
ಮಂಗಳೂರಲ್ಲಿ ಹಿಂದೂ ಕಾರ್ಯಕರ್ತನ ಭೀಕರ ಹತ್ಯೆ ನಡೆದಿದೆ. ದುಷ್ಕರ್ಮಿಗಳು ರಕ್ತದೋಕುಳಿ ನಡೆಸಿದ್ದು, ಸಿನಿಮಾ ಸ್ಟೈಲ್ನಲ್ಲಿ ಕಾರಿಗೆ ಡಿಕ್ಕಿ ಹೊಡೆದು, ಆ ಬಳಿಕ ಕಾರನ್ನು ಅಡ್ಡಗಟ್ಟಿ ಸುಹಾಸ್ ಶೆಟ್ಟಿ ಕೊಲೆ ನಡೆಸಿದ್ದಾರೆ. ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಚ್ಚಿ ರಕ್ತಹರಿಸಿದ್ದಾರೆ ಹಂತಕರು.
ಮಂಗಳೂರಿನ ಬಜಪೆ ಕಿನ್ನಿಪದವು ಬಳಿ ಅಟ್ಯಾಕ್ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹಂತಕರ ಭೀಕರ ದಾಳಿಯ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಹಿಂದೆ ಮುಸ್ಲಿಂ ಸಮುದಾಯದ ಫಾಜಿಲ್ ಎಂಬಾತನ ಕೊಲೆ ಕೇಸ್ನ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಎನ್ನಲಾಗಿದ್ದು, ಪತೀಕಾರಕ್ಕಾಗಿ ಕೊಲೆ ನಡೆದಿರುವ ಬಗ್ಗೆ ಚರ್ಚೆಗಳು ಆಗುತ್ತಿವೆ.

ಸುಹಾಸ್ ಶೆಟ್ಟಿ ಹತ್ಯೆ ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ದೌಡಾಯಿಸಿದ್ದು, A.J ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರು ಆಸ್ಪತ್ರೆ ಬಳಿಯೂ ಜಮಾಯಿಸಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮಂಗಳೂರು ಸುತ್ತಮುತ್ತಲೂ ನಾಕಾಬಂದಿ ಹಾಕಿದ್ದಾರೆ ಕಮಿಷನರ್ ಅನುಪಮ್ ಅಗರ್ವಾಲ್.
ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ ಸುಹಾಸ್ ಶೆಟ್ಟಿ, ಫಾಜಿಲ್ ಕೊಲೆ ಬಳಿಕ ಯಾವುದೇ ಜವಾಬ್ದಾರಿ ಇರಲಿಲ್ಲ. ಹಲವು ಕೊಲೆ, ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಮ ಫಾಜಿಲ್ ಕೊಲೆ ಕೇಸ್ನಲ್ಲಿ ಒಂದು ವರ್ಷದ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಸ್ನೇಹಿತರ ಜೊತೆಗೆ ತೆರಳುತ್ತಿದ್ದಾಗ ಹಿಂಬಾಲಿಸಿ ಬಂದು ಕೊಲೆ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್ ಹತ್ಯೆ ನಡೆದಿತ್ತು. 2022ರ ಜುಲೈ 28ರಂದು ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ನಡೆದ ಬಳಿಕ ಫಾಜಿಲ್ ಹತ್ಯೆ ಕೇಸ್ನಲ್ಲಿ ಸುಹಾಸ್ ಶೆಟ್ಟಿ ಬಂಧನ ಮಾಡಲಾಗಿತ್ತು. ಇನ್ನೋವಾ ಕಾರಿನಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದ ಸುಹಾಸ್ ಶೆಟ್ಟಿಯನ್ನು ಹಿಂಬಾಲಿಸಿಕೊಂಡು ಬಂದ ಮೀನಿನ ಟೆಂಪೋ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ದುಷ್ಕರ್ಮಿಗಳು ಇದ್ದರು ಎನ್ನಲಾಗ್ತಿದ್ದು, ಮೀನಿನ ಟೆಂಪೋದಲ್ಲಿ ಸುಹಾಸ್ ಶೆಟ್ಟಿ ಕಾರಿಗೆ ಡಿಕ್ಕಿ ಹೊಡೆದು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದ್ದು, ಮಂಗಳೂರಿನಲ್ಲೇ ಕೆಲವೇ ದಿನಗಳ ಹಿಂದೆ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಗುಂಪಹತ್ಯೆ ಮಾಡಲಾಗಿತ್ತು. ಅದಿನ್ನು ಹಸಿರಾಗಿ ಇರುವಾಗಲೇ ಸುಹಾಸ್ ಶೆಟ್ಟಿ ಹತ್ಯೆ ಮಾಡಲಾಗಿದೆ. ಗೃಹ ಸಚಿವ ಪರಮೇಶ್ವರ್ ಹಿಡಿತ ಕಳೆದುಕೊಂಡಿರುವ ಬಗ್ಗೆ ಗೃಹ ಇಲಾಖೆಯಲ್ಲೇ ಚರ್ಚೆಗಳು ನಡೆಯುತ್ತಿವೆ.
