ಬೆಂಗಳೂರು: ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಮುಖ್ಯ ಕಾರ್ಯದರ್ಶಿ ಅವರು ಇಬ್ಬರು ಅಧಿಕಾರಿಗಳ ಮೇಲೆ ಚಾಟಿ ಬೀಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಖ್ಯ ಕಾರ್ಯದರ್ಶಿ ಕೂಡಲೇ ಇಬ್ಬರನ್ನು ಕರೆದು ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸರಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವಮಾನವರು ಎಂದು ಕರೆದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಇದರಿಂದ ಜನತೆಗೆ ಯಾವ ಸಂದೇಶ ಕೊಡುತ್ತಿದ್ದಾರೆ ಅವರು ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಸರಕಾರ ಇಲ್ಲದ ಶೂನ್ಯ ಸ್ಥಿತಿ ಇದೆ ಎನ್ನುವ ಭಾವನೆ ಬರುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ನಾನು ಕೂಡ ಸರಕಾರವನ್ನು ನಡೆಸಿದ್ದೇನೆ. ಆಗೆಲ್ಲ ಹೀಗೆ ಆಗಲು ಬಿಟ್ಟಿರಲಿಲ್ಲ ಎಂದರು.
ಅಧಿಕಾರಿಗಳಿಗೆ ಒಂದಿಷ್ಟು ಮಾರ್ಗಸೂಚಿಗಳು, ನಿಯಮಾವಳಿಗಳು ಇವೆ. ಅವರು ಜನತೆಗೆ ಉತ್ತರದಾಯಿ ಆಗಿರಬೇಕು. ಅವರು ಸೋಷಿಯಲ್ ಮೀಡಿಯಾದಲ್ಲಿ ಹಾದಿ ರಂಪ ಬೀದಿ ರಂಪ ಮಾಡಿಕೊಳ್ಳುವ ಬದಲು ಮುಖ್ಯ ಕಾರ್ಯದರ್ಶಿ ಬಳಿ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಿತ್ತು. ಇದೊಂದೇ ಅಲ್ಲ, ಅನೇಕ ಪ್ರಕರಣಗಳು ನಡೆದಿವೆ. ಅಧಿಕಾರಿಗಳಿಗೆ ಸರ್ಕಾರದ ಮೇಲೆ ಗೌರವ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ಸರಕಾರಿ ಅಧಿಕಾರಿಗಳನ್ನು ದೇವ ಮಾನವರು ಅಂತಾರೆ. ಹಾಗೆಂದರೆ ಏನರ್ಥ? ಅವರೇನು ಇಂದ್ರಲೋಕದಿಂದ ಇಳಿದು ಬಂದವರಾ? ಇದೆಲ್ಲಾ ವಿಚಾರಗಳು ನನಗೆ ಗೊತ್ತಿದೆ. ಸಾರಾ ಮಹೇಶ್ ಅವರ ಮೇಲೆ ಒಬ್ಬ ಮಹಿಳಾ ಅಧಿಕಾರಿ ಆರೋಪ ಮಾಡಿದ್ದು ಗೊತ್ತಿದೆ, ಆ ಅಧಿಕಾರಿ ಎಲ್ಲಿ ಹೋದರೂ ವಿವಾದವೇ. ಯಾಕೆ ಬೇಕು ಇಂಥ ವಿವಾದಗಳು? ನನಗೆ ಗೊತ್ತಿರುವ ಕೆಲ ಮಾಹಿತಿಗಳನ್ನು ಹೊರಗೆ ಇಟ್ಟರೆ ಸರಕಾರಕ್ಕೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಾರಾ ಮಹೇಶ್ ಅವರು ಆ ಮಹಿಳಾ ಅಧಿಕಾರಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದಾಗ, ಆ ಅಧಿಕಾರಿಯ ಪರವಾಗಿ ಯಾರೆಲ್ಲ, ಹೇಗೆಲ್ಲಾ ಒತ್ತಡ ಹಾಕಿದರು, ಎಂತೆಂಥ ಹುದೆಯಲ್ಲಿದ್ದವರು ಪ್ರಭಾವ ಬೀರಿದರು ಎನ್ನುವುದು ನನಗೆ ಗೊತ್ತಿದೆ. ಕೊನೆಗೆ ನಾನೇ ಸಾರಾ ಮಹೇಶ್ ಅವರಿಗೆ, ಹೋಗಲಿ.. ಬಿಟ್ಟು ಬಿಡಿ ಎಂದು ಹೇಳಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಡಬಲ್ ಎಂಜಿನ್ ಸರಕಾರದಲ್ಲಿ ಇದೆಲ್ಲಾ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ರಾಜ್ಯದಿಂದ ಕೈಗಾರಿಕೆಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಇಲ್ಲಿ ನೋಡಿದರೆ ಅಧಿಕಾರಿಗಳು ಕಿತ್ರಾಡಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಿಕ್ ಬಸ್ ಯೋಜನೆ ಎಲ್ಲಿಗೆ ಹೋಯ್ತು? ತಮಿಳುನಾಡಿಗೆ ಹೋಗಿದೆ ಅದು. ಸರಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂದು ಕಿಡಿ ಕಾರಿದರು.
