
ಬೀದರ: ಎಲ್ಲರೂ ಗಿಡ-ಮರಗಳನ್ನು ನೆಡುವ ಮೂಲಕ ಬೀದರ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಬೇಕು ಹಾಗೂ ಪರಿಸರದ ಬಗ್ಗೆ ಕಾಳಜಿ ಇರಬೇಕು ಎಂದು ಅರಣ್ಯ. ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಹೇಳಿದರು. ಅವರು ಬುಧವಾರ ಅರಣ್ಯ. ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅರಣ್ಯ ವಿಭಾಗ ಬೀದರ ಇವರ ಸಹಯೋಗದಲ್ಲಿ ಅರಣ್ಯ ತರಬೇತಿ ಕೇಂದ್ರ ನೌಬಾದ ಬೀದರನಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಹಾಗೂ ವಿಶ್ವಪರಿಸರ ದಿನಾಚರಣೆ- 2024. ಲಕ್ಷ- ವೃಕ್ಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿ ಇರುವುದು ಒಂದೇ ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಹಾಗಾಗಿ ಪರಿಸರ ಮಲಿನವಾಗದಂತೆ ಎಲ್ಲರೂ ನೋಡಿಕೊಳ್ಳಬೇಕು. ಪರಿಸರ ಬದಲಾವಣೆಯಿಂದ ಪಕೃತಿ ವಿಕೋಪ. ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ಘಟನೆಗಳು ಸಂಭವಿಸುತ್ತವೆ ಎಂದರು. ಹಿಂದೆ ಮಳೆ ನಿಯಮಿತವಾಗಿ ಬರುತ್ತಿತ್ತು ಈಗ ಪರಿಸರ ಬದಲಾವಣೆಯಿಂದ ಏರು ಪೇರಾಗುತ್ತಿದೆ ಮತ್ತು ಪರಿಸರ ಮಾಲಿನ್ಯದಿಂದ ಅನೇಕ ರೋಗ ರುಜನಿಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆದ ದೊಡ್ಡ ಅನಾಹುತವನ್ನು ನಾವು ಕಂಡಿದ್ದೆವೆ. ಆಮ್ಲ ಜನಕದ ಕೊರತೆಯಿಂದಲೆ ಬಹಳಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಆಮ್ಲ ಜನಕ ಎಲ್ಲಿಂದ ಬರುತ್ತದೆ.

ಮರ-ಗಿಡಗಳೆ ನಮಗೆ ಆಮ್ಲಜನಕವನ್ನು ಕೊಡುತ್ತವೆ ಹಾಗಾಗಿ ಇವುಗಳನ್ನು ಎಲ್ಲರೂ ನೆಡಬೇಕು ಎಂದು ಹೇಳಿದರು.ಕಾರ್ಖಾನೆಗಳಿಂದಲೂ ಪರಿಸರ ಮಾಲಿನ್ಯವಾಗುತ್ತಿದೆ. ದಿನಾಲು ಸಾವಿರಾರು ವಾಹನಗಳು ಬಿಡುವ ಹೊಗೆಯಿಂದಲು ಪರಿಸರಕ್ಕೆ ಹಾನಿಯಾಗುತ್ತಿದೆ. ಭೂ-ಬಾಗದ ಶೇ. 33 ಪ್ರತಿಶತ ಅರಣ್ಯ ಇರಬೇಕು ಆದರೆ ನಮ್ಮ ರಾಜ್ಯದಲ್ಲಿ ಶೇ. 21 ರಿಂದ 22 ಪ್ರತಿಶತ ಅರಣ್ಯ ಇದೆ. ನಮ್ಮ ಬೀದರ ಜಿಲ್ಲೆಯಲ್ಲಿ ಇದು ಶೇ. 7 ಪ್ರತಿಶತ ಇದೆ. ಬೀದರ ಜಿಲ್ಲೆಯಲ್ಲಿ 20 ಲಕ್ಷ ಜನ ಸಂಖ್ಯೆ ಇರುವುದರಿಂದ ಪ್ರತಿಯೊಬ್ಬರು ಒಂದೊಂದು ಗಿಡ-ಮರಗಳನ್ನು ನೆಡುವ ಸಂಕಲ್ಪ ಮಾಡುವ ಮೂಲಕ ಬೀದರ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಬೇಕು ಎಂದು ಹೇಳಿದರು.ನಮ್ಮ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಭೂಮಿಯ ಮೇಲೆ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕಿದೆ. ದೇಶದಲ್ಲಿ ಅತಿ ಹೆಚ್ಚು ಆನೆಗಳಿರುವ ರಾಜ್ಯ ಕರ್ನಾಟಕವಾಗಿದೆ. 80 ರ ದಶಕದಲ್ಲಿ ಇಂದಿರಾಗಾಂಧಿ ಅವರು ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದರು.

ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಹುಮನಾಬಾದ ಶಾಸಕ ಡಾ.ಸಿದ್ದಲಿಂಗಪ್ಪ ಎನ್.ಪಾಟೀಲ್, ವಿಧಾನ ಪರಿಷತ್ತು ಶಾಸಕ ಭೀಮರಾವ ಬಿ.ಪಾಟೀಲ, ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ, ಬೀದರ ನಗರಾಭಿವೃದ್ಧಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೆಶ್ ಕುಮಾರ ದಿಕ್ಷಿತ್, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ ಪಂವಾರ, ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದೀಲಿಪ್ ಬದೋಲೆ, ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ, ಬೀದರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಬೀದರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎ. ಪರಿಸರ ಪ್ರೇಮಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ವಿವಿಧ ಶಾಲಾ-ಕಾಲೇಜಿನ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.










