ಕನ್ನಡದ ಈ ಗಾಧೆ ಮಾತು ಬಿಜೆಪಿ ಶಾಸಕ ಪ್ರೀತಂಗೌಡ ಅವರಿಗೆ ಅನ್ವಯ ಆಗುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನೋ ಮಾತಿನಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ. ಕಳೆದ ಉಂದೂವರೆ ವರ್ಷದ ಹಿಂದೆ ಸುದ್ದಿಗೋಷ್ಠಿ ಒಂದರಲ್ಲಿ ಹಾಸನಕ್ಕೂ ನೀವೇ ಬಂದು ಸ್ಪರ್ಧೆ ಮಾಡಿ, ನಿಮ್ಮ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರ್ತೇನೆ ಎಂದು ಪ್ರೀತಂಗೌಡ ಸವಾಲು ಹಾಕಿದ್ದರು. ಆ ಸವಾಲಿಗೆ ಉತ್ತರ ಕೊಡಲು ಜೆಡಿಎಸ್ ತಯಾರಿ ಮಾಡಿಕೊಳ್ತಿದೆ. ಜೆಡಿಎಸ್ ಈ ಮಾತನ್ನು ಇಷ್ಟೊಂದು ಪರಿಣಾಮಕಾರಿಯಾಗಿ ತೆಗೆದುಕೊಂಡು ಸವಾಲು ಸ್ವೀಕರಿಸ್ತಾರೆ ಎನ್ನುವುದು ಪ್ರೀತಂಗೌಡ ಅವರಿಗೆ ತಿಳಿದಿರಲಿಲ್ಲ, ಆದರೆ ಇದೀಗ ಪ್ರೀತಂಗೌಡ ವಿರುದ್ಧ ತೊಡೆ ತಟ್ಟಲೇಬೇಕು ಎನ್ನುವ ಹಠಕ್ಕೆ ಹೆಚ್.ಡಿ ರೇವಣ್ಣ ಕುಟುಂಬ ಬಂದಿದೆ. ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಎನ್ನುವಾಗಲೇ ರೇವಣ್ಣ ಹೊಸ ದಾಳ ಉರುಳಿಸಿದ್ದಾರೆ. ಈ ಮಾಹಿತಿ ಪ್ರೀತಂಗೌಡಗೆ ಪುಕಪುಕ ಎನ್ನುವಂತಾಗಿದೆ.
ಹಾಸನದಲ್ಲಿ ಭವಾನಿ ಬೇಡ, ನಾನೇ ಸ್ಪರ್ಧೆ ಮಾಡ್ತೇನೆ..!
ಹಾಸನ ರಾಜಕೀಯದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಹೊರ ಬೀಳುತ್ತಿದ್ದ ಹಾಗೆ, ಭವಾನಿ ರೇವಣ್ಣ ಸ್ಪರ್ಧೆ ಅನಿವಾರ್ಯತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ ಬಳಿಕ ರೇವಣ್ಣ ಮತ್ತೊಂದು ಹೊಸ ದಾಳ ಉರುಳಿಸಿದ್ದು, ಹಾಸನದಿಂದ ಭವಾನಿ ಸ್ಪರ್ಧೆ ಇಲ್ಲ, ನಾನೇ ಸ್ಪರ್ಧೆ ಮಾಡ್ತೇನೆ ಎಂದಿದ್ದಾರೆ. ಇದೇ ಕಾರಣಕ್ಕಾಗಿ ಹಾಸನ ಟಿಕೆಟ್ ಆಕಾಂಕ್ಷಿ ಸ್ವರೂಪ್ ಜೊತೆಗೂ ರೇವಣ್ಣ ಮಾತುಕತೆ ನಡೆಸಿದ್ದಾರೆ. ಸ್ವರೂಪ್ ತಾಯಿ ಹಾಗು ದಿವಂಗತ ಶಾಸಕ ಹೆಚ್.ಎಸ್ ಪ್ರಕಾಶ್ ಪತ್ನಿ ಜೊತೆಗೂ ಹೆಚ್.ಡಿ ರೇವಣ್ಣ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಹಾಸನದಲ್ಲಿ ಗೆಲ್ಲುವ ಅಭ್ಯರ್ಥಿ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡ್ತೀವಿ,
ಎಲ್ಲರೂ ಕುಳಿತು ಮಾತುಕತೆ ಮೂಲಕ ಇತ್ಯರ್ಥ ಮಾಡ್ತೀವಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಪ್ರೀತಂಗೌಡ ಹಾಗು ಭವಾನಿ ರೇವಣ್ಣ ಮುಖಾಮುಖಿ ಆಗಿದ್ದಾರೆ. ಪ್ರೀತಂಗೌಡ ಮಾತನಾಡುತ್ತ ನಿಂತಿದ್ದಾಗ ಕಾರ್ಯಕ್ರಮಕ್ಕೆ ಆಗಮಿಸಿದ ಭವಾನಿ ರೇವಣ್ಣ, ಆದರೂ ಒಬ್ಬರಿಗೊಬ್ಬರು ಮುಖ ನೋಡಲಿಲ್ಲ. ಆ ಬಳಿಕ ಮಾತನಾಡಿದ ಪ್ರೀತಂಗೌಡ ರೇವಣ್ಣ ವಿರುದ್ಧ ಗುಡುಗಿದ್ದಾರೆ.
ನನ್ನ ವಿರುದ್ಧ ಸ್ಪರ್ಧೆ ನಿರ್ಧಾರಕ್ಕೆ 18 ತಿಂಗಳು ಬೇಕಾಯ್ತಾ..?
![](https://pratidhvani.com/wp-content/uploads/2023/02/Preetham-J.-Gowda.jpg)
ಹಾಸನದಲ್ಲಿ ರೇವಣ್ಣ ಸ್ಪರ್ಧೆ ಮಾಡುವ ಬಗ್ಗೆ ಶಾಸಕ ಪ್ರೀತಂಗೌಡ ಮಾತನಾಡಿದ್ದು, ನಾನು 18 ತಿಂಗಳ ಹಿಂದೆ ಹಾಕಿದ್ದ ಸವಾಲಿಗೆ ಈಗ ಪ್ರತಿಕ್ರಿಯಿಸಿದ್ದಾರೆ. ಹಾಸನದಿಂದ ಟಿಕೆಟ್ ಕೊಟ್ಟರೆ ನಿಲ್ತಿನಿ ಅಂದಿದ್ದಾರೆ. ಪಕ್ಷ ತೀರ್ಮಾನ ಮಾಡಿದ್ರೆ ಡೆಲ್ಲಿಯಿಂದ ಬೇಕಿದ್ರು ನಿಲ್ತಿನಿ ಅಂದಿದ್ದಾರೆ. ವಿಧಾನಸಭಾ ಚುನಾವಣೆ ನಡೆಯುತ್ತಿರೋದು ಡೆಲ್ಲಿಯಲ್ಲಲ್ಲ, ಕರ್ನಾಟಕದಲ್ಲಿ ಎಂದು ರೇವಣ್ಣಗೆ ತಿವಿದಿದ್ದಾರೆ. ರೇವಣ್ಣ ವಿರುದ್ಧ 50 ಸಾವಿರ ಅಂತರದಲ್ಲಿ ಗೆಲ್ತಿನಿ ಎಂದು ಈ ಹಿಂದೆ ಹೇಳಿದ್ದೆ. ನನ್ನ ಮಾತಿಗೆ ಈಗಲೂ ಬದ್ಧ ಎಂದಿದ್ದಾರೆ ಪ್ರೀತಂಗೌಡ. ನಾನು ನಿನ್ನೆ ಪೆನ್ಷನ್ ಮೊಹಲ್ಲಾಗೆ ಹೋಗಿದ್ದಾಗ ಜನರು ಹೇಳಿದ್ರು. ಸೋಲೋಕು ಇಷ್ಟೊಂದು ಕಾಂಪಿಟೇಷನ್ ಇರುತ್ತಾ ಅಂತ ಜನರು ಕೇಳಿದ್ರು. ಅಣ್ಣ ಹೊಳೆನರಸೀಪುರದ ಟಿಕೆಟ್ ಬಗ್ಗೆ ಚರ್ಚೆ ನಡೆದರೆ ಅರ್ಥ ಇದೆ, ಆದ್ರೆ ಹಾಸನ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಾನು ಹೊಸದಾಗಿ ರಾಜಕೀಯ ಮಾಡ್ತಿದ್ರೆ ಯೋಚನೆ ಮಾಡಬಹುದಿತ್ತು. ನಾನು ನಿರಂತರವಾಗಿ ಐದು ವರ್ಷದಿಂದ ಹಾಸನ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡ್ತೇನೆ ಎಂದಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡಗೆ ಮುಳ್ಳಿನ ಹಾದಿ..!
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯದ ನಡುವೆ ಪ್ರೀತಂಗೌಡ ಗೆದ್ದು ಬಂದಿದ್ದರು. ಆದರೆ ಜೆಡಿಎಸ್ ಪಕ್ಷದ ವಿರುದ್ಧ ಪದೇ ಪದೇ ತೊಡೆ ತಟ್ಟಿದ ಪ್ರೀತಂಗೌಡ, ಮಾತು ಶುರು ಮಾಡಿದರೆ ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ತಾಕತ್ತಿದ್ದರೆ ಹಾಸನ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಲಿ, ನನ್ನ ಕ್ಷೇತ್ರದಲ್ಲೂ ರೇವಣ್ಣನೇ ಅಧಿಕಾರ ಚಲಾಯಿಸಲಿ ಎಂದು ಕಿಡಿಕಾರಿದ್ದರು. ವಿಮಾನ ನಿಲ್ದಾಣದ ವಿಚಾರ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿತ್ತು. ಇದೀಗ ಹಾಸನ ಕ್ಷೇತ್ರ ರಾಜಕೀಯದಲ್ಲಿ ರಂಗು ಪಡೆದುಕೊಂಡಿದ್ದು, ಈ ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಕಠಿಣವಾಗಿದೆ. ಆದರೆ ಹೆಚ್.ಡಿ ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರ ಲೀಡ್ನಲ್ಲಿ ಗೆಲುವು ಎಂದು ವಿಶ್ವಾಸದಿಂದಲೇ ಹೇಳಿದ್ದೇನೆ. ನನ್ನ ಕ್ಷೇತ್ರಕ್ಕೆ ಬನ್ನಿ ಸ್ವಾಮಿ ಅಂತಾ ಕರೆದ ಮೇಲೆ ವಿಶ್ವಾಸ ಇಲ್ಲದೆ ಹೇಳ್ತಿನಾ..? ಅವರು ಬರಲಿ ಅಂತಾನೇ ಹೇಳ್ತಿದಿನಿ, ಅವರು ಅರ್ಧಂಬರ್ಧ ಹೇಳ್ತಿದಾರೆ. ಅವರು ಬಹಳ ಶಕ್ತಿವಂತರು, ಪ್ರಧಾನಿ ಆಗಿದ್ದ ಕುಟುಂಬದವರು. ಮಾಜಿ ಪ್ರಧಾನಿ ಅವರ ಮಗ, ನಾಲ್ಕು ಬಾರಿ ಸಚಿವರಾಗಿದ್ದವರು. ಒಬ್ಬ ಸಾಮಾನ್ಯ ಶಾಸಕ ಸವಾಲು ಹಾಕಿದ್ರೆ ಉತ್ತರ ಕೊಡೊಕೆ 18 ತಿಂಗಳು ತಗೊಂಡಿದ್ದಾರೆ. ಎಷ್ಟು ದೇವಸ್ಥಾನಗಳಿಗೆ ಹೋಗಿ ಬಂದಿದಾರೊ..? ಎಷ್ಟು ಸರ್ವೆ ಮಾಡಿಸಿರಬೇಕು..! ಎಂದು ವ್ಯಂಗ್ಯವಾಡಿದ್ದಾರೆ.