ಎ.ಟಿ.ರಾಮಸ್ವಾಮಿ ಮಾತು ಸರಿ ಇಲ್ಲ:

ಹಾಸನದ ರಾಜಕೀಯಕ್ಕೆ ಸಂಬಂಧಿಸಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಗ್ಗೆ ಹಿರಿಯ ಶಾಸಕ ಎ.ಟಿ.ರಾಮಸ್ವಾಮಿ ಅವರು ಬಳಕೆ ಮಾಡಿರುವ ಪದ ಸರಿ ಇಲ್ಲ ಎಂದು ಹೇಳಿದರು.
ಎರಡು ಮೂರು ವರ್ಷದಿಂದ ರಾಮಸ್ವಾಮಿ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ, ಯಾವ ಸಭೆಗಳಿಗೆ ಕೂಡ ಬಂದಿಲ್ಲ. ಎರಡು ವರ್ಷದಿಂದಲೇ ಅನೇಕರು ಬೇರೆ ಪಕ್ಷದ ಜತೆ ಸಂಪರ್ಕದಲ್ಲಿ ಇದ್ದರು. ಅರಕಲಗೂಡಿನ ರಾಜಕಾರಣ ಹೇಗಾಯ್ತು, ಯಾಕೆ ಹೀಗಾಯ್ತು ಅಂತ ನನಗಿಂತ ರಾಮಸ್ವಾಮಿ ಅವರಿಗೇ ಚೆನ್ನಾಗಿ ಗೊತ್ತಿದೆ. ಅವರು ನಾನು ಹಿಂದೆ ನೀಡಿದ್ದ ಮಹತ್ವದ ಹೊಣೆಯನ್ನು ಬಹಳ ಉತ್ತಮವಾಗಿ ನಿಭಾಯಿಸಿದ್ದರು. ಅಂತವರು ರೇವಣ್ಣ ಅವರನ್ನು ರಾವಣ ಎಂದು ಕರೆಯಬಾರದಿತ್ತು ಎಂದರು ಅವರು.
ಆದಷ್ಟು ಬೇಗ ಎರಡನೇ ಪಟ್ಟಿ:
ನಮ್ಮ ಪಕ್ಷದಲ್ಲಿ ಟಿಕೆಟ್ ಗೊಂದಲ ಇಲ್ಲ. ಎರಡನೇ ಪಟ್ಟಿ ಶೀಘ್ರದಲ್ಲಿ ಹೊರಬರಲಿದೆ. ಅದರಲ್ಲಿ ಹಾಸನ ಅಭ್ಯರ್ಥಿಯ ಹೆಸರು ಇರುತ್ತದೆ ಎಂದು ತಿಳಿಸಿದರು.
ಕುಕ್ಕರ್ ಬ್ಲಾಸ್ಟ್ ಬಗ್ಗೆ ಕಿಡಿ:
ಜನರಿಗೆ ಹಂಚಿರುವ ಅಗ್ಗದ ಕುಕ್ಕರ್ ಗಳು ಜೀವ ತೆಗೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು, ೧೫೦ ಸೀಟು ಗೆದ್ದಾಯ್ತು ಅನ್ನುವವರು ಕುಕ್ಕರ್ ಸೀರೆ ಹಂಚಿಕೊಂಡು ಹೋಗ್ತಾ ಇದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಯತ್ನಾಳ್ ಹೇಳಿಕೆ ತಪ್ಪು;
ಅಡುಗೆ ಅನಿಲ ದರ ಏರಿಕೆ ಬಗ್ಗೆ ಮಾತನಾಡಿದ ಜನರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದಲ್ಲಿ ಗ್ಯಾಸ್ ದರ ಎಷ್ಟಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರಿ ಇಲ್ಲ. ಪಾಕಿಸ್ತಾನದಲ್ಲಿ ಜನರ ಬವಣೆ ಏನಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೆ? ಅಂದರೆ ನಮ್ಮ ಜನರು ಪಾಕಿಸ್ತಾನಕ್ಕೆ ಹೋಗಬೇಕಾ? ಅಲ್ಲಿ ಬೆಲೆ ದುಬಾರಿ ಆದರೆ ಇಲ್ಲಿಯೂ ಬೆಲೆ ಏರಿಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.