
ಕೃಷಿ-ಕೈಗಾರಿಕೆ ಅಭಿವೃದ್ಧಿಯಾದರೆ ನಾಡಿನ ಅಭಿವೃದ್ಧಿ: ಸಿ.ಎಂ
ಸುತ್ತೂರು ಕ್ಷೇತ್ರ ಕೇವಲ ಧಾರ್ಮಿಕ ಕ್ಷೇತ್ರ ಅಲ್ಲ. ಅಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರವೂ ಹೌದು
ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ : ಸಿಎಂ ಸಿದ್ದರಾಮಯ್ಯ
ಮೈಸೂರು ಜ 31:
ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿತುಕೊಳ್ಳಬೇಕು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಮೈಸೂರು ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗದ್ದುಗೆ ದರ್ಶನ ಪಡೆದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಶರಣಶ್ರೇಷ್ಠರಾದ ಬಸವಾದಿ ಶರಣರ ಆಶಯವೂ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಡ್ಯಗಳನ್ನು ತೊರೆಯಬೇಕು ಎಂದು ಕರೆ ನೀಡಿದರು.
ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯ ಆರ್ಥಿಕವಾಗಿ, ಸಮಾಜಿಕವಾಗಿ ಇಲ್ಲ . ಇದು ಸಿಗದ ಹೊರತು ಸ್ವಾತಂತ್ರ್ಯದ ಆಶಯ ಪೂರ್ತಿ ಆಗುವುದಿಲ್ಲ ಎನ್ನುವ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲೇ ಹೇಳಿದ್ದರು. ಅವತ್ತಿನ ಅವರು ಮಾತು ಇವತ್ತಿಗೂ ಸತ್ಯ ಎಂದರು.
ಬಸವಣ್ಣನವರು 850 ವರ್ಷಗಳ ಹಿಂದೆ “ಇವ ನಾರವ ಎಂದು ಪ್ರಶ್ನಿಸದೆ, ಇವ ನಮ್ಮವ” ಎಂದು ಹೇಳಿ ಅಂದಿದ್ದರು. ಆದರೂ ಇವತ್ತಿಗೂ ನಾವು ಜಾತಿ ಕೇಳುವುದನ್ನು ನಿಲ್ಲಿಸಿಲ್ಲ, ಜಾತಿ-ಧರ್ಮದ ಅನಿಷ್ಠ ತಾರತಮ್ಯವನ್ನು ಇವತ್ತಿಗೂ ಕಾಣುತ್ತೇನೆ ಎಂದರು.
ನಾನು ವೈಯುಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ. ಅದಕ್ಕೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯಗೊಳಿಸಿದೆ ಎಂದರು.
ವಿದ್ಯಾವಂತರೂ ಕರ್ಮಸಿದ್ಧಾಂತವನ್ನು ಆಚರಿಸುವ ದುರಂತವನ್ನು ನಾವು ಕಾಣುತ್ತೇವೆ. ಯಾವ ದೇವರೂ ಬಡವನಾಗಿರು, ಹಸಿದುಕೊಂಡಿರು, ಹರಿದ ಬಟ್ಟೆಯಲ್ಲಿರು ಎಂದು ಹಣೆಬರಹ ಬರೆಯುವುದಿಲ್ಲ. ಇಂಥಾ ಮೌಡ್ಯವನ್ನು ವಿದ್ಯಾವಂತರೂ ಆಚರಿಸುತ್ತಿದ್ದಾರೆ. ಹೀಗಾದಾಗ ಅವರ ವಿದ್ಯೆಗೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು.

ಜಾತಿ ಆಧಾರದಲ್ಲಿ ಮನುಷ್ಯನ ಯೋಗ್ಯತೆ ಅಳೆಯುವ ಪದ್ಧತಿಯನ್ನು ನಮ್ಮ ಸಂವಿಧಾನ ವಿರೋಧಿಸಿತು. ಪ್ರತಿಭೆ ಮತ್ತು ಸಾಮರ್ಥ್ಯ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಗಬೇಕಷ್ಟೆ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತವೆ. ಇದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.
ಸುತ್ತೂರು ಮಠ ಶಿಕ್ಷಣ ಮತ್ತು ಅನ್ನ ದಾಸೋಹ ನಡೆಸುತ್ತಾ ಇಡೀ ಸಮಾಜದ ಆಸ್ತಿಯಾಗಿದೆ. ಜಾತ್ಯತೀತ ಮೌಲ್ಯಗಳು ಸುತ್ತೂರು ಮಠದ ಮೌಲ್ಯಗಳೂ ಆಗಿವೆ ಎಂದರು.
ಕಾಯಕ ಮತ್ತು ದಾಸೋಹ ಎರಡೂ ಬಸವಾದಿ ಶರಣರ ಆಶಯವಾಗಿತ್ತು. ಕಾಯಕ ಅಂದ್ರೆ ಉತ್ಪತ್ತಿ, ದಾಸೋಹ ಅಂದರೆ ವಿತರಣೆ ಎಂದು ವಿಶ್ಲೇಷಿಸಿದರು.
ನಾವು ಉಚಿತವಾಗಿ ಅಕ್ಕಿ ಕೊಟ್ಟಿದ್ದರಿಂದ ಬಡವರು, ಶ್ರಮಿಕರು ಸೋಮಾರಿಗಳಾಗುತ್ತಿದ್ದಾರೆ ಎನ್ನುವುದು ದುಡಿಯದ ಗ್ರ ಮೈಗಳ್ಳರು, ದುಡಿಯದೆ ಬೊಜ್ಜು ಬೆಳೆಸಿಕೊಂಡವರು ಮಾತ್ರ ಹೇಳಲು ಸಾಧ್ಯ ಎಂದರು.

ಬರಿ ಬಾಯಿ ಮಾತಿನಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆಶಯಗಳು ಜಾರಿ ಆಗುವುದಿಲ್ಲ. ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಈ ಉದ್ದೇಶದಿಂದಲೇ ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆವು ಎಂದು ಕರೆ ನೀಡಿದರು.
ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದಾಗ ರಾಜ್ಯದ ಬೊಕ್ಕಸ ದಿವಾಳಿ ಆಗತ್ತೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯವರೇ ಈಗ ನಮ್ಮ ಗ್ಯಾರಂಟಿಗಳನ್ನು ಕಾಪಿ ಹೊಡೆದು ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಘೋಷಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆರ್ಥಿಕ, ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ಹೋಗಲು ಸಾಧ್ಯ. ನಮ್ಮ ಗ್ಯಾರಂಟಿಗಳು ಪ್ರತೀ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಚಲನೆ ನೀಡಿವೆ. ಜನರ ಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿದ್ದರಿಂದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಸದೃಢವಾಗಿದೆ ಎಂದರು.

ಬಡವರ ಆರ್ಥಿಕ ಅಸಹಾಯಕತೆಯನ್ನು ಶೋಷಿಸುವ ಮೈಕ್ರೋ ಫೈನಾನ್ಸ್ ಗಳ ಅತಿರೇಕದ ವಸೂಲಿ ನಿಯಂತ್ರಿಸಲು ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರುತ್ತಿದ್ದೇವೆ ಎಂದರು.
ಬಾಕ್ಸ್
ಆತ್ಮಹತ್ಯೆ ಬೇಡ: ಸರ್ಕಾರ ನಿಮ್ಮ ಜೊತೆಗಿದೆ: ಕಂಪ್ಲೇಂಟ್ ಕೊಡಿ
ಮೈಕ್ರೋ ಫೈನಾನ್ಸ್ ಗಳ ವಸೂಲಿ ಕ್ರಮಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಗಿದೆ. ತೊಂದರೆ ಕೊಟ್ಟರೆ ಕಂಪ್ಲೇಂಟ್ ಕೊಡಿ. ಕಾನೂನು ಕ್ರಮ ತಗೊತೀವಿ ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾನೂನುಬಾಹಿರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಕಾನೂನು ಕ್ರಮ- ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಲ ಪಡೆದ ಜನರು ಆತಂಕ್ಕೊಳಗಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ –ಸಿಎಂ ಮನವಿ
ಬೆಂಗಳೂರು, ಜನವರಿ 31: ಆರ್ ಬಿಐ ನಿಯಮಾವಳಿ ಉಲ್ಲಂಘಿಸುವ ,ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದರು.
ಅವರು ಇಂದು ಮೈಸೂರು ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸಧ್ಯದಲ್ಲಿಯೇ ಸುಗ್ರೀವಾಜ್ಞೆ
ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ಹಾಗೂ ಬಿಜೆಪಿಯವರು ರಾಜ್ಯದಲ್ಲಿ ಗೂಂಡಾ ರಾಜ್ಯವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಧ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ
ಕೇಂದ್ರದ ಬಜೆಟ್ ಅಧಿವೇಶನದಿಂದ ರಾಜ್ಯದ ನಿರೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರಸರ್ಕಾರದವರು ರಾಜ್ಯಕ್ಕೆ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ ಅನುದಾನವನ್ನು ನೀಡಿಲ್ಲ. 2023-24 ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಇಳಿಸಿದ್ದಾರೆ.ಡಿದ್ದಾರೆ.ಈ 5300 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ನಬಾರ್ಡ್ ನ ಅನುದಾನದಲ್ಲಿ ಶೇ.58 ರಷ್ಟು ಕಡಿತ ಮಾಡಿದ್ದು, ಕಳೆದ ವರ್ಷ ನಬಾರ್ಡ್ ನ ಅಡಿ ನೀಡಲಾಗಿದ್ದ 5800 ಕೋಟಿ ರೂ. ,ಈ ವರ್ಷ 2345 ಕೋಟಿ ರೂ. ಇಳಿಸಿದ್ದಾರೆ. ಕರ್ನಾಟಕ 4ಲಕ್ಷ ಕೋಟಿಯಷ್ಟು ಕೇಂದ್ರಕ್ಕೆ ತೆರಿಗೆ ನೀಡಿದರೆ, ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ಮರಳಿ ಬರುತ್ತಿದ್ದುದ್ದು, ತೆರಿಗೆ ಹಂಚಿಕೆಯ ಪಾಲಿನಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಬಾಲಿಶ ಹೇಳಿಕೆ
ಕುಂಭಮೇಳದ ಬಗ್ಗೆ ಟೀಕೆ ಮಾಡುವವರು ಅಯೋಗ್ಯರು ಎಂದು ಪ್ರತಿಪಕ್ಷ ನಾಯಕರಾದ ವಿಜಯೇಂದ್ರರವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪು ನಡೆದಾಗ ಟೀಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರುತ್ತದೆ. ವಿಜಯೇಂದ್ರರವರ ಹೇಳಿಕೆ ಬಾಲಿಶವಾಗಿದೆ ಎಂದರು.
ಮುಡಾಪ್ರಕರಣ ರಾಜಕೀಯ ಪ್ರೇರಿತ
ಮುಡಾಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವರದಿ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾರಿನಿರ್ದೇಶನಾಲಯದ ವರದಿ ರಾಜಕೀಯಪ್ರೇರಿತವಾಗಿದೆ. ಮನಿಲ್ಯಾಂಡ್ರಿಂಗ್ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಡಿಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ ಎಂದರು.

ವರ್ಚಸ್ಸು ಕುಂದಿಸುವ ಪ್ರಯತ್ನ
ಮುಡಾಪ್ರಕರಣದ ಮೂಲಕ ಸಿದ್ದರಾಮಯ್ಯನವರ ತೇಜೋವಧೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಉತ್ತರಿಸಿ, ಕರ್ನಾಟಕ ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿಯವರ ನೋಟೀಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ವೆಂದರು.
ವರಿಷ್ಠರ ತೀರ್ಮಾನವೇ ಅಂತಿಮ
ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಪಕ್ಷದ ನಾಯಕರು ಸಭೆ ಮಾಡುವುದರಲ್ಲಿ ಯಾವುದೇ ರಾಜಕೀಯವಿಲ್ಲ. ಸತ್ಯಕ್ಕೆ ವಿರುದ್ಧವಾದ ಊಹೆಗಳು ತಪ್ಪು ಎಂದರು.