ಕರ್ನಾಟಕದಲ್ಲಿ ಸಿನಿಮ ನಟರನ್ನು ಬಳಸಿ ಚುನಾವಣೆ ಗೆಲ್ಲಬೇಕೆನ್ನುವ ಕಲ್ಪನೆ ತುಂಬಾ ಹಳೆಯದು. ಬಹು ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ವರನಟ ಡಾ. ರಾಜಕುಮಾರ ಅವರನ್ನು ಬಳಸಿ ಚುನಾವಣೆ ಗೆಲ್ಲುವ ಒಂದು ವಿಫಲ ಪ್ರಯತ್ನ ಮಾಡಿದ್ದರು. ಡಾ. ರಾಜಕುಮಾರ್ ಸ್ಪಷ್ಟವಾಗಿ ಇದನ್ನು ನಿರಾಕರಿಸಿದ್ದರು.

ಏಕೆಂದರೆ ಡಾ. ರಾಜ್ ಅವರಿಗೆ ಕರ್ನಾಟಕದ ಜನರ ಪ್ರಭಬುದ್ಧತೆಯ ಕುರಿತು ಚನ್ನಾಗಿ ತಿಳಿದಿತ್ತು. ಕನ್ನಡಿಗರು ನಟರನ್ನು ಬೆಂಬಲಿಸಿದಂತೆ ನಟ-ರಾಜಕಾರಣಿಯನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲ ಎನ್ನುವ ಸತ್ಯ ಅವರು ಅರಿತಿದ್ದರು. ಇದಕ್ಕೆ ಅಪವಾದ ಎನ್ನುವಂತೆ ಹಳೆ ಮೈಸೂರು ಭಾಗದಲ್ಲಿ ನಟ ಅಂಬರೀಷ್ ಮುಂತಾದವರನ್ನು ರಾಜಕಾರಣಿಗಳಾಗಿ ಜನರು ಬೆಂಬಲಿಸಿದ್ದು ಮಾತ್ರ ಜಾತಿ ಕಾರಣಕ್ಕಾಗಿ ಎನ್ನುವ ಸಂಗತಿ ನಾವು ನೆನಪಿಡಬೇಕಿದೆ.
ಇಷ್ಟು ಹಳೆಯದಾದ ಹಾಗು ಸಂಪೂರ್ಣವಾಗಿ ವಿಫಲವಾಗಿರುವ ಸಂಗತಿಯನ್ನು ಬಿಜೆಪಿ ೫೦ ವರ್ಷಗಳ ನಂತರ ಮತ್ತೆ ಪ್ರಯತ್ನಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿತು. ಸುದೀಪ್ ಎನ್ನುವ ವ್ಯವಹಾರ ಚತುರ ಹಾಗು ಸೆಲ್ಫ್ ಪ್ರಮೋಟಿಂಗ್ ನಟನೊಬ್ಬನ ಮೂಲಕ ಮರಳಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಯತ್ನವನ್ನು ಕನ್ನಡಿಗರು ಯಾವ ಮುಲಾಜೂ ಇಲ್ಲದೆ ವಿಫಲಗೊಳಿಸಿದ್ದು ಕನ್ನಡಿಗರ ಮನಸ್ಥಿತಿ ಬದಲಾಗದ್ದಕ್ಕೆ ಸಾಕ್ಷಿಯಾಗಿದೆ.
~ಡಾ. ಜೆ ಎಸ್ ಪಾಟೀಲ.