ಲ. ಅಷ್ಟೊಂದು ಹೀನಾಯವಾಗಿ ಸಾವಾಗಿತ್ತು, ಹಾಗಾಗಿ ಸಹನಾರನ್ನು ನಾನು ಮಾತನಾಡಿಸಬೇಕಿತ್ತು. ಆ ಕುಟುಂಬಕ್ಕಾದ ನೋವು ನನಗೆ ತುಂಬಾ ಕಾಡುತ್ತಿತ್ತು ಎಂದಿದ್ದಾರೆ.
ರೇಣುಕಾಸ್ವಾಮಿ ಕುಟುಂಬಸ್ಥರನ್ನು ಕಂಡು ನನ್ನ ಕೈಲಾದ ಸಹಾಯ ಮಾಡಬೇಕು ಅಂದುಕೊಂಡಿದ್ದೆ, ಯಾರನ್ನೂ ನೋಯಿಸುವ ಹೇಳಿಕೆ ಕೊಡೋಕೆ ನಾನು ಬಂದಿಲ್ಲ. ಜನ ಯಾರ ಪರ ಅಥವಾ ವಿರೋಧವಾಗಿ ಬೇಕಾದ್ರೂ ಮಾತನಾಡಲಿ. ಅದನ್ನು ಜನರ ವಿವೇಚನೆಗೆ ಬಿಡ್ತೀನಿ. ರೇಣುಕಾಸ್ವಾಮಿ ಕುಟುಂಬಕ್ಕೆ ಹರ್ಟ್ ಆಗುತ್ತೆ ಅಂತಾ ತಿಳಿದು ಮಾತನಾಡಿ ಎಂದಿರುವ ಪ್ರಥಮ್, ಕೆಲವರು ತುಂಬಾ ಎಕ್ಸ್ಟ್ರೀಮ್ ಆಗಿ ಮಾತನಾಡ್ತಾರೆ. ನಾನು ಒಂದು ಹೇಳಿಕೆ ಕೊಟ್ಟಾಗ ಅದನ್ನು ತಿರುಚಿ ಹೇಳಲಾಗಿತ್ತು. ಅದಕ್ಕೆ ನನ್ನ ಮನೆಯ ಮುಂದೆ ಸೆಕ್ಷನ್ 144 ಹಾಕಿದ್ರು. ಅದರಿಂದ ಆಫೀಸ್ಗೆ ಹೋಗೋಕು ತೊಂದರೆಯಾಗಿತ್ತು ಎಂದಿದ್ದಾರೆ.
ಈ ಕುಟುಂಬ ಮಗನನ್ನು ಕಳೆದುಕೊಂಡಿದೆ. ಸಹನಾ ಅವರ ಗಂಡನನ್ನು ಕಳೆದುಕೊಂಡು ನೋವಲ್ಲಿದ್ದಾರೆ. ನಾನು ಇಲ್ಲಿ ಬಂದು ಕಾಟಾಚಾರಕ್ಕೆ ವಿಷಾದದ ನುಡಿ ಹೇಳಲ್ಲ. ರೇಣುಕಾಸ್ವಾಮಿ ಕುಟುಂಬಕ್ಕೆ ಆಗಿರುವುದು ಅಕ್ಷಮ್ಯ, ಅದು ಆಗಬಾರದಿತ್ತು. ರೇಣುಕಾಸ್ವಾಮಿ ಬಗ್ಗೆ ಬೈಯ್ಯುವವರು ಇವರ ಬಗ್ಗೆ ಒಂದು ಸಾರಿ ಯೋಚಿಸಲಿ. ಜಾಲತಾಣದಲ್ಲಿ ಕಮೆಂಟ್ ಹಾಕೋರು ನಿಮ್ಮ ಕುಟುಂಬದಲ್ಲೇ ಹೀಗಾಗಿದ್ರೆ ಏನು ಮಾಡ್ತಿದ್ರಿ ಎಂದು ಅಂತಾ ಯೋಚಿಸಿ ಆ ಬಳಿಕ ಹಾಕಿ. ನೊಂದಿರುವ ಕುಟುಂಬವನ್ನ ಯಾರೂ ನೋಯಿಸುವ ಪ್ರಯತ್ನ ಮಾಡಬೇಡಿ. ನಾನು ಈ ಕುಟುಂಬಕ್ಕೆ ಏನು ಸಹಾಯ ಮಾಡ್ಬೇಕೋ ಮಾಡ್ತೀನಿ. ಇತ್ತೀಚೆಗೆ ಸಹಾಯ ಮಾಡೋದು ಅಂದ್ರೆ ತೋರ್ಪಡಿಕೆಗೆ ಅನ್ನೋ ಧಾರುಣ ಸ್ಥಿತಿಗೆ ಹೋಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ತಂದೆಗೆ ಮೊದಲಿಗಿಂತ ಜಾಸ್ತಿ ಜವಾಬ್ದಾರಿ ಇದೆ. ಆ ಮಗು ಬೆಳವಣಿಗೆ ಆಗೋವರೆಗೆ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದಿರುವ ಪ್ರಥಮ್, ದರ್ಶನ್ ಬಿಡುಗಡೆಯಾಗಲಿ ಅಂತಾ ಬೆಂಗಳೂರಲ್ಲಿ ಪೂಜೆ ಮಾಡಿದ ವಿಚಾರಕ್ಕೆ ಮಾತನಾಡಿ, ನನಗೆ ಅದಕ್ಕೆ ಸಮಯ ಇಲ್ಲ, ನಾನು ಬೆಳಗ್ಗೆ ಈಶ್ವರನ ಪೂಜೆ ಮಾಡ್ತೀನಿ. ಮನೆದೇವ್ರು ಕಬ್ಬಾಳಮ್ಮಗೆ ನಮಸ್ಕಾರ ಮಾಡ್ತೀನಿ. ಪೂಜೆ ಜೊತೆ ನಾನು ಉರುಳು ಸೇವೆ ಬೇಕಾದ್ರೂ ಮಾಡ್ತೀನಿ. ಆದ್ರೆ ರೇಣುಕಾಸ್ವಾಮಿ ಕುಟುಂಬಕ್ಕೆ ಆದ ನೋವನ್ನು ತುಂಬಿಕೊಡೋಕೆ ಸಾಧ್ಯವಾ..? ರೇಣುಕಾಸ್ವಾಮಿ ಪತ್ನಿ ಸಹನಾಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಾ…? ಎಂದು ಪ್ರಶ್ನೆ ಮಾಡಿದ್ದಾರೆ. ಚಿತ್ರ ರಂಗದ ಒಳಿತಿಗೆ ಮಾಡಿದ ಪೂಜೆ ಅಂತಾ ನನಗೆ ಗೊತ್ತಾಯ್ತು. ಜಗ್ಗೇಶ್ ಸರ್ ಈ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಯಾವುದೇ ವ್ಯಕ್ತಿಗಿಂತ ನಮಗೆ ಚಿತ್ರರಂಗ ದೊಡ್ಡದು ಎಂದು ಪ್ರಥಮ್ ತಿಳಿಸಿದ್ದಾರೆ.