ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ಮಾಡಿದ್ದಾರೆ. ರಾಜ್ಯದ 223 ತಾಲೂಕುಗಳಲ್ಲಿ ಬರವಿದೆ. 120 ವರ್ಷಗಳ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಬೆಂಗಳೂರಿನಲ್ಲಿ ನೀರಿನ ಬವಣೆ ಹೆಚ್ಚಾಗಿತ್ತು. ಆದರೂ ಸಮಸ್ಯೆ ಆಗದಂತೆ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಒಟ್ಟು 56.9 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿತ್ತು. NDRF ನಿಯಮದ ಪ್ರಕಾರ ನಾವು ಬರ ಎಂದು ಘೋಷಣೆ ಮಾಡಿದ್ದೆವು. ಕಳೆದ ಆಗಸ್ಟ್ನಲ್ಲೇ ಟೀಂ ಬಂದು ಪರಿಶೀಲಿಸಿತ್ತು. ನಾವು ಕಂಪ್ಲೀಟ್ ದಾಖಲೆಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೂ ಪರಿಹಾರ ವಿತರಣೆ ವಿಳಂಭ ಆಯ್ತು ಎಂದಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 20ರಂದು ಸಚಿವರು ಭೇಟಿ ಮಾಡಿದ್ದರು. ನವೆಂಬರ್ನಲ್ಲಿ ಸಿಎಂ ಸಿದ್ದರಾಮಯ್ಯ, ಹಾಗು ಹೃಹ ಸಚಿವರು ಭೇಟಿ ಮಾಡಿ ಚರ್ಚಿಸಿದ್ದರು. ಡಿಸೆಂಬರ್ನಲ್ಲಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವರು ಭೇಟಿ ಮಾಡಿದ್ದರು, ಆಗ ಹೈ-ಲೆವೆಲ್ ಕಮಿಟಿ ಸಭೆ ಮಾಡ್ತೇವೆ. ಆ ಬಳಿಕ ಪರಿಹಾರ ಬಿಡುಗಡೆ ಎಂದಿದ್ದರು. ಜನವರಿ 19ರಂದು ಸಿಎಂ ಸಿದ್ದರಾಮಯ್ಯ – ಪ್ರಧಾನಿ ಮೋದಿ ಭೇಟಿ ಮಾಡಿ ಬರ ಪರಿಹಾರಕ್ಕೆ ಮನವಿ ಮಾಡಿದ್ದರು. ಆದರೂ ಬರಪರಿಹಾರ ಕೊಟ್ಟಿರಲಿಲ್ಲ.

ಮನರೆಗಾ 50 ದಿನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದೆವು. ಅದನ್ನು ಕೇಂದ್ರ ಸರ್ಕಾರ ಮಾಡಲಿಲ್ಲ. ನಮ್ಮ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ. ಮೊದಲೇ ಹಣ ಸಿಕ್ಕಿದ್ರೆ ಎಷ್ಟು ಕಾಮಗಾರಿ ಮಾಡ್ತಿದ್ವಿ, ಎಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿದ್ದೆವು. ನಿಯಮದ ಪ್ರಕಾರ 18 ಸಾವಿರ ಕೋಟಿ ಬರಬೇಕು. ಅದರೆ ಕೇವಲ ಮೂರು ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಅದೂ ಕೂಡ ಕರ್ನಾಟಕ ರಾಜ್ಯ ಸುಪ್ರೀಂಕೋರ್ಟ್ಗೆ ಹೋದ ಬಳಿಕ ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ತಿರುಗೇಟು ಕೊಟ್ಟ ಸಿ.ಟಿ ರವಿ..
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಬಿಜೆಪಿ ನಾಯಕರ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಅನ್ನೋ ಆಸಕ್ತಿ ಇಲ್ಲ. ರೈತರ ವಿಷಯದಲ್ಲಿ ರಾಜಕಾರಣ ಮಾಡಬೇಕು ಅನ್ನೋದಷ್ಟೇ ಆಸಕ್ತಿ ಹೆಚ್ಚಾಗಿತ್ತು. ಈಗ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಿ ಎಂದು ಕಿಚಾಯಿಸಿದ್ದಾರೆ. 600ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಈ ಹಿಂದೆ ನಿಮ್ಮ ಒಬ್ಬ ಸಚಿವrಒಬ್ಬರು ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ರು. ಇದು ರೈತರ ಬಗ್ಗೆ ಕಾಂಗ್ರೆಸ್ನವರಿಗೆ ಇರುವ ಕಾಳಜಿಯನ್ನ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ರೈತ ಸಂಕಷ್ಟಕ್ಕೆ ಒಳಗಾಗಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರ್ಕಾರ ಕೊಡುವ ಹಣಕ್ಕಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ಸ್ಥಳದಲ್ಲೇ ಉದ್ಯೋಗ ಸೃಷ್ಟಿಸಬೇಕೆಂದು ಆಗ್ರಹ ಮಾಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರುಗಳೆಲ್ಲರೂ ಕೇವಲ ರಾಜಕಾರಣ ಮಾಡುವುದರಲ್ಲಿ ನಿರತರಾಗಿದ್ದಾರೆ. ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇದನ್ನ ಇಲ್ಲಿಗೆ ನಿಲ್ಲಿಸಿ ಇನ್ನು ಮುಂದೆ ಆದರೂ ಪ್ರಾಮಾಣಿಕವಾಗಿ ಪ್ರಯತ್ನಿಸಿ. ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ಕೊಡಿ, ತಕ್ಷಣ ಕೇಂದ್ರದ 6 ಸಾವಿರ ಕೋಟಿ ಜೊತೆಗೆ ನೀವು 6 ಸಾವಿರ ಕೋಟಿ ಸೇರಿಸಿ 12 ಸಾವಿರ ಕೋಟಿ ಹಣವನ್ನು ರೈತರಿಗೆ ಹಂಚಿ ಎಂದು ಆಗ್ರಹ ಮಾಡಿದ್ದಾರೆ.
ಕೇಂದ್ರ, ರಾಜ್ಯ ರಾಜಕಾರಣ, ಯಾವುದು ಸತ್ಯ..?
ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದು ಸತ್ಯ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ತಡ ಆಗಿದ್ದೂ ಅಷ್ಟೇ ಸತ್ಯ. ಆ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೊರೆ ಇಟ್ಟಿತ್ತು. ಅರ್ಜಿ ವಿಚಾರಣೆ ಮಾಡಿದ ಕೋರ್ಟ್, ರಾಜ್ಯ ಹಾಗು ಕೇಂದ್ರದ ನಡುವೆ ಈ ರೀತಿಯ ಸಂಘರ್ಷ ಸರಿಯಲ್ಲ ಎಂದಿತ್ತು. ತಪ್ಪಿನ ಅರಿವಾದ ಬಳಿಕ ಕೇಂದ್ರ ಸರ್ಕಾರ ಬರ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತೆ. ಚುನಾವಣಾ ಆಯೋಗ ಅನುಮತಿ ನೀಡಿದೆ. ಒಂದು ವಾರದಲ್ಲಿ ರಿಲೀಸ್ ಮಾಡ್ತೇವೆ ಎಂದಿತ್ತು. ಇದೀಗ ಬರ ಪರಿಹಾರ ರಿಲೀಸ್ ಆಗಿದೆ. ಆದರೆ ಕರ್ನಾಟಕ ಸರ್ಕಾರ ಕೊಟ್ಟ ಮಾಹಿತಿ ಪ್ರಕಾರ 18,172 ಕೋಟಿ ಹಣ ಬಿಡುಗಡೆ ಆಗಬೇಕಿತ್ತು. ಆದರೆ ಅಷ್ಟೂ ಮೊತ್ತದ ಹಣದ ಬಿಡುಗಡೆ ಆಗಿಲ್ಲ. ಎರಡೂ ಪಕ್ಷದವರು ರಾಜಕಾರಣ ಎಷ್ಟು ಮಾಡಬೇಕೋ ಅಷ್ಟನ್ನು ಈ ವಿಚಾರದಲ್ಲಿ ಮಾಡಿದ್ದಾರೆ. ಆದರೆ ನೊಂದಿದ್ದು ಮಾತ್ರ ಅನ್ನದಾತರು ಅನ್ನೋದು ಸತ್ಯ.
