
ಮನೆಯಲ್ಲಿ ಹೆಂಡತಿ ಮಗಳ ಕಾಟವನ್ನು ತಾಳಲಾರದೆ ನಿವೃತ್ತ ಡಿಜಿಪಿ ಓಂಪ್ರಕಾಶ್, ಮನೆಯನ್ನೇ ಬಿಟ್ಟು ಹೋಗಿದ್ದರು ಎನ್ನುವುದು ಎಫ್ಐಆರ್ನಲ್ಲಿ ದಾಖಲಾಗಿರುವ ಮಾಹಿತಿಯಿಂದ ತಿಳಿದು ಬರ್ತಿದೆ. ನಿವೃತ್ತ ಡಿಜಿಪಿ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ನೀಡಿರುವ FIR ಪ್ರತಿ ಪ್ರತಿಧ್ವನಿಗೆ ಲಭ್ಯವಾಗಿದ್ದು, ವಾರದ ಹಿಂದೆ ಬೇಸತ್ತು ಮನೆಯಿಂದ ಕಾಲ್ಕಿತ್ತಿದ್ದರು ಎನ್ನುವುದು ಗೊತ್ತಾಗ್ತಿದೆ.

‘ನನ್ನ ತಾಯಿಯಾದ ಶ್ರೀಮತ. ಪಲ್ಲವಿ ಅವರು ನಮ್ಮ ತಂದೆ ನಿವೃತ್ತ ಡಿ.ಜಿ ಮತ್ತು ಐ.ಜಿ.ಪಿ ಆದ ಓಂ ಪ್ರಕಾಶ್ ಅವರಿಗೆ ಕಳೆದ ಒಂದು ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ನನ್ನ ತಂದೆಯವರು ವಾರದ ಹಿಂದೆ ಅವರ ಸಹೋದರಿ ಸರಿತಾ ಕುಮಾರಿ ಅವರ ಮನೆಗೆ ಹೋಗಿ ವಾಸವಿದ್ದರು. ಆ ನಂತರ ನನ್ನ ತಂಗಿ ಕೃತಿ 2 ದಿನಗಳ ಹಿಂದೆ ಸರಿತಾ ಕುಮಾರಿ ಅವರ ಮನೆಗೆ ಹೋಗಿ ನಮ್ಮ ತಂದೆ ಓಂ ಪ್ರಕಾಶ್ ಅವರನ್ನು ಒತ್ತಾಯ ಪೂರ್ವಕವಾಗಿ ಮರಳಿ ಮನೆಗೆ ಬರುವಂತೆ ಪೀಡಿಸಿ ಕರೆದುಕೊಂಡು ಬಂದಿದ್ದಳು ಎಂದು ಉಲ್ಲೇಖಿಸಿದ್ದಾರೆ.

ಭಾನುವಾರ ಸಂಜೆ ಸುಮಾರು 5 ಗಂಟೆಗೆ ನಾನು ದೊಮ್ಮಲೂರಿನ ಕರ್ನಾಟಕ ಗಾಲ್ಫ್ ಅಸೋಸಿಯಷನ್ಗೆ ಹೋಗಿದ್ದಾಗ, ನಮ್ಮ ಪಕ್ಕದ ಮನೆಯವರಾದ ಜಯಶ್ರೀ ಶ್ರೀಧರನ್ ಕರೆಮಾಡಿ ನಿಮ್ಮ ತಂದೆ ಓಂ ಪ್ರಕಾಶ್ ಅವರ ದೇಹ ಕೆಳಗಡೆ ಬಿದ್ದಿರುತ್ತದೆ ಎಂದು ತಿಳಿಸಿದರು. ತಕ್ಷಣ ನಾನು ಸುಮಾರು 5.45ಕ್ಕೆ ಮನೆಗೆ ಬಂದು ನೋಡಿದಾಗ, ಮನೆಯಲಿ ಪೊಲೀಸರು ಮತ್ತು ಸಾರ್ವಜನಿಕರು ಇದ್ದರು. ನಮ್ಮ ತಂದೆಯವರ ತಲೆ ಮತ್ತು ಮೈತುಂಬ ರಕ್ತವಾಗಿತ್ತು.
ನಮ್ಮ ತಂದೆಯವರ ದೇಹದ ಪಕ್ಕದಲ್ಲಿ ಹೊಡೆದಿರುವ ಬಾಟಲ್ ಮತ್ತು ಚಾಕು ಇದ್ದವು. ನಂತರ ನಮ್ಮ ತಂದೆಯವರ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಮ್ಮ ತಾಯಿ ಪಲ್ಲವಿ, ತಂಗಿ ಕೃತಿ ಅವರು ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ನಮ್ಮ ತಂದೆಯ ಜೊತೆಗೆ ಜಗಳ ಮಾಡುತ್ತಿದ್ದರು. ನಮ್ಮ ತಾಯಿ ಪಲ್ಲವಿ ಮತ್ತು ತಂಗಿ ಕೃತಿಅರವರು ನಮ್ಮ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಶಂಕೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಂದರೆ ಸಾವಿನ ಭಯದಲ್ಲೇ ನಿವೃತ್ತ ಡಿಜಿಪಿ ಓಂಪ್ರಕಾಶ್ ತನ್ನ ತಂಗಿಯ ಮನೆಯಲ್ಲಿ ಹೋಗಿ ವಾಸವಾಗಿದ್ದರು. ಆದರೆ ಕೊಲೆ ಮಾಡುವ ಉದ್ದೇಶದಿಂದಲೇ ಮಗಳು ಕೃತಿ ಸೋದರ ಅತ್ತೆ ಮನೆಯಿಂದ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿದ್ದಾಳೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಒಟ್ಟಾರೆ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರ ತಂದೆಗೆ 98 ವರ್ಷ ಆಗಿದ್ದು, ಬಿಹಾರದಲ್ಲಿ ವಾಸವಿದ್ದಾರೆ. ತಾನು ಕೊನೆಯ ದಿನಗಳನ್ನು ಎಣಿಸುವಾಗ ತನ್ನ ಮಗನ ಕೊಲೆಯ ವಿಚಾರ ಎಷ್ಟು ನೋವು ತಂದಿರಬೇಕು ಅಲ್ಲವೇ..?