ಸೌಜನ್ಯ ಪ್ರಕರಣ ಬಗ್ಗೆ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಅವರು ಸೋಮವಾರ (ಆಗಸ್ಟ್ 7) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.
“ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ದಾರಿ ತಪ್ಪಿಸಲಾಗಿತ್ತು. ಇಂತಹ ರಹಸ್ಯಗಳನ್ನು ಬಿಚ್ಚಟ್ಟರೆ ತಮ್ಮನ್ನೂ ಕೊಲ್ಲಬಹುದು” ಎಂದು ವಸಂತ ಬಂಗೇರ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಖಾಕಿಯಾಗಲೀ, ಕಾವಿಯಾಗಲೀ ಅವರನ್ನು ತನಿಖೆ ಮಾಡುವ ಶಕ್ತಿ ನಮ್ಮಲ್ಲಿ ಇದೆ. ಸಮಯ ಬಂದಾಗ ಮಾತನಾಡುತ್ತೇನೆ. ಆಗ ನನ್ನನ್ನೂ ಕೊಲ್ಲಬಹುದು. ಆದರೆ ಸಾಯುವ ಮೊದಲು ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಸುಮಾರು ಮೂರ್ನಾಲ್ಕು ವರ್ಷ ನಾನು ಶಾಸಕನಾಗಿದ್ದಾಗ, ಸುಮಾರು ಒಂದು ಕಾಲು ಗಂಟೆಗೂ ಅಧಿಕ ಸಮಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚೆ ಮಾಡಿದ್ದೆ. ಕೇವಲ ಸೌಜನ್ಯ ಪ್ರಕರಣ ಮಾತ್ರವಲ್ಲ ಬೆಳ್ತಂಗಡಿಯಲ್ಲಿ ತಾಲೂಕಿನ ಶ್ರೀಕ್ಷೇತ್ರದಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ತಿಳಿಸಿದೆ. ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ ಎಂದರು” ಎಂದು ಮಾಹಿತಿ ನೀಡಿದರು.
“ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿತ್ತು. ಆದರೆ ಸಿಬಿಐ ತನಿಖೆಯ ಅರ್ಧದಲ್ಲಿ ಇದರಲ್ಲಿ ಮೋಸ ಇದೆ ಎಂಬುದು ನನಗೆ ತಿಳಿಯಿತು. ಅದನ್ನ ಈಗ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ನಾನು ಪ್ರಸ್ತಾಪಿಸುತ್ತೇನೆ” ಎಂದು ಪ್ರತಿಪಾದಿಸಿದರು.
ಸಮಯ ಬರುತ್ತದೆ. ಅಂದು ಸೌಜನ್ಯ ಪ್ರಕರಣ ದಿಕ್ಕು ತಪ್ಪಿಸಿದ್ದು ಯಾರು, ಅನ್ಯಾಯ ಮಾಡಿದ್ದು, ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಆಗ ಅವರು ನನಗೆ ಹಾನಿ ಮಾಡಬಹುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಎಸಿ ಇಲ್ಲದೆ ಬೆವೆತ ಸ್ಥಿತಿ: ಇಂಡಿಗೊ ವಿಮಾನ ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಪಂಜಾಬ್ ಕಾಂಗ್ರೆಸ್ ನಾಯಕ
“ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕಾಂಗಿಯಾಗಿ ಭೇಟಿಯಾಗಿ ಈ ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂದು ಹೇಳುತ್ತೇನೆ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅದನ್ನು ಅನುಭವಿಸಲೇಬೇಕು. ಖಾಕಿಯಾಗಲೀ, ಕಾವಿಯಾಗಲೀ ಅವರನ್ನೂ ತನಿಖೆ ಮಾಡುವ ಶಕ್ತಿ ನಮ್ಮಲ್ಲಿ ಇದೆ” ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.
ಶೀಘ್ರದಲ್ಲೇ ಸೌಜನ್ಯ ಪ್ರಕರಣ ಬಗ್ಗೆ ಆಕೆಗೆ ಆದ ಅನ್ಯಾಯದ ವಿರುದ್ಧ ದೇಶವ್ಯಾಪಿಯಾಗಿ ಪ್ರತಿಭಟನೆಯಾಗುತ್ತದೆ. ಸೌಜನ್ಯ ಕುಟುಂಬಸ್ಥರನ್ನು ಮುಖ್ಯಮಂತ್ರಿಗಳಿಗೆ ಖುದ್ದು ಭೇಟಿ ಮಾಡಿಸಿದ್ದೇನೆ. ಮುಖ್ಯಮಂತ್ರಿಗಳಿಗೂ ಸೌಜನ್ಯ ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ. ಶೀಘ್ರದಲ್ಲೇ ಸತ್ಯಕ್ಕೆ ಜಯ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.