ಕೋಲಾರದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ನಿವಾಸದ ಮೇಲೆ ಇಡಿ ನಡೆದಿತ್ತು. ಮಂಗಳವಾರ ರಾತ್ರಿ ದಾಳಿ ಮುಕ್ತಾಯ ಆಗಿದೆ. ನಿನ್ನೆ ರಾತ್ರಿ ತನಕ ದಾಖಲೆಗಳ ಪರಿಶೀಲನೆ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮನೆಯಿಂದ ವಾಪಸ್ ಹೋಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು. ಸೋಮವಾರ ಬೆಳಗ್ಗೆ 5.30ಕ್ಕೆ ದಾಳಿ ಶುರು ಮಾಡಿದ್ದ ಇಡಿ ಅಧಿಕಾರಿಗಳ ತಂಡ, ಮಂಗಳವಾರ ರಾತ್ರಿ 9.45 ಕ್ಕೆ ಮುಕ್ತಾಯ ಮಾಡಿದೆ. ಎರಡು ಕಾರಿನಲ್ಲಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ. ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ನಿವಾಸದಲ್ಲಿ ಬರೋಬ್ಬರಿ 16.5 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮುಗಿಸಿ ಹೊರಟ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ನಂಜೇಗೌಡ ಹಾಗು ಪತ್ನಿ ರತ್ನಮ್ಮ ಕಣ್ಣೀರು ಹಾಕಿದ್ದಾರೆ. ಸೋಮವಾರ ಇಡಿ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ರು. ಅವರು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಮುಂದೆ ಸಹ ಏನೂ ಆಗಲ್ಲ ಅನ್ನೋ ನಂಬಿಕೆ ಇದೆ. 3 ವಿಚಾರವಾಗಿ ನನ್ನ ಬಳಿ ಮಾಹಿತಿ ಕೇಳಿದ್ರು. ಒಂದು ಕೋಚಿಮುಲ್ ನೇಮಕಾತಿ ವಿಚಾರ. ಎರಡನೆಯದು ದರಕಾಸ್ತು ಸಮಿತಿ ಭೂ ಮಂಜೂರಾತಿ ವಿಚಾರ. ಮೂರನೆಯ ವಿಚಾರ ನನ್ನ ಬಿಸಿನೆಸ್ ಬಗ್ಗೆ ಮಾಹಿತಿ ಕೇಳಿದ್ರು. ನನ್ನನ್ನು ಮುಗಿಸಲು ಸಾಕಷ್ಟು ಜನರ ಸಂಚು ರೂಪಿಸಿದ್ದಾರೆ. ಕೆಲವು ದಾಖಲೆ ಹಾಗು ತಮ್ಮನ ಮಗಳ ಮದುವೆಗೆ ಬಟ್ಟೆ ತರಲು 16.50 ಲಕ್ಷ ಹಣ ಹೊಂದಿಸಿದ್ದೆ. ಆ ಹಣ ಹಾಗೂ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಹಣ ವಾಪಾಸ್ ನೀಡುವಂತೆ ಕೇಳಿಕೊಂಡೆವು ಆದ್ರು ಹಣ ನೀಡಲಿಲ್ಲ. ಮತ್ತೆ ವಿಚಾರಣೆಗೆ ಕರೆದಿದ್ದಾರೆ ಹೋಗುತ್ತೇನೆ ಎಂದಿದ್ದಾರೆ.
ಮಾಧ್ಯಮಗಳ ಎದುರು ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ. ಇದೇ ವೇಳೆ ಶಾಸಕರ ಪಕ್ಕದಲ್ಲಿದ್ದ ಪತ್ನಿ ರತ್ನಮ್ಮ ಕೂಡ ಕಣ್ಣೀರು ಹಾಕಿದ್ದಾರೆ. ನನ್ನಂತಹ ಸಾಮಾನ್ಯನ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದರಲ್ಲಿ ನನ್ನನ್ನು ಮುಗಿಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. ಇನ್ನು ನನ್ನ ತಾಲೂಕಿನ ಜನರಿಗೆ ಅವಮಾನ ಆಗುವಂತಹ ಯಾವುದೇ ಕೆಲಸ ಮಾಡಿಲ್ಲ. ಜನರು ನನ್ನ ಜೊತೆಗೆ ಇರ್ತಾರೆ ಅನ್ನೋ ನಂಬಿಕೆ ಇದೆ. ನೋವಾಗುತ್ತದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.