ತಿರುವನಂತಪುರಂ: ಪ್ರತಿಯೊಬ್ಬ ವ್ಯಕ್ತಿಯು ಉನ್ನತ ಸ್ಥಾನಕ್ಕೇರಲು ತಮ್ಮ ಪ್ರಯಾಣದ ಸಮಯದಲ್ಲಿ ಒಂದಲ್ಲ ಒಂದು ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇಂತಹ ಕಷ್ಟಗಳನ್ನು ನಾನೂ ಕೂಡ ಜೀವನದಲ್ಲಿ ಎದುರಿಸಿದ್ದೇನೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ತಿರುವನಂತಪುರಂದಲ್ಲಿ ಶನಿವಾರ ಮಾತನಾಡಿದ ಅವರು, ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ‘ನಿಲಾವು ಕುಡಿಚ್ಚ ಸಿಂಹಂಗಳ್’ ಆತ್ಮಚರಿತ್ರೆಯಲ್ಲಿ ಬಾಹ್ಯಾಕಾಶ ಸಂಸ್ಥೆಯಲ್ಲಿ ತಮ್ಮ ದಶಕಗಳ ಸುದೀರ್ಘ ಪ್ರಯಾಣದಲ್ಲಿ ತಾವು ಎದುರಿಸಿದ ಕೆಲ ಸವಾಲುಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅದು ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಅಲ್ಲ ಎಂದು ಹೇಳಿದರು.

ಆತ್ಮಚರಿತ್ರೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಅವರ ಬಗ್ಗೆ ಕೆಲವು ವಿಮರ್ಶಾತ್ಮಕ ಟೀಕೆಗಳು ಇವೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಸೋಮನಾಥ್, ಇಂತಹ ಪ್ರಮುಖ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗಬಹುದು. ಅವುಗಳಲ್ಲಿ ಸಂಸ್ಥೆಯಲ್ಲಿ ಸ್ಥಾನಗಳನ್ನು ಪಡೆಯುವಲ್ಲಿನ ಸವಾಲುಗಳು ಕೂಡ ಒಂದು. ಇವುಗಳು ಎಲ್ಲರೂ ಎದುರಿಸಬೇಕಾದ ಸವಾಲುಗಳು ಕೂಡಾ ಆಗಿವೆ. ಹೆಚ್ಚಿನ ವ್ಯಕ್ತಿಗಳು ಮಹತ್ವದ ಹುದ್ದೆಗೆ ಅರ್ಹರಾಗಿರಬಹುದು. ನಾನು ಆ ನಿರ್ದಿಷ್ಟ ಅಂಶವನ್ನು ಹೊರತರಲು ಪ್ರಯತ್ನಿಸಿದ್ದೇನೆ. ಈ ವಿಷಯದಲ್ಲಿ ನಾನು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ವಿವರಿಸಿದರು.
ಇದೇ ವೇಳೆ, ಚಂದ್ರಯಾನ-2 ಮಿಷನ್ ವೈಫಲ್ಯದ ಘೋಷಣೆಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆಯನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂಬುವುದನ್ನು ಅವರು ಒಪ್ಪಿಕೊಂಡರು. ಲ್ಯಾಂಡಿಂಗ್ ಸಮಯದಲ್ಲಿ ಸಂವಹನ ವಿಫಲವಾಗಿದೆ ಮತ್ತು ಅದು ಭೂಮಿಗೆ ಅಪ್ಪಳಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿಲ್ಲ ಎಂದ ಅವರು, ವಾಸ್ತವವಾಗಿ ಏನಾಯಿತು ಎಂಬುದನ್ನು ಹೇಳುವುದು ಉತ್ತಮ ಅಭ್ಯಾಸ ಎಂದು ನಾನು ನಂಬುತ್ತೇನೆ. ಇದು ಸಂಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಾನು ಆ ನಿರ್ದಿಷ್ಟ ಘಟನೆಯನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ ಎಂದು ಸೋಮನಾಥ್ ಸ್ಪಷ್ಟಪಡಿಸಿದರು.