‘ಊರು ಇದ್ದಲ್ಲಿ ———– ಇರುತ್ತೆ’ ಗಾದೆ ಮಾತನ್ನು ಬಳಸಿ ಮಾತನಾಡಿದ್ದ ನಟ ಉಪೇಂದ್ರ ( Actor upendra ) ದಲಿತ ( Dalit ) ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಹತ್ತಾರು ಕಡೆ ಪೊಲೀಸ್ ( Police ) ಠಾಣೆಗೆ ದೂರು ನೀಡಲಾಗಿದೆ. ನಟ ಉಪೇಂದ್ರಗೆ C K ಅಚ್ಚುಕಟ್ಟು ಪ್ರದೇಶ ಠಾಣೆಯಲ್ಲಿ FIR ದಾಖಲು ಆದ್ಮೇಲೆ ಉಪೇಂದ್ರ ಮನೆಗೆ ಭೇಟಿ ನೀಡಿದ್ದ ಎಸಿಪಿ ನಾಗರಾಜ್ ( ACP Nagaraj ), ನಟ ಉಪೇಂದ್ರರನ್ನ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಹೇಳಿಕೆ ನೀಡಿದ್ದು ಯಾವ ಸಂದರ್ಭ, ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದು ಅನ್ನೋದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಇದ್ರ ಬೆನ್ನಲ್ಲೇ FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ನಟ ಉಪೇಂದ್ರ, ಹೈಕೋರ್ಟ್ನಿಂದ (High court ) ಸ್ಟೇ ( Stay ) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
![](https://pratidhvani.com/wp-content/uploads/2023/08/UPP_05-1024x897.jpg)
ಉಪೇಂದ್ರ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್..!
![](https://pratidhvani.com/wp-content/uploads/2023/08/Summane-1024x768.jpeg)
ಉಪೇಂದ್ರ ನೀಡಿದ್ದ ಹೇಳಿಕೆ ಭಾರೀ ವಿವಾದ ಸ್ವರೂಪ ಪಡೆದುಕೊಳ್ತಿದ್ದ ಹಾಗೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ವಿವಾದದ ಬೆನ್ನಲ್ಲೇ ನಟ ಉಪೇಂದ್ರ ಮನೆಗೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಉಪೇಂದ್ರ ಅವರ ಹೊಸ ಮನೆಗೆ ಭದ್ರತೆ ನೀಡಲಾಗಿದೆ. KSRP ಪೊಲೀಸ್ರು ಹಾಗು ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೈಕೋರ್ಟ್ ಆದೇಶದ ಬಳಿಕ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ನಟ ಉಪೇಂದ್ರ, ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ , ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ, ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ, ನನಗೆ ಕೊಡೆ ಎಂದು ವ್ಯಂಗ್ಯವಾಗಿ ಧನ್ಯವಾದ ಹೇಳಿದ್ದಾರೆ.
![](https://pratidhvani.com/wp-content/uploads/2023/08/1200px-High_Court_of_Karnataka_Bangalore_MMK-1024x433.jpg)
ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಹೈಕೋರ್ಟ್ ಹೇಳಿದ್ದೇನು..?
ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ವೇಳೆ ವಕೀಲರ ವಾದ ಆಲಿಸಿದ ಬಳಿಕ ಗಾದೆ ಮಾತನ್ನು ಬಳಸಿದ್ದಾರೆ, ಅದಕ್ಕೆ ಇಷ್ಟೊಂದು ಎಫ್ಐಆರ್ ದಾಖಲು ಆಗ್ತಿರೋದು ಯಾಕೆ..? ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಉಪೇಂದ್ರ ಪರ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದ್ರು. ವಾದವನ್ನು ಮನ್ನಿಸಿದ ಹೈಕೋರ್ಟ್ ಉಪೇಂದ್ರ ವಿರುದ್ಧ ದಾಖಲಾಗಿದ್ದ FIRಗೆ ಮಧ್ಯಂತರ ತಡೆ ನೀಡಿದೆ. ಹೈಕೋಟ್ ಕಾನೂನು ರೀತ್ಯ ಎಫ್ಐಆರ್ಗೆ ಮಧ್ಯಂತರ ತಡೆ ನೀಡಿ ಆದೇಶ ಮಾಡಿದೆ. ಆದರೆ ಉಪೇಂದ್ರ ಉದ್ದೇಶಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ರಾಜಕೀಯ ಬೇಡ ಪ್ರಜಾಕೀಯ ಎಂದಿದ್ದ ಉಪೇಂದ್ರ..!
![](https://pratidhvani.com/wp-content/uploads/2023/08/Home-Banner-1024x435.png)
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ವ್ಯವಸ್ಥೆ ಸರಿಯಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಕೀಯವೇ ಇರಬೇಕು ಎಂದು ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದ ಉಪೇಂದ್ರ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಅಭ್ಯರ್ಥಿಗಳು ಗೆಲ್ಲದೆ ಇದ್ದರೂ ಕೆಲವೊಂದಿಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ ಕೊರೊನಾ ಕಾಲದಲ್ಲಿ ಕೇವಲ ಬ್ರಾಹ್ಮಣ ಸಮುದಾಯದ ಅರ್ಚಕರಿಗೆ ಆಹಾರದ ಕಿಟ್ ಕೊಡುವ ಮೂಲಕ ಜಾತಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದ ಉಪೇಂದ್ರ, ಇದೀಗ ಮತ್ತೊಮ್ಮೆ ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಜಾಕೀಯ ಅನ್ನೋ ಉಪೇಂದ್ರ ಉದ್ದೇಶ ಸೊರಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಕೃಷ್ಣಮಣಿ