ಬೆಂಗಳೂರು: ಕುಡಿದ ಅಮಲಿನಲ್ಲಿ ಆಂಬುಲೆನ್ಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ತುರ್ತು ಚಿಕಿತ್ಸೆಗೆಂದು ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಆಂಬುಲೆನ್ಸ್ನ್ನು (Ambulance) ಕಿಡಿಗೇಡಿಗಳು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ನೆಲಮಂಗಲ (Nelamangala) ಟೋಲ್ ಹತ್ತಿರ ನಡೆದಿದೆ.
ಯಲಚೇನಹಳ್ಳಿ ಮೂಲದ ಯುವರಾಜ್ ಸಿಂಗ್, ಮಂಜುನಾಥ್ ಮತ್ತು ಲತೀಶ್ ಎಂಬುವವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕುಡಿದ ನಶೆಯಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಆಂಬುಲೆನ್ಸ್ ನ್ನು ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ನಂತರ ನಾಲ್ವರು ಸೇರಿ ಚಾಲಕನನ್ನು ಹೊರಗೆಳೆದು, ಅತಿ ವೇಗವಾಗಿ ಚಾಲನೆ ಮಾಡುತ್ತಿರುವುದಾಗಿ ಗಲಾಟೆ ಮಾಡಿ ಥಳಿಸಿದ್ದಾರೆ ಎಂದು ಚಾಲಕ ಜಾನ್ ಆರೋಪಿಸಿದ್ದಾರೆ.
ಈ ಆಂಬುಲೆನ್ಸ್ ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ತೆರಳುತ್ತಿತ್ತು ಎನ್ನಲಾಗಿದೆ. ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಮೂಲಕ ಕರೆ ತರಲಾಗುತ್ತಿತ್ತು. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಗುವಿನ ಪೋಷಕರು ಕೈ ಮುಗಿದರೂ ಕಾರಿನಲ್ಲಿದ್ದ ಯುವಕರು, ಬಿಟ್ಟಿಲ್ಲ ಎಂದು ಆರೋಪಿಸಲಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಲಾಟೆ ತಿಳಿಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್ ಚಾಲಕರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ.