ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ವಿಜೃಂಭಣೆಯಿಂದ ಸಜ್ಜಾಗಿದೆ. ಜಗತ್ ಪ್ರಸಿದ್ಧ ಜಂಬೂಸವಾರಿ ಮೆರವಣಿಗೆ ಮಧ್ಯಾಹ್ನ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭ ಆಗಲಿದೆ. ಮಧ್ಯಾಹ್ನ 1:46 ರಿಂದ 2:08 ಸಮಯದ ನಡುವೆ ನಂದಿಧ್ವಜ ಪೂಜೆ ಸಲ್ಲಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಆ ನಂತರ ಜಾನಪದ ಕಲಾತಂಡಗಳು ಹಾಗು 40ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳ ಮೆರವಣಿಗೆ ಶುರುವಾಗಲಿದೆ. ಅಂತಿಮವಾಗಿ ವಿಜಯದಶಮಿ ಮೆರವಣಿಗೆ ಅಂದರೆ ಜಂಬೂ ಸವಾರಿ
ಸಂಜೆ 4:40 ರಿಂದ 5ರ ನಡುವೆ ಆರಂಭ ಆಗಲಿದೆ. ಸಿಎಂ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ವಿಜಯದಶಮಿ ಚಾಮುಂಡೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಮಹಾಪೌರರಾದ ಶಿವಕುಮಾರ್, ಇತರೆ ಶಾಸಕರು ಉಪಸ್ಥಿತರಿರಲಿದ್ದಾರೆ.
ದಸರಾ ಜಂಬೂಸವಾರಿ ಮೇಲೆ ‘ಉಗ್ರ’ಕಣ್ಣು
ಮೈಸೂರು ಅರಮನೆ ಒಳಗಿನ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಬಳಿಕ ಅರಮನೆ ಗೇಟ್ನಿಂದ ಹೊರ ಬರುವುದಕ್ಕೆ ಸುಮಾರು ಸಂಜೆ 5.30 ಆಗುವ ಸಾಧ್ಯತೆ ಇದೆ. ಜಂಬೂಸವಾರಿ ವೀಕ್ಷಣೆಗೆ 25 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬಾರಿ ದಸರಾ ವೀಕ್ಷಣೆಗೆ 1 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಬಾರಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಉಗ್ರರ ಕರಿನೆರಳು ಭೀತಿ ಹುಟ್ಟಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಆತಂಕ ಎದುರಾಗಿದ್ದು, ಕರ್ನಾಟಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ. ದಸರಾ ಮಹೋತ್ಸವಕ್ಕೆ ಅಧಿಕಾರಿಗಳೂ ಸೇರಿ 6000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಸೂರು ನಗರದ ಸುತ್ತಲೂ ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ನಿಗಾ ಇಡಲಿದೆ.
ರಾತ್ರಿ 7.30ರ ನಂತರ ಪಂಚಿನ ಕವಾಯತು, ತೆರೆ
ಈಗಾಗಲೇ ಕಳೆದೊಂದು ವಾರದಿಂದ ಮೈಸೂರು ಜಗಮಗಿಸುತ್ತಿದೆ. ಜಂಬೂಸವಾರಿ ಸಂಜೆ 5.30 ರಿಂದ ಒಂದೆರಡು ಗಂಟೆ ಬಳಿಕ ಆಸುಪಾಸಿಗೆ ಮುಕ್ತಾಯ ಆಗಲಿದ್ದು, ಆ ಬಳಿಕ ರಾತ್ರಿ 7.30ಕ್ಕೆ, ಪಂಜಿನ ಕವಾಯತು ಆರಂಭ ಆಗಲಿದೆ. ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಟಾರ್ಚ್ ಲೈಟ್ ಪರೇಡ್ ಕಣ್ತುಂಬಿಕೊಳ್ಳಬಹುದು. ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ ಸೇರಿದಂತೆ ಪೊಲೀಸ್ ಪಡೆಗಳು ಆಕರ್ಷಕ ಪಥಸಂಚಲನ ನಡೆಸಲಿದ್ದಾರೆ. ಅಶ್ವರೋಹಿ ಪಡೆ ಪೊಲೀಸರು ಟೆಂಟ್ ಪೆಗ್ಗಿಂಗ್ ಮಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಈ ಬಾರಿ ಯಾಕೆ ಉಗ್ರರ ಭೀತಿ..? ಏನಿದರ ಲೆಕ್ಕಾಚಾರ..?
ಮೈಸೂರು ದಸರಾ ಹಾಗು ವಿಶ್ವಕಪ್ ಕ್ರೀಡಾಕೂಟ ನಡೆಯುತ್ತಿರುವ ಕಾರಣಕ್ಕೆ ಉಗ್ರರು ಜನರಲ್ಲಿ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದೇ ಕಾರಣಕ್ಕೆ ಭದ್ರತೆ ಹೆಚ್ಚಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಭದ್ರತೆ ಬಗ್ಗೆ ಸ್ವತಃ ಡಿಜಿ ಮತ್ತು ಐಜಿಪಿ ಮಾಹಿತಿ ಪಡೆದಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ದಕ್ಷಿಣ ವಲಯ ಐಜಿಪಿ ಹಾಗು 11 ಮಂದಿ ಎಸ್ಪಿಗಳು ಸೇರಿದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. 6 ಸಾವಿರ ಪೊಲೀಸರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ 26 ಬಾಂಬ್ ಪತ್ತೆ ದಳ ಹಾಗೂ ಶ್ವಾನದಳ ಬಳಕೆ ಮಾಡಿಕೊಳ್ಳಲಾಗ್ತಿದೆ. ಕಿಂಚಿತ್ತು ಅನುಮಾನ ಬಂದರೂ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಮೈಸೂರು ದಸರಾ ಉತ್ಸವದಲ್ಲಿ ಲಕ್ಷಾಂತರ ಮಂದಿ ವೀಕ್ಷಣೆಗೆ ಕಾತುರರಾಗಿದ್ದು, ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ನಗುಮೊಗದ ದರ್ಶನ ನೀಡಲಿದ್ದಾಳೆ.
-ಕೃಷ್ಣಮಣಿ