
ಇಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿಯಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟ ಆಗಲಿದೆ. ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.
ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಟಿ ಕರೆದಿದ್ದು, ಫಲಿತಾಂಶ ಪ್ರಕಟಿಸಲಿದ್ದಾರೆ. ಆ ನಂತರ ಮಧ್ಯಾಹ್ನ 12:30ಕ್ಕೆ ಅಂತರಜಾಲದಲ್ಲಿ ಫಲಿತಾಂಶ ಪ್ರಕಟಿಸಲಿದ್ದು, https://karresults.nic.in ವೆಬ್ ಸೈಟ್ನಲ್ಲಿ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ಇಲಾಖೆ ನಿರ್ಧಾರ ಮಾಡಿದೆ.

ಪರೀಕ್ಷಾ ಫಲಿತಾಂಶದ ಭೀತಿಯಲ್ಲಿ SSLC ಪರೀಕ್ಷೆ ಬರೆದಿರುವ ಮಕ್ಕಳು ಇದ್ದಾರೆ. ತುಂಭಾ ಚೆನ್ನಾಗಿ ಬರದಿರುವ ಮಕ್ಕಳಲ್ಲಿ ರ್ಯಾಂಕ್ ಭೀತಿ ಇದ್ದರೆ, ಚೆನ್ನಾಗಿ ಬರೆಯದಿರುವ ಮಕ್ಕಳಲ್ಲಿ ಅನುತ್ತೀರ್ಣ ಆಗುವ ಭಯ ಸೃಷ್ಟಿಯಾಗಿರುತ್ತದೆ. ಆದರೆ SSLC ಮಕ್ಕಳು ಯಾವುದಕ್ಕೂ ಭಯ ಬೀಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು.
SSLC ಪರೀಕ್ಷೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದ್ದು, ಕಡಿಮೆ ಅಂಕಗಳು ಬಂದಿದ್ದರೆ ಮರು ಮೌಲ್ಯಮಾಪನ ಮಾಡುವ ವ್ಯವಸ್ಥೆ ಇದೆ. ಒಂದು ವೇಳೆ ಮರು ಮೌಲ್ಯಮಾಪನದಲ್ಲೂ ಅಂಕಗಳು ಹೆಚ್ಚಾಗದೆ ಅಸಮಾಧಾನ ಉಂಟಾದರೆ ಮುಂದಿನ ತಿಂಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವಿದ್ದು, ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು.

ಅದೇ ರೀತಿ ಒಂದೆರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣ ಆದರೆ ಮಕ್ಕಳು ಎದೆಗುಂದದೆ, ಮುಂದಿನ ತಿಂಗಳಲ್ಲೇ ನಡೆಯುವ ಮರು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸಿ ಮತ್ತೊಮ್ಮೆ ಪರೀಕ್ಷೆ ಬರೆದು ಯಶಸ್ಸು ಗಳಿಸುವುದಕ್ಕೆ ಅವಕಾಶವಿದೆ. ಒಂದು ವೇಳೆ ಎರಡನೇ ಬಾರಿಯೂ ನಪಾಸು ಆದರೆ ಚಿಂತೆ ಯಾಕೆ ಮಾಡಬೇಕು..? ಇನ್ನೊಮ್ಮೆ ಪರೀಕ್ಷೆಗೆ ಸಜ್ಜಾಗುವುದು ಇದ್ದೇ ಇದೆ.
ಈ ಬಾರಿ ಮುಂದಿನ ತರಗತಿಗೆ ಹೋಗುವುದಕ್ಕೆ ಸಾಧ್ಯ ಆಗದಿದ್ದರೂ SSLC ಮಕ್ಕಳು ಚಿಂತೆಗೀಡು ಆಗಬಾರದು. ಎಂದಿಗೂ ಸೋಲೇ ಗೆಲುವಿನ ಸೋಪಾನ. ಒಮ್ಮೆ ಸೋಲುಂಡ ವ್ಯಕ್ತಿ ಜೀವನದಲ್ಲಿ ಎಂದೆಂದಿಗೂ ಛಲದಿಂದ ಬದುಕುವ ಆತ್ಮವಿಶ್ವಾಸ ಗಳಿಸುತ್ತಾನೆ. ಅಷ್ಟೇ ಅಲ್ಲದೆ ಬದುಕಿನಲ್ಲಿ ಗೆಲುವಿನ ಸಿಹಿ ಉಣ್ಣುತ್ತಾನೆ. ಹೀಗಾಗಿ SSLC ಪರೀಕ್ಷೆಯ ಭಯವನ್ನು ದೂರ ಮಾಡಿಕೊಳ್ಳಿ. ಫಲಿತಾಂಶ ನೋಡುವ ಕುತೂಹಲ ಬಿಟ್ಟುಬಿಡಿ. ಮನೆಯಲ್ಲಿ ಯಾರಾದರೂ ನೋಡುತ್ತಾರೆ. ಏನಂತೀರಿ..?